ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ

ವಿನಯ್ ಕ್ಷಮೆ ಕೇಳಿದ್ದು ಪ್ರತಾಪ್​ಗೆ ಖುಷಿ ನೀಡಿತು. ‘ತಪ್ಪಿನ ಅರಿವಾಯಿತಲ್ಲ. ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ’ ಎಂದರು ಪ್ರತಾಪ್.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ
ವಿನಯ್-ಪ್ರತಾಪ್
Edited By:

Updated on: Jan 10, 2024 | 10:04 AM

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ (Vinay Gowda) ಅವರು ಆಗಾಗ ಸಿಟ್ಟಾಗುತ್ತಾರೆ. ಆ ಸಂದರ್ಭದಲ್ಲಿ ಅವರು ಸಾಕಷ್ಟು ಅವಾಚ್ಯ ಶಬ್ದ ಬಳಕೆ ಮಾಡುತ್ತಾರೆ. ಎದುರಿದ್ದವರ ವಿರುದ್ಧ ಕೂಗಾಡುತ್ತಾರೆ. ಸಿಟ್ಟಿನಿಂದ ಕಿರುಚಾಡುತ್ತಾರೆ. ಈ ರೀತಿ ಆದಗ ಎದುರಿದ್ದವರು ಸಹಜವಾಗಿಯೇ ರಿಯಾಕ್ಟ್ ಮಾಡುತ್ತಾರೆ. ಈ ರೀತಿ ಆಗಿ ಮನೆಯ ವಾತಾವರಣ ಸಾಕಷ್ಟು ಬಾರಿ ಹಾಳಾಗಿದ್ದಿದೆ. ಕೆಲವು ವಾರ ಸೈಲೆಂಟ್ ಆಗಿದ್ದ ವಿನಯ್ ಗೌಡ ಅವರು ಈ ವಾರ ಕಿರುಚಾಡಿದ್ದಾರೆ. ಪ್ರತಾಪ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈಗ ವಿನಯ್ ಗೌಡ ಅವರು ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ.

ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಈ ವಾರ ಕಿರಿಕ್ ಆಗಿದೆ. ವಿನಯ್ ಗೌಡ ಗುಂಪಿನಲ್ಲಿ ಇದ್ದವರೇ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ. ‘ವಿನಯ್ ಗೌಡ ಅವರು ಗೆಳೆಯರ ತಪ್ಪನ್ನು ತಿದ್ದಲಿಲ್ಲ’ ಎನ್ನುವ ಅಭಿಪ್ರಾಯವನ್ನು ಪ್ರತಾಪ್ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ವಿನಯ್ ಅವರು ಪ್ರತಾಪ್​ಗೆ ಬಾಯಿಗೆ ಬಂದಂತೆ ಬೈದಿದ್ದರು. ‘ತಿ* ಮುಚ್ಕೊಂಡು ಇರು. ನೀನು ಹೆದರಿಲ್ಲ ಅಂದ್ರೆ ** ಏನೂ ಹೋಗಲ್ಲ’ ಎಂಬಿತ್ಯಾದಿ ಶಬ್ದ ಬಳಕೆ ಮಾಡಿದ್ದರು. ಇದನ್ನು ಮನೆಯವರು ವಿರೋಧಿಸಿದ್ದರು. ಈಗ ವಿನಯ್​ಗೆ ತಪ್ಪಿನ ಅರಿವಾಗಿದೆ.

‘ಫಿನಾಲೆಗೆ ಹೋಗೋಕೆ ಯಾರು ಅರ್ಹರು’ ಎನ್ನುವ ಆಯ್ಕೆಯನ್ನು ಮಾಡಬೇಕಿತ್ತು. ವಿನಯ್ ಗೌಡ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಅವರು ಎಲ್ಲರ ಬಳಿ ಕ್ಷಮೆ ಕೇಳಿದರು. ‘ನನಗೆ ಕೋಪ ಬಂದಾಗ ಕೂಗಾಡುತ್ತೇನೆ. ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು ವಿನಯ್. ಆ ಬಳಿಕ ಪ್ರತಾಪ್ ಬಳಿ ತೆರಳಿ ಅವರಿಗೆ ಹಗ್ ಕೊಟ್ಟು, ‘ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ. ನೀನು ಗೆದ್ದರೆ ನನಗೆ ಖುಷಿ ಆಗುತ್ತದೆ’ ಎಂದರು. ವಿನಯ್ ಕ್ಷಮೆ ಕೇಳಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದರು.

ವಿನಯ್ ಕ್ಷಮೆ ಕೇಳಿದ್ದು ಪ್ರತಾಪ್​ಗೆ ಖುಷಿ ನೀಡಿತು. ‘ತಪ್ಪಿನ ಅರಿವಾಯಿತಲ್ಲ. ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ’ ಎಂದರು ಪ್ರತಾಪ್. ಜೊತೆಗೆ ನಾಲಿಗೆಗೆ ಲಗಾಮು ಹಾಕಿಕೊಳ್ಳಿ ಎಂದು ಪ್ರತಾಪ್ ಮನವಿ ಮಾಡಿಕೊಂಡರು. ಇದಕ್ಕೆ ವಿನಯ್ ಸಮ್ಮತಿ ಸೂಚಿಸಿದರು.

ಇದನ್ನೂ ಓದಿ: ‘ವಿನಯ್ ತುಂಬಾ ಕೆಳಗೆ ಹೋದ್ರು, ಪ್ರತಾಪ್ ಮೇಲೆ ಕಾಣಿಸಿದ್ರು’; ಅವಾಚ್ಯ ಶಬ್ದ ಬಳಕೆ ಬಗ್ಗೆ ಸಂತೋಷ್ ಮಾತು

ಫಿನಾಲೆ ಸಮೀಪಿಸಿದಾಗ ಎಡವದಂತೆ ಎಚ್ಚರಿಕೆ ವಹಿಸಬೇಕು. ಆದರೆ, ವಿನಯ್ ಗೌಡ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಮೈಲೇಜ್ ಕಳೆದುಕೊಂಡಿದ್ದಾರೆ. ಈ ವಾರ ಅವರು ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಅವರ ವೋಟ್ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ಕ್ಯಾಪ್ಟನ್ ಆಗಿರೋ ಸಂಗೀತಾ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಜೊತೆಗೆ ಅಧಿಕಾರ ಬಳಸಿಕೊಂಡು ಪ್ರತಾಪ್​ನ ಸೇವ್ ಮಾಡಿದ್ದಾರೆ. ಉಳಿದಂತೆ ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್, ನಮ್ರತಾ, ತನಿಷಾ ಹಾಗೂ ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್​ನ ಉಚಿತವಾಗಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us