‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’: ತಾಯಿ ಬಗ್ಗೆ ಕೀಳಾಗಿ ಮಾತಾಡಿದ ಚೈತ್ರಾಗೆ ಗ್ರಹಚಾರ ಬಿಡಿಸಿದ ಕಿಚ್ಚ

|

Updated on: Oct 20, 2024 | 4:12 PM

ಮಹಾನ್ ಮಾತುಗಾರ್ತಿ ಅಂತ ಜಂಭಕೊಚ್ಚಿಕೊಳ್ಳುವ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್​ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಅಸಭ್ಯವಾದ ಮಾತನಾಡಿದಕ್ಕೆ ಅವರು ಗ್ರಹಚಾರ ಬಿಡಿಸಿದ್ದಾರೆ. ಸುದೀಪ್ ಗರಂ ಆಗುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಗಪ್​ಚುಪ್ ಆಗಿದ್ದಾರೆ. ಅ.20ರ ರಾತ್ರಿ 9 ಗಂಟೆಗೆ ಈ ಸಂಚಿಕೆ ಪ್ರಸಾರ ಆಗಲಿದೆ.

‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’: ತಾಯಿ ಬಗ್ಗೆ ಕೀಳಾಗಿ ಮಾತಾಡಿದ ಚೈತ್ರಾಗೆ ಗ್ರಹಚಾರ ಬಿಡಿಸಿದ ಕಿಚ್ಚ
ಚೈತ್ರಾ ಕುಂದಾಪುರ, ಕಿಚ್ಚ ಸುದೀಪ್
Follow us on

ಭಾರಿ ಚರ್ಚೆ ಹುಟ್ಟುಹಾಕಿರುವ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ಗುಡುಗಿದ್ದಾರೆ. ಶನಿವಾರದ (ಅ.19) ಸಂಚಿಕೆಯಲ್ಲಿ ಅವರು ಅನೇಕ ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ (ಅಕ್ಟೋಬರ್​ 20) ಕೂಡ ಕಿಚ್ಚನ ಕ್ಲಾಸ್ ಮುಂದುವರಿಯಲಿದೆ. ಈ ವಾರ ಮಾತನಾಡುವ ಭರದಲ್ಲಿ ಚೈತ್ರಾ ಕುಂದಾಪುರ ಅವರ ಅಸಭ್ಯವಾದ ಪದಗಳನ್ನು ಬಳಕೆ ಮಾಡಿದ್ದರು. ‘ಒಬ್ಬ ಅಪ್ಪನಿಗೆ ಹುಟ್ಟಿದವನಾಗಿದ್ದರೆ..’ ಎಂದು ಜಗದೀಶ್​ಗೆ ಚೈತ್ರಾ ಹೇಳಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಸುದೀಪ್​ ಅವರು ಚೈತ್ರಾಗೆ ಗ್ರಹಚಾರ ಬಿಡಿಸಿದ್ದಾರೆ.

ಲಾಯರ್ ಜಗದೀಶ್ ಅವರು ಬಿಗ್​ ಬಾಸ್​ ಮನೆಯಲ್ಲಿ ಹಂಸಾ ಬಗ್ಗೆ ಮಾತನಾಡುವಾಗ ಅವಾಚ್ಯ ಪದಗಳನ್ನು ಬಳಸಿದ್ದರು. ಅದನ್ನು ಇಡೀ ಮನೆಯೇ ಖಂಡಿಸಿತ್ತು. ರಂಜಿತ್ ಅವರಂತೂ ಈ ವಿಚಾರಕ್ಕೆ ಜಗದೀಶ್ ಮೇಲೆ ಕೈ ಮಾಡಿ ಮನೆಯಿಂದ ಹೊರಬಂದಿದ್ದಾರೆ. ಜಗದೀಶ್ ಮಾಡಿದ ತಪ್ಪಿಗೆ ಅವರನ್ನು ಕೂಡ ಮನೆಯಿಂದ ಹೊರಗೆ ಕಳಿಸಲಾಗಿದೆ. ಜಗದೀಶ್ ಮಾತನಾಡಿದ್ದು ತಪ್ಪು ಎಂಬುದಾದರೆ ಇನ್ನುಳಿದ ಸದಸ್ಯರ ಮಾತು ಮತ್ತು ವರ್ತನೆ ಸರಿಯಿದೆಯಾ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ

‘ಹೆಣ್ಮಕ್ಕಳ ಬಗ್ಗೆ ಆ ರೀತಿ ಮಾತನಾಡಬೇಡಿ ಅಂತ ನೀವು ಹೇಳುತ್ತೀರಿ. ಹೌದಲ್ಲವೇ? ಅದಕ್ಕೆ ನಾನು ತುಂಬಾ ಗೌರವಿಸುತ್ತೇನೆ. ಆದರೆ ಮಹಿಳೆಯರು ಕೂಡ ಪುರುಷರನ್ನು ಗೌರವಿಸಬಾರದಾ? ನಿಮ್ಮಿಂದ ಒಂದು ಮಾತು ಬರುತ್ತದೆ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ. ನೀವು ಕೂಡ ಅವರ ತಾಯಿಗೆ ತಾನೇ ಬೈದಿದ್ದು. ಇದು ಹೇಗೆ ಸಾಧ್ಯ? ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಹೇಳಿದಾಗ ಯಾವ ನನ್ಮಗನೂ ಅಪ್ಪನಿಗೆ ಬೈಯ್ಯುತ್ತಿಲ್ಲ. ತಾಯಿಗೆ ಬೈಯುತ್ತಾ ಇರೋದು. ಹೆಣ್ಮಕ್ಕಳಿಗೆ ಗೌರವ ಕೊಡಿ ಅಂತ ನೀವು ಹೇಳ್ತೀರಾ?’ ಎಂದು ಸುದೀಪ್ ಅವರು ಖಡಕ್​ ಆಗಿ ಪ್ರಶ್ನಿಸಿದ್ದಾರೆ.

ಜಗದೀಶ್ ಅವರನ್ನು ಕೆಣಕಿದ ಉಗ್ರಂ ಮಂಜು ಅವರನ್ನು ಕೂಡ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಹಂಸಾ ಮಾಡಿದ ರಾಜಕೀಯವನ್ನು ಸಹ ಕಿಚ್ಚ ಖಂಡಿಸಿದ್ದಾರೆ. ‘ಹಾಗಂತ ನಾನು ಇಲ್ಲಿ ಜಗದೀಶ್ ಅವರನ್ನು ಬೆಂಬಲಿಸುತ್ತಿಲ್ಲ. ನೀವು ಸರಿ ಇದ್ದೀರಾ ಅಂತ ಕೇಳುತ್ತಿದ್ದೇನೆ’ ಎಂದು ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಭಾನುವಾರ (ಅ.20) ‘ಕಲರ್ಸ್ ಕನ್ನಡ’ ವಾಹಿನಿ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಎಪಿಸೋಡ್​ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.