ಕುಡಿದು ರಂಪಾಟ ಮಾಡಿದ ಕಿರುತೆರೆ ಕಲಾವಿದರು; ನಟ ರಕ್ಷಿತ್​ ಸೇರಿ 7 ಜನರ ಮೇಲೆ ಎಫ್​ಐಆರ್​

| Updated By: ಮದನ್​ ಕುಮಾರ್​

Updated on: Jan 29, 2022 | 10:32 AM

ರಕ್ಷಿತ್​ ಸೇರಿ 7 ಜನರನ್ನು ಠಾಣೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್​ ಮಾಡಿಸಲಾಗಿದೆ. ಕೇಸ್ ದಾಖಲು ಮಾಡಿಕೊಂಡು ನಂತರ ಸ್ಟೇಷನ್ ಬೇಲ್ ನೀಡಿ ಬಿಡುಗಡಗೆ ಮಾಡಲಾಗಿದೆ.

ಕುಡಿದು ರಂಪಾಟ ಮಾಡಿದ ಕಿರುತೆರೆ ಕಲಾವಿದರು; ನಟ ರಕ್ಷಿತ್​ ಸೇರಿ 7 ಜನರ ಮೇಲೆ ಎಫ್​ಐಆರ್​
ಕಿರುತೆರೆ ನಟ ರಕ್ಷಿತ್​
Follow us on

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿವೊಂದರ (Kannada serial) ಏಳು ಮಂದಿ ಕಲಾವಿದರು ಬೆಂಗಳೂರಿನ ಕೆಂಗೇರಿ ಬಳಿ ಇರುವ ಜಿಂಜರ್ ಲೇಕ್ ವ್ಯೂ ಹೋಟೆಲ್ ಒಂದರಲ್ಲಿ ಕುಡಿದ ಗಲಾಟೆ ಮಾಡಿದ್ದಾರೆ. ಸ್ಥಳೀಯರು ನೀಡಿದ ದೂರು ಆಧರಿಸಿ ಏಳು ಮಂದಿಯನ್ನು ಪೊಲೀಸರು ಅರೆಸ್ಟ್​ ( ಮಾಡಿದ್ದಾರೆ. ಬಳಿಕ ಅವರನ್ನು ಸ್ಟೇಷನ್​ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಾದ ನಟ ರಕ್ಷಿತ್ (Serial Actor Rakshith)​, ಅಭಿಷೇಕ್​, ರಾಕೇಶ್​ ಕುಮಾರ್​, ರವಿಚಂದ್ರನ್​, ರಂಜನ್​, ಅನುಷಾ ಹಾಗೂ ಶರಣ್ಯ ಅವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದಲ್ಲಿ ರಕ್ಷಿತ್​ ಎ1 ಆಗಿದ್ದಾರೆ. ಈ ಏಳು ಮಂದಿ ಶೂಟಿಂಗ್​ ಮುಗಿಸಿ ಹೋಟೆಲ್​ಗೆ ಬಂದಿದ್ದರು. ಆದರೆ, ರಾತ್ರಿ ಕರ್ಫ್ಯೂ (Night Curfew) ಹಿನ್ನೆಲೆಯಲ್ಲಿ 10 ಗಂಟೆ ವೇಳೆಗೆ ಹೋಟೆಲ್ ಬಂದ್ ಮಾಡಲಾಗಿತ್ತು. ಆದರೂ ಸಹ ಇವರು ಹೋಟೆಲ್ ಮ್ಯಾನೇಜರ್​​ಗೆ ಕರೆ ಮಾಡಿ ಹೋಟೆಲ್​ ಬಾಗಿಲು ತೆಗೆಸಿದ್ದಾರೆ. ಬಳಿಕ ಹೋಟೆಲ್ ಒಳಗೆ ಕುಳಿತು ಮದ್ಯ ಸೇವನೆ ಮಾಡಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ದೊಡ್ಡದಾಗಿ ಕಿರುಚಾಡಿದ್ದಾರೆ. ಇದರಿಂದ ಸ್ಥಳೀಯರಿಗೆ ಕಿರಿಕಿರಿ ಆಗಿದೆ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಪೊಲೀಸರು ಬಂದಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ವಾಗ್ವಾದ ನಡೆದಿದೆ.

7 ಜನರನ್ನು ಠಾಣೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್​ ಮಾಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಲ್ಕೋಹಾಲ್​ ಸೇವನೆ ಮಾಡಿರುವುದು ಪತ್ತೆ ಆಗಿದೆ. ಎನ್​ಡಿಎಂಎ ಮತ್ತು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸ್ಟೇಷನ್ ಬೇಲ್ ನೀಡಿ ಇವರನ್ನು ಬಿಡುಡಗೆ ಮಾಡಲಾಗಿದೆ.

​ಕೆಂಗೇರಿ ಪೋಲಿಸ್​ ಠಾಣೆಯ ಎಎಸ್​ಐ ನಾಗರಾಜು ಎಚ್​.ಕೆ. ನೀಡಿದ ದೂರಿನಲ್ಲಿ ಘಟನೆಯ ವಿವರಗಳನ್ನು ಉಲ್ಲೇಖ ಮಾಡಲಾಗಿದೆ. ‘ನಾವು ಠಾಣಾ ಸರಹದ್ದಿನ ಉತ್ತರಹಳ್ಳಿ ಮುಖ್ಯ ರಸ್ತೆ, ಗಾಣಕಲ್‌, ಮೈಲಸಂದ್ರ ಕಡೆ ಗಸ್ತಿನಲ್ಲಿರುವಾಗ ರಾತ್ರಿ ಸುಮಾರು 1.35 ಗಂಟೆ ಸಮಯದಲ್ಲಿ ಠಾಣೆಯಿಂದ ಕರೆ ಮಾಡಿ ಜಿಂಝರ್ ಲೇಕ್ ವ್ಯೂ ಹೋಟೆಲ್ನಲ್ಲಿ ಯಾರೋ ಕುಡಿದು ಗಲಾಟೆ ಮಾಡುತ್ತಿರುತ್ತಾರೆಂದು ಸಾರ್ವಜನಿಕರಿಂದ ಠಾಣೆಗೆ ಕರೆ ಬಂದಿದ್ದು, ಹೋಗಿ ಪರಿಶೀಲಿಸುವಂತೆ ಸೂಚಿಸಿದ ಮೇರೆಗೆ ನಾವು ರಾತ್ರಿ 1.40 ಗಂಟೆಗೆ ಜಿಂಜರ್ ಲೇಕ್ ವ್ಯೂ ಹೋಟೆಲ್​ಗೆ ಹೋದೆವು. ಹೋಟೆಲ್ ಒಳಗೆ ಐವರು ಗಂಡಸರು ಮತ್ತು ಇಬ್ಬರು ಮಹಿಳೆಯರು ಜೋರಾಗಿ ಕೂಗಾಡಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡಿ, ಘನ ಸರ್ಕಾರವು ಕೋವಿಡ್-19 ಹಿನ್ನೆಲೆಯಲ್ಲಿ ಹೊರಡಿಸಿದ ರಾತ್ರಿ ಕರ್ಫ್ಯೂ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಅವರಿಗೆ ಕರ್ಫ್ಯೂ ಆದೇಶದ ಬಗ್ಗೆ ತಿಳಿಸಿ ಸ್ಥಳದಿಂದ ಹೊರಡುವಂತೆ ತಿಳಿಸಿದಾಗ ಅವರು ಏರು ಧ್ವನಿಯಲಿ ಮಾತನಾಡಿ, ಅಲ್ಲಿಂದ ಹೊರಡಲು ನಿರಾಕರಿಸಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನಂತರ ರಾತ್ರಿ ಗಸ್ತು ಕರ್ತವ್ಯದಲ್ಲಿ ಮಾನ್ಯ ಪಿಐ ಸಾಹೇಬರಿಗೆ ವಿಚಾರ ತಿಳಿಸಿದ್ದು, ಪಿ.ಐ ಸಾಹೇಬರು ಸ್ಥಳಕ್ಕೆ ಬಂದು, ವಿಚಾರ ಮಾಡಿ ನಂತರ ಹೊಯ್ಸಳ-72 ಸಿಬ್ಬಂದಿಯವರನ್ನು, ಬೀಟ್ ಸಿಬ್ಬಂದಿಯವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಸದರಿ ಆಸಾಮಿಗಳನ್ನು ಠಾಣೆಗೆ ಕರೆತಂದು ಹೆಸರು ವಿಳಾಸ ಕೇಳಲಾಗಿದೆ’ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.​

ಇದನ್ನೂ ಓದಿ:

‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ