ಬಿಗ್ ಬಾಸ್ ಬಗ್ಗೆ ಸುದೀಪ್​ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ

ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡಲ್ಲ ಎಂದು ಸುದೀಪ್ ಅವರು ಹೇಳಿದ್ದಕ್ಕೆ ಕಾರಣ ಇತ್ತು. ಕೆಲವು ಬದಲಾವಣೆ ಆಗಬೇಕು ಎಂದು ಅವರು ಬಯಸಿದ್ದರು. ಆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ಬಿಗ್ ಬಾಸ್ ಶೋ ಆಯೋಜಕರ ನಡುವೆ ಆದ ಮಾತುಕತೆಯನ್ನು ಸುದೀಪ್ ವಿವರಿಸಿದ್ದಾರೆ.

ಬಿಗ್ ಬಾಸ್ ಬಗ್ಗೆ ಸುದೀಪ್​ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ
Sudeep

Updated on: Jun 30, 2025 | 6:49 PM

11ನೇ ಸೀಸನ್ ಬಳಿಕ ತಾವು ಬಿಗ್ ಬಾಸ್ ಕನ್ನಡ (Bigg Boss Kannada) ಶೋ ನಿರೂಪಣೆ ಮಾಡಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಆದರೆ ಈಗ ಅವರು ಮತ್ತೆ ಮನಸ್ಸು ಬದಲಾಯಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಈ ಮೊದಲು ಅವರು ಶೋನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸರಿಯಾದ ಮನ್ನಣೆ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ (Kichcha Sudeep) ನಿರೂಪಣೆ ನಿಲ್ಲಿಸಲು ನಿರ್ಧರಿಸಿದ್ದರು. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮತ್ತೆ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡಬೇಕು ಎಂದು ‘ಕಲರ್ಸ್ ಕನ್ನಡ’ ವಾಹಿನಿಯವರು ಮನವೊಲಿಸಲು ಹೋದಾಗ ಸುದೀಪ್ ಕೆಲವು ಸಲಹೆಗಳನ್ನು ನೀಡಿದರು. ತಮಗೆ ಈ ಹಿಂದೆ ಇದ್ದ ಅಸಮಾಧಾನಗಳ ಬಗ್ಗೆ ಅವರು ವಾಹಿನಿಯವರಿಗೆ ತಿಳಿಸಿದರು. ಅದು ಏನು ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ವಿವರಿಸಿದರು.

‘ನೀವು ಯಾವುದೇ ಚಾನಲ್​ನಲ್ಲಿ ಏನಾದರೂ ಮಾಡಿ. ನಮ್ಮ ಮೂಲ ಕನ್ನಡ. ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ. ಎಲ್ಲಿಂದ? ಮೇಲಿಂದ. ನಮಗೆ ಇಲ್ಲಿ ವಾಹಿನಿಯವರಿಂದ ಯಾವುದೇ ರೀತಿಯ ಕೊರತೆ ಬಂದಿಲ್ಲ. ಆದರೆ ಮೇಲಿನವರಿಂದ ಆ ಪ್ರೀತಿ ಕಾಣಿಸುತ್ತಾ ಇರಲಿಲ್ಲ. ಇದು ನಾನು ಯಾರ ಮೇಲೂ ಮಾಡುತ್ತಿರುವ ಆರೋಪ ಅಲ್ಲ. ಇದು ನನ್ನ ವೈಯಕ್ತಿಯ ಅಭಿಪ್ರಾಯ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ
‘ಬಿಗ್ ಬಾಸ್ ಕನ್ನಡ 12’ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ಲೈವ್
ಮಡೆನೂರು ಮನುಗೆ ಬಿಗ್ ರಿಲೀಫ್; ಚಿತ್ರರಂಗದಲ್ಲಿ ಹೇರಿದ್ದ ಬ್ಯಾನ್ ತೆರವು
ಮೈಕ್ರೋ ವೆಬ್ ಸರಣಿಯಲ್ಲಿ ಮೋಕ್ಷಿತಾ ಪೈ; ವಿಶೇಷತೆ, ಸವಾಲನ್ನು ವಿವರಿಸಿದ ನಟಿ
ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ ಈ ಸ್ಪರ್ಧಿಗಳದ್ದು ಅಕಾಲಿಕ ಮರಣ

‘ಬೇರೆ ಭಾಷೆಗಳಲ್ಲಿ ಚೆನ್ನಾಗಿ ನಡೆಯುತ್ತಾ ಇರುತ್ತದೆ, ನಡೆಯಲಿ, ನಡಿಯಬೇಕು. ಅವರವರಿಗೆ ಅವರವರ ಭಾಷೆ ಮುಖ್ಯ. ಬರುಬರುತ್ತ ಕನ್ನಡದ ವಾಹಿನಿಯವರು ತೋರಿಸುತ್ತಿರುವ ಶ್ರಮ ಮತ್ತು ಪ್ರೀತಿಯು ಮೇಲಿನವರಿಂದ ನನಗೆ ಕಾಣಿಸುತ್ತಾ ಇರಲಿಲ್ಲ. ಕಾಣಿಸುತ್ತಿಲ್ಲ ಎಂದಾಗ ನಾನು ಬಹಳ ತಿದ್ದುವ ವ್ಯಕ್ತಿ ಅಲ್ಲ, ತಿದ್ದಿಕೊಳ್ಳುವ ವ್ಯಕ್ತಿ. ನೀವೇ ನಡೆಸಿ ಅಂತ ಸುಮ್ಮನಾದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

‘ಎಲ್ಲರೂ ಜೀವನದಲ್ಲಿ ಬ್ಯುಸಿ ಇರುವಾಗ ಕೆಲವೊಮ್ಮೆ ನಾವು ಇದನ್ನೆಲ್ಲ ನೆನಪಿಸೋದು ತಪ್ಪಾಗಲ್ಲ. ಯಾರೂ ಬೇಕಂತಲೇ ಮಾಡಿರಲ್ಲ, ಅಹಂನಿಂದ ಮಾಡಿರಲ್ಲ. ನಮ್ಮ ಕನ್ನಡದ ಟಿವಿಆರ್​ (ಟಿಆರ್​ಪಿ) ಅಕ್ಕ-ಪಕ್ಕ ಕೂಡ ಬೇರೆ ಯಾರೂ ಇಲ್ಲ. ಅದು ಎಲ್ಲರ ಶ್ರಮ. ಹಾಗಾದ್ರೆ ಪ್ರೋಂ ಅಷ್ಟೇನಾ? ಆಗಾಗ ಬನ್ನಿ ನಮ್ಮ ಊರಿಗೆ. ನಮ್ಮ ಸ್ಪರ್ಧಿಗಳಿಗೂ ಸ್ಪಲ್ಪ ಪ್ರೀತಿ ತೋರಿಸಿ’ ಎಂದು ಆಯೋಜಕರಿಗೆ ಸುದೀಪ್ ಹೇಳಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 12’ ಶೋಗೆ ಕಿಚ್ಚ ಸುದೀಪ್ ನಿರೂಪಣೆ ಖಚಿತ; ಸಿಕ್ತು ಗುಡ್ ನ್ಯೂಸ್

‘ನಮ್ಮ ಸ್ಪರ್ಧಿಗಳಿಗೂ ಒಳ್ಳೆಯ ಮನೆ ಕೊಡಿ. ಸ್ವಂತ ಮನೆ-ಮಠ ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂದರೆ ಆ ಮನೆ ಇನ್ನೂ ಚೆನ್ನಾಗಿ ಇರಬೇಕು. ಕೇವಲ ನಾಲ್ಕು ಗೋಡೆ ರೀತಿ ಇರಬಾರದು. ಆ ಮನೆ ನೋಡಿದರೆ ನಮ್ಮ ವೀಕ್ಷಕರಿಗೆ ಇನ್ನಷ್ಟು ಖುಷಿ ಆಗಬೇಕು. ತಾವು ಹೋಗಬೇಕು ಅಂತ ನಮ್ಮ ವೀಕ್ಷಕರಿಗೂ ಆಸೆ ಆಗಬೇಕು’ ಎಂದಿದ್ದಾರೆ ಸುದೀಪ್.

‘ನನ್ನ ವೇದಿಕೆ ನನ್ನ ಗತ್ತು. ನನ್ನ ಇಡೀ ಬಿಗ್ ಬಾಸ್ ಜೀವನ ನಡೆಯುವುದೇ ಆ ವೇದಿಕೆ ಮೇಲೆ. ಹಾಗಿರುವಾಗ ಅದು ನಮಗೆ ಸ್ವಲ್ಪ ಕಂಫರ್ಟ್ ಆಗಿರಬೇಕು. ನೀಟಾಗಿ ಇರಬೇಕು. ನಮಗೆ ರೇಟಿಂಗ್ ಬರುತ್ತಿರುವುದು ನಮ್ಮ ಭಾಷೆ, ನಮ್ಮ ಜನರಿಂದ ಎಂದಮೇಲೆ ಅದು ನನಗೆ ಬಹಳ ಮುಖ್ಯ ಆಗುತ್ತದೆ. ಹಾಗಂತ ಇಲ್ಲಿ ಯಾರೂ ತಪ್ಪು ಮಾಡುತ್ತಿದ್ದಾರೆ ಅಂತ ಅಲ್ಲ. ಸರಿಪಡಿಸಿಕೊಳ್ಳಲಿ ಎಂಬುದು ನನ್ನ ಆಸೆ ಆಗಿತ್ತು. ಯಾರೂ ಹಿಂದೇಟು ಹಾಕಲಿಲ್ಲ. ಎಲ್ಲರೂ ಬಂದು ಸ್ಪಂದಿಸಿದರು. ಅದು ನನಗೆ ಖುಷಿ ಇದೆ’ ಎಂದು ಸುದೀಪ್ ಅವರು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.