ಬಿಗ್​ಬಾಸ್ ಸೀಸನ್ 10ರ ಮೊದಲ ಕ್ಯಾಪ್ಟನ್ ಆಯ್ಕೆ

Bigg Boss 10: ಬಿಗ್​ಬಾಸ್ ಕನ್ನಡ 10ನೇ ಸೀಸನ್​ನ ಮೊದಲ ನಾಮಿನೇಷನ್ ನಿನ್ನೆ ನಡೆದಿದ್ದರೆ ಮೊದಲ ನಾಯಕನ ಆಯ್ಕೆ ಇಂದು ನಡೆಯಿತು. ಬಿಗ್​ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಯಾರಾದರು?

ಬಿಗ್​ಬಾಸ್ ಸೀಸನ್ 10ರ ಮೊದಲ ಕ್ಯಾಪ್ಟನ್ ಆಯ್ಕೆ
Follow us
|

Updated on: Oct 11, 2023 | 11:24 PM

ಬಿಗ್​ಬಾಸ್ ಸೀಸನ್ 10ರ (Bigg Boss Kannada) ಮೊದಲ ನಾಮಿನೇಷನ್ ನಿನ್ನೆ ನಡೆದು ಸ್ಪರ್ಧಿಗಳೆಲ್ಲ ಇನ್ನೂ ಅದೇ ಚರ್ಚೆ, ವಾಗ್ವಾದದಲ್ಲಿರುವಾಗಲೇ ಈ ಸೀಸನ್​ನ ಮೊದಲ ಕ್ಯಾಪ್ಟನ್ ಆಯ್ಕೆ ನಡೆದಿದೆ. ನಿರೀಕ್ಷಿತ ಸ್ಪರ್ಧಿಗಳ ಬದಲಿಗೆ ಅನಿರೀಕ್ಷಿತ ಸ್ಪರ್ಧಿ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನಾಯಕನ ಆಯ್ಕೆಗೆ ಮುಂಚೆ ಯಥಾವತ್ತು ಹಲವು ಡ್ರಾಮಾ, ವಾಗ್ವಾದಗಳು ಮನೆಯಲ್ಲಿ ನಡೆದವು. ನಾಯಕ ಆಯ್ಕೆ ಆದ ಬಳಿಕವೂ ಸಹ ನಾಯಕನಿಗೆ ಮೊದಲಲ್ಲೇ ಬಹಳ ಕಠಿಣವಾದ ನಿರ್ಣಯ ತೆಗೆದುಕೊಳ್ಳುವ ಸನ್ನಿವೇಶ ಒದಗಿ ಬಂದಿದೆ.

ಅಸಮರ್ಥರು ನಾಯಕನ ಸ್ಥಾನಕ್ಕೆ ಸ್ಪರ್ಧಿಸುವಂತಿರಲಿಲ್ಲವಾದರೂ, ಅಸಮರ್ಥರು, ಸಮರ್ಥರ ತಂಡದಿಂದ ಒಬ್ಬ ಸ್ಪರ್ಧಿಯನ್ನು ಗುರುತಿಸಿ ಆ ಸ್ಪರ್ಧಿಯನ್ನು ನಾಯಕ ಸ್ಥಾನಕ್ಕೆ ಸ್ಪರ್ಧಿಸದಂತೆ ತಡೆಯುವ ಅಧಿಕಾರ ಪಡೆದುಕೊಂಡರು. ಪ್ರತಿ ಅಸಮರ್ಥರು, ತಮಗೆ ಯಾರು ನಾಯಕನಾಗಲು ಇಷ್ಟವಿಲ್ಲವೋ ಅವರ ಕೊರಳಿಗೆ ‘ನಾಲಾಯಕ್’ ಎಂಬ ಪಟ್ಟಿ ಹಾಕುವಂತೆ ಸೂಚಿಸಿದರು ಬಿಗ್​ಬಾಸ್.

ಅಂತೆಯೇ ಹಳ್ಳಿಕಾರ್ ಸಂತೋಶ್, ಈಶಾನಿ ಕೊರಳಿಗೆ, ತನಿಷಾ ತನ್ನನ್ನು ನಾಮಿನೇಟ್ ಮಾಡಿದ್ದ ನಮ್ರತಾರ ಕೊರಳಿಗೆ, ಡ್ರೋನ್ ಪ್ರತಾಪ್, ತನ್ನ ವಿರುದ್ಧ ಪದೇ-ಪದೇ ವಾಗ್ವಾದ ನಡೆಸಿದ ಸ್ನೇಹಿತ್ ಕೊರಳಿಗೆ, ಸಂಗೀತ, ವಿನಯ್ ಕೊರಳಿಗೆ, ರಕ್ಷಕ್, ಈಶಾನಿ ಕೊರಳಿಗೆ, ಕಾರ್ತಿಕ್, ತುಕಾಲಿ ಸಂತೋಶ್ ಕೊರಳಿಗೆ ನಾಲಾಯಕ್ ಫಲಕ ಹಾಕಿದರು. ನಿಯಮದಂತೆ ಎರಡು ಫಲಕ ಹಾಕಿಸಿಕೊಂಡ ಈಶಾನಿ ನಾಯಕ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು.

ಇದನ್ನೂ ಓದಿ:ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ

ಸಮರ್ಥರಲ್ಲಿ ನಾಮಿನೇಟ್ ಆದ ಕೆಲವರನ್ನು ಹೊರತುಪಡಿಸಿ ಹಾಗೂ ಈಶಾನಿಯನ್ನು ಹೊರತುಪಡಿಸಿ ಏಳು ಮಂದಿ ಬೊಬ್ಬಲ್​ ಗಮ್ ಅನ್ನು ಜಗಿಯುತ್ತಾ ಸಣ್ಣನೆಯ ಹಲಗೆಯ ಮೇಲೆ ನಡೆಯುವ ಟಾಸ್ಕ್​ ಒಂದನ್ನು ಆಡಿದರು. ಅದರಲ್ಲಿ ಮೊದಲ ಮೂವರಾಗಿ ಟಾಸ್ಕ್ ಮುಗಿಸಿದ್ದು ನಮ್ರತಾ ಗೌಡ, ಸ್ನೇಹಿತ್ ಹಾಗೂ ತುಕಾಲಿ ಸಂತೋಶ್. ಈ ಮೂವರಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಯ್ತು. ಮೂವರು ಸಹ ಅಲುಗಾಡುವ ದೊಡ್ಡ ಹಲಗೆಯೊಂದರ ಮೇಲೆ ನಿಲ್ಲುವಂತೆ ಮಾಡಲಾಯ್ತು. ತುಕಾಲಿ ಹಾಗೂ ನಮ್ರತಾ ಬೇಗನೇ ಇಳಿದರಾದರೂ, ಸ್ನೇಹಿತ್ ಗಟ್ಟಿಯಾಗಿ ಹಲಗೆಯ ಮೇಲೆ ನಿಂತು ಟಾಸ್ಕ್ ಗೆದ್ದು ಸೀಸನ್​ನ ಮೊದಲ ಕ್ಯಾಪ್ಟನ್ ಆದರು.

ಸೀಸನ್​ನ ಮೊದಲ ಕ್ಯಾಪ್ಟನ್ ಆದ ಸ್ನೇಹಿತ್​ಗೆ ಆರಂಭದಲ್ಲಿ ಬಹಳ ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯ ಸನ್ನಿವೇಶವನ್ನು ಬಿಗ್​ಬಾಸ್ ಸೃಷ್ಟಿಸಿದರು. ಅಸಮರ್ಥರಿಗಾಗಿ ಕೆಲವು ನಿಯಮಗಳನ್ನು ಬಿಗ್​ಬಾಸ್ ನೀಡಿದ್ದರು. ಆ ನಿಯಮಗಳು ಪಾಲನೆಯಾಗುವಂತೆ ಸಮರ್ಥರು ನೋಡಿಕೊಳ್ಳಬೇಕಿತ್ತು. ಆದರೆ ಕೆಲವು ಅಸಮರ್ಥರು ಆ ನಿಯಮ ಮೀರಿದ್ದರಿಂದ, ಈಗ ಸಮರ್ಥರಲ್ಲಿ ಒಬ್ಬರನ್ನು ಅಸಮರ್ಥರೆಂದು ಗುರುತಿಸಿ ಅವರಿಗೆ ಶಿಕ್ಷೆ ನೀಡುವ ಕಾರ್ಯವನ್ನು ನಾಯಕ ಸ್ನೇಹಿತ್ ಮಾಡಬೇಕಿದೆ. ಸ್ನೇಹಿತ್ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ನಾಳೆ ತಿಳಿದು ಬರುತ್ತದೆ. ಜಿಯೋ ಸಿನಿಮಾಸ್​ ಹಾಗೂ ಕಲರ್ಸ್ ವಾಹಿನಿಯಲ್ಲಿ ಬಿಗ್​ಬಾಸ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ