
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಿರಣ್ ರಾಜ್ (Kiran Raj), ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅವರ ನಟನೆಯ ‘ಕರ್ಣ’ ಧಾರಾವಾಹಿ ಇಂದಿನಿಂದ (ಜೂನ್ 16) ರಾತ್ರಿ 8 ಗಂಟೆಗೆ ಪ್ರಸಾರ ಆರಂಭ ಆಗಬೇಕಿತ್ತು. ಇದಕ್ಕೆ ಸಂಬಂಧಿಸಿದ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿತ್ತು. ಆದರೆ, ಈಗ ಧಾರಾವಾಹಿಯು ವಿಳಂಬ ಆಗಲಿದೆ ಎಂದು ಮಾಹಿತಿ ನೀಡಿದೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ವಾಹಿನಿಯವರು ಮಾಹಿತಿ ನೀಡಿಲ್ಲ.
ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ‘ಕರ್ಣ ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು’ ಎಂದು ಬರೆಯಲಾಗಿದೆ.
‘ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು. ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದ್ರೆ ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ. ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ… ಶೀಘ್ರದಲ್ಲೇ, ಅದೇ ಪ್ರೀತಿ – ವಿಶ್ವಾಸದಿಂದ ‘ಕರ್ಣ’ನನ್ನ ಬರಮಾಡಿಕೊಳ್ತರಿ ಅಲ್ವಾ’ ಎಂದು ಕೇಳಲಾಗಿದೆ.
ಇದಕ್ಕೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಆಗಿದ್ದೇನು? ಧಾರಾವಾಹಿಯ ಹೊಸ ಪ್ರಸಾರ ದಿನಾಂಕ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಯಾವುದಾದರೂ ತಾಂತ್ರಿಕ ಸಮಸ್ಯೆಗಳು ಎದುರಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಅವರು ‘ಕರ್ಣ’ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಅವರದ್ದು ವೈದ್ಯನ ಪಾತ್ರ. ಈ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭವ್ಯಾ ಗೌಡ ಅವರ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಅವರು ಮೆಡಿಕಲ್ ವಿದ್ಯಾರ್ಥಿನ ಪಾತ್ರ ಮಾಡಿದ್ದಾರೆ. ನಮ್ರತಾ ಗೌಡ ಪಾತ್ರ ಇನ್ನೂ ರಿವೀಲ್ ಆಗಿಲ್ಲ. ಭವ್ಯಾ ಸಹೋದರಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:26 pm, Mon, 16 June 25