ಸಿನಿಮಾಗಳಲ್ಲಿ ವಿಲನ್, ನಿಜ ಜೀವನದಲ್ಲಿ ‘ಹೀರೋ’ ಈ ನಟ
Sayaji Shinde movie: ಸ್ಟಾರ್ ನಟರುಗಳು ವರ್ಷದ ಒಂದು ದಿನ ರಕ್ತದಾನ, ಅನ್ನದಾನ ಇಂಥಹಾ ಕೆಲಸಗಳನ್ನು ಅಭಿಮಾನಿಗಳಿಂದ ಮಾಡಿಸುತ್ತಾರೆ ಅದರ ಚಿತ್ರಗಳನ್ನು ಹಂಚಿಕೊಂಡು ಭರ್ಜರಿ ಪ್ರಚಾರ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ನಟ ಆ ಸ್ಟಾರ್ ಹೀರೋಗಳಿಗಿಂತಲೂ ಬಹಳ ಭಿನ್ನ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ನಟ ಮಾಡಿರುವ ಕೆಲಸದಿಂದ ನಿಜ ಬದುಕಿನಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಯಾರದು?

ಸಿನಿಮಾನಲ್ಲಿ (Cinema) ದೊಡ್ಡ ಹೆಸರು ಮಾಡಿದ ಸ್ಟಾರ್ ನಟರುಗಳು ತಮ್ಮ ಅಭಿಮಾನಿ ಸಂಘಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ವರ್ಷದ ಒಂದು ದಿನ ರಕ್ತದಾನ, ಅನ್ನದಾನ ಇಂಥಹಾ ಕೆಲಸಗಳನ್ನು ಮಾಡಿಸುತ್ತಾರೆ ಅದರ ಚಿತ್ರಗಳನ್ನು ಹಂಚಿಕೊಂಡು ಭರ್ಜರಿ ಪ್ರಚಾರ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ನಟ ಆ ಸ್ಟಾರ್ ಹೀರೋಗಳಿಗಿಂತಲೂ ಬಹಳ ವಿಭಿನ್ನ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ನಟ ಮಾಡಿರುವ ಕೆಲಸದಿಂದ ನಿಜ ಬದುಕಿನಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಅವರೇ ಖ್ಯಾತ ನಟ ಸಯ್ಯಾಜಿ ಶಿಂಧೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಸುಮಾರು 15 ವರ್ಷಗಳಿಗೂ ಹೆಚ್ಚು ಸಮಯದಿಂದ ನಟಿಸುತ್ತಾ ಬಂದಿರುವ ಸಯ್ಯಾಜಿ ಶಿಂಧೆ. ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿಯೇ ಹೆಚ್ಚು ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಇವರು ಅಪ್ಪಟ ಹೀರೋ. ಇತರೆ ನಟರು, ರಕ್ತದಾನ, ಅನ್ನದಾನ ಮಾಡುತ್ತಾ ಪ್ರಚಾರ ಪಡೆಯುತ್ತಿದ್ದರೆ, ಸಯ್ಯಾಜಿ ಶಿಂಧೆ, 6.50 ಲಕ್ಷ ಸಸಿಗಳನ್ನು ನೆಟ್ಟು ದೊಡ್ಡ ಕಾಡನ್ನೇ ಸೃಷ್ಟಿ ಮಾಡಿದ್ದಾರೆ. ಅದೂ ತಮ್ಮ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು.
ಸಯ್ಯಾಜಿ ಶಿಂಧೆ ಅವರ ತಾಯಿ ನಿಧನ ಹೊಂದುವಾಗ ಅವರ ಹೆಸರಲ್ಲಿ ಅರಣ್ಯ ಬೆಳೆಸುವುದಾಗಿ ಅವರಿಗೆ ಮಾತು ಕೊಟ್ಟಿದ್ದರಂತೆ. ‘ನಿಮ್ಮ ಹೆಸರಲ್ಲಿ 5000 ದೇಸೀಯ ಗಿಡಗಳನ್ನು ನೆಡುತ್ತೇನೆ’ ಎಂದಿದ್ದರಂತೆ. ಆದರೆ ಸಯ್ಯಾಜಿ ಅವರು 5000 ಗಿಡಗಳಿಗೆ ತಮ್ಮ ಪರಿಸರ ಪ್ರೇಮವನ್ನು ಸೀಮಿತಗೊಳಿಸಲಿಲ್ಲ ಬದಲಿಗೆ ಮಹಾರಾಷ್ಟ್ರದ 29 ಸ್ಥಳಗಳಲ್ಲಿ 6.50 ಲಕ್ಷ ಗಿಡಗಳನ್ನು ಈ ವರೆಗೆ ನೆಡಿಸಿದ್ದಾರೆ. ತಮ್ಮ ಸ್ವಂತ ಖರ್ಚಿನ ಮೂಲಕ. ಸಯ್ಯಾಜಿ ಶಿಂಧೆ ಅವರ ಈ ಸಾಹಸದಿಂದಾಗಿ ಅವರ ಕಾಡು ಇದೀಗ ಮಹಾರಾಷ್ಟ್ರದ ದೊಡ್ಡ ಮಾನವ ನಿರ್ಮಿತ ಅರಣ್ಯ ಎನಿಸಿಕೊಂಡಿದೆ. ಇದಕ್ಕೆ ‘ಸಹ್ಯಾದ್ರಿ ದೇವರಾಯ್’ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್ ‘ರಾಕಾ’ ಸಿನಿಮಾ ಸೇರಿದ ಮತ್ತೊಬ್ಬ ನಟಿ: ಯಾರೀಕೆ ಫೆಮಿನಾ ಜಾರ್ಜ್?
ಸಹ್ಯಾದ್ರಿ ದೇವರಾಯ್ ಎಂಬುದು ಕೇವಲ ಸಯ್ಯಾಜಿ ಶಿಂಧೆ ಅವರ ‘ಹವ್ಯಾಸ’ವಾಗಿ ಉಳಿದಿಲ್ಲ ಈಗ ಅದು ಇಡೀ ಮಹಾರಾಷ್ಟ್ರದಲ್ಲಿ ಪರಿಸರ ಚಳವಳಿಯಾಗಿ ಮಾರ್ಪಟ್ಟಿದೆ. ‘ಸಹ್ಯಾದ್ರಿ ದೇವರಾಯ್’ ಹೆಸರಿನಡಿ ಸಾವಿರಾರು ಪರಿಸರ ಪ್ರೇಮಿಗಳನ್ನು ನಟ ಸಯ್ಯಾಜಿ ಶಿಂಧೆ ಒಗ್ಗೂಡಿಸಿದ್ದು, ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಗೆ ಹೋಗಿ ಇವರು ದೇಶೀಯ ತಳಿಯ ಗಿಡಗಳನ್ನು ನೆಡುವುದು ಮಾತ್ರವೇ ಅಲ್ಲದೆ, ಅವುಗಳ ಉಳಿವಿಗೆ ಅವಿರತ ಶ್ರಮಿಸುತ್ತಿದ್ದಾರೆ. ಸ್ಥಳೀಯ ಗ್ರಾಮವಾಸಿಗಳ ನೆರವು ಪಡೆದುಕೊಂಡು ಗಿಡಗಳಿಗೆ ನೀರು ನೀಡುವುದು, ಅವುಗಳನ್ನು ಇತರೆ ಪ್ರಾಣಿಗಳಿಂದ ಕಾಪಾಡುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಈ ವರೆಗೆ ಸುಮಾರು 6.50 ಲಕ್ಷ ಗಿಡಗಳನ್ನು ‘ಸಹ್ಯಾದ್ರಿ ದೇವರಾಯ್’ ಚಳವಳಿ ಅಡಿಯಲ್ಲಿ ನಟ ಸಯ್ಯಾಜಿ ಶಿಂಧೆ ಹಾಗೂ ತಂಡ ನೆಟ್ಟಿದೆ.
ಸಯ್ಯಾಜಿ ಶಿಂಧೆ, ಮೂಲತಃ ಮಹಾರಾಷ್ಟ್ರದವರಾದರೂ ದಕ್ಷಿಣದ ಸಿನಿಮಾಗಳಲ್ಲಿ ಅತಿ ಹೆಚ್ಚು ನಟಿಸಿದ್ದಾರೆ. ಕನ್ನಡದ ‘ವೀರ ಕನ್ನಡಿಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಯ್ಯಾಜಿ, ತೆಲುಗಿನಲ್ಲಿ ಬಹುತೇಕ ಎಲ್ಲ ಸ್ಟಾರ್ ನಟ, ನಿರ್ದೇಶಕರುಗಳ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಹಿಂದಿ, ಮರಾಠಿ, ಭೋಜ್ಪುರಿ, ಬೆಂಗಾಲಿ, ಮಲಯಾಳಂ, ತಮಿಳು, ಇಂಗ್ಲೀಷ್ ಇನ್ನೂ ಕೆಲ ಭಾಷೆಗಳ ಸಿನಿಮಾಗಳಲ್ಲಿ ಸಯ್ಯಾಜಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




