‘ಆದಿಪುರುಷ್​’ ಸಿನಿಮಾದ ಆಂಜನೇಯ ಪಾತ್ರಧಾರಿ ಭೇಟಿ ಮಾಡಿದ ರಾಜಮೌಳಿ; ಕಾರಣ?

|

Updated on: May 27, 2024 | 10:52 PM

ಮರಾಠಿ ಚಿತ್ರರಂಗದ ಖ್ಯಾತ ನಟ ದೇವದತ್ತ ನಾಗೆ ಅವರನ್ನು ನಿರ್ದೇಶಕ ರಾಜಮೌಳಿ ಭೇಟಿ ಮಾಡಿದ್ದಾರೆ. ‘ಎಸ್​ಎಸ್​ಎಂಬಿ 29’ ಸಿನಿಮಾದ ಸಲುವಾಗಿಯೇ ಈ ಭೇಟಿ ನಡೆದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ದೇವದತ್ತ ನಾಗೆ ಮತ್ತು ರಾಜಮೌಳಿ ಅವರು ಜೊತೆಗಿರುವ ಫೋಟೋ ವೈರಲ್​ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಆದಿಪುರುಷ್​’ ಸಿನಿಮಾದ ಆಂಜನೇಯ ಪಾತ್ರಧಾರಿ ಭೇಟಿ ಮಾಡಿದ ರಾಜಮೌಳಿ; ಕಾರಣ?
ದೇವದತ್ತ ನಾಗೆ, ರಾಜಮೌಳಿ
Follow us on

ನಿರ್ದೇಶಕ ರಾಜಮೌಳಿ (SS Rajamouli) ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಮಹೇಶ್​ ಬಾಬು (Mahesh Babu) ಜೊತೆ ಅವರು ಹೊಸ ಸಿನಿಮಾ ಮಾಡುವುದು ಗೊತ್ತೇ ಇದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈಗ ಅವರು ಮರಾಠಿಯ ಖ್ಯಾತ ನಟ ದೇವದತ್ತ ನಾಗೆ ಜೊತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಅಭಿಮಾನಿಗಳಿಗೆ ಕೌತುಕ ಮೂಡಿದೆ. ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾದಲ್ಲಿ ದೇವದತ್ತ ನಾಗೆ (Devdatta Nage) ಅವರು ಆಂಜನೇಯನ ಮಾತ್ರ ಮಾಡಿದ್ದರು. ಆ ಪಾತ್ರದಿಂದ ಅವರ ಜನಪ್ರಿಯತೆ ಹೆಚ್ಚಾಯಿತು.

ರಾಜಮೌಳಿ ಮತ್ತು ಮಹೇಶ್​ ಬಾಬು ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ‘ಎಸ್​ಎಸ್​ಎಂಬಿ 29’ ಎಂದು ತಾತ್ಕಾಲಿಕವಾಗಿ ಅದನ್ನು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಜೊತೆ ಯಾರೆಲ್ಲ ನಟಿಸುತ್ತಾರೆ ಎಂಬುದು ಕೂಡ ಬಹಿರಂಗ ಆಗಿಲ್ಲ. ಸದ್ಯಕ್ಕೆ ರಾಜಮೌಳಿ ಅವರು ಪಾತ್ರವರ್ಗದ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಹೊಸ ಸಿನಿಮಾ ಬಗೆಗಿನ ದೊಡ್ಡ ಗಾಸಿಪ್​ಗೆ ಆರಂಭದಲ್ಲೇ ಅಂತ್ಯ ಹಾಡಿದ ನಿರ್ಮಾಪಕರು

ದೇವದತ್ತ ನಾಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ನಿರ್ದೇಶಕ ರಾಜಮೌಳಿ ಅವರನ್ನು ಭೇಟಿಯಾದ ಈ ಕ್ಷಣ ತುಂಬ ವಿಶೇಷವಾದದ್ದು ಎಂದು ಅವರು ಬರೆದುಕೊಂಡಿದ್ದಾರೆ. ಈ ಭೇಟಿಗಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕಾರಣ ಇಲ್ಲದೇ ಈ ಭೇಟಿ ನಡೆದಿರಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಸುದ್ದಿ ಹೊರಬರಲಿ ಎಂದು ಫ್ಯಾನ್ಸ್​ ಕಾದಿದ್ದಾರೆ.

ಮರಾಠಿ ಕಿರುತೆರೆ ಮತ್ತು ಸಿನಿಮಾದಲ್ಲಿ ದೇವದತ್ತ ನಾಗೆ ಅವರು ಜನಪ್ರಿಯತೆ ಪಡೆದಿದ್ದಾರೆ. ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ನಟನೆ ಮಾತ್ರವಲ್ಲದೇ ಕಟ್ಟುಮಸ್ತಾದ ದೇಹದ ಕಾರಣದಿಂದಲೂ ಅವರು ಗಮನ ಸೆಳೆದಿದ್ದಾರೆ. ‘ಆದಿಪುರುಷ್​’ ಸಿನಿಮಾದಲ್ಲಿ ಆಂಜನೇಯನ ಪಾತ್ರ ಸಿಕ್ಕಾಗ ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ಆದರೆ ಆ ಸಿನಿಮಾದಲ್ಲಿ ಅವರನ್ನು ಸರಿಯಾಗಿ ತೋರಿಸಿಲ್ಲ ಎಂದು ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದರು. ಅವರ ಪ್ರತಿಭೆಗೆ ತಕ್ಕಂತಹ ಪಾತ್ರವನ್ನು ರಾಜಮೌಳಿ ನೀಡಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.