ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ಸೀತಾರಾಮ್​ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕೆ 'ಮತ್ತೆ ಮನ್ವಂತರ' ಶೀರ್ಷಿಕೆ ಅಂತಿಮವಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಮೇಧಾ ವಿದ್ಯಾಭೂಷಣ​ ನಿರ್ವಹಿಸುತ್ತಿದ್ದಾರೆ.

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!
‘ಮತ್ತೆ ಮನ್ವಂತರದ’ದ ನಾಯಕಿ ಮೇಧಾ- ನಿರ್ದೇಶಕ ಟಿ.ಎನ್​.ಸೀತಾರಾಮ್​
Edited By:

Updated on: Apr 12, 2021 | 8:55 AM

ಖ್ಯಾತ ನಿರ್ದೇಶಕ ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಈ ಧಾರಾವಾಹಿಗೆ ಟೈಟಲ್​ ಇಡುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಸಿನಿಮಾಗೆ ಟೈಟಲ್​ ಅಂತಿಮವಾಗಿದೆ. ‘ಮತ್ತೆ ಮನ್ವಂತರ’ ಎನ್ನುವ ಟೈಟಲ್​ ಮೂಲಕ ಟಿ.ಎನ್​ ಸೀತಾರಾಮ್​ ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

1990ರ ದಶಕದಿಂದಲೂ ಕಿರುತೆರೆಯಲ್ಲಿ ಸೀತಾರಾಮ್​ ಸಕ್ರಿಯರಾಗಿದ್ದಾರೆ. ಮುಕ್ತ, ಮಾಯಾಮೃಗ ಮುಂತಾದ ಸೀರಿಯಲ್​ಗಳು ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟವು. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಮಗಳು ಜಾನಕಿ’ ಸೀರಿಯಲ್​ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತುಹೋಯಿತು. ಅದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈಗ ಸೀತಾರಾಮ್​ ಗುಡ್​ ನ್ಯೂಸ್​ ನೀಡಿದ್ದಾರೆ.

ಸೀತಾರಾಮ್​ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕೆ ‘ಮತ್ತೆ ಮನ್ವಂತರ’ ಶೀರ್ಷಿಕೆ ಅಂತಿಮವಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಮೇಧಾ ವಿದ್ಯಾಭೂಷಣ​ ನಿರ್ವಹಿಸುತ್ತಿದ್ದಾರೆ.

ಮೇಧಾ ವಿದ್ಯಾಭೂಷಣ್​

ಮೇಧಾ ವಿದ್ಯಾಭೂಷಣ​ ಖ್ಯಾತ ಗಾಯಕ ವಿದ್ಯಾಭೂಷಣ​ ಅವರ ಮಗಳು. ಮೇಧಾ ಕೂಡ ಗಾಯಕಿ. ಪಿ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್​ ಓದುತ್ತಿದ್ದಾರೆ. ಈಗ ಈ ಧಾರಾವಾಹಿ ಮೂಲಕ ಮೇಧಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮೇಧಾ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಅವರ ಪಾತ್ರ ಹೇಗಿರಲಿದೆ ಎನ್ನುವ ಬಗ್ಗೆ ಈಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಲಾಕ್​ಡೌನ್​ ಪರಿಣಾಮವಾಗಿ ಮಗಳು ಜಾನಕಿ ಧಾರಾವಾಹಿ ಪ್ರಸಾರ ನಿಲ್ಲಿಸಬೇಕಾಯಿತು. ಅದು ಪ್ರೇಕ್ಷಕರಿಗೆ ಸಖತ್​ ಬೇಸರ ತರಿಸಿತ್ತು. ಮತ್ತೆ ಆ ಧಾರಾವಾಹಿಯನ್ನು ಶುರು ಮಾಡಿ ಎಂಬ ಕೋರಿಕೆ ಈಗಲೂ ಬರುತ್ತಲೇ ಇದೆ. ಆದರೆ ಆ ಕೋರಿಕೆ ಈಡೇರುವುದು ಅನುಮಾನ. ಅದರ ಬದಲು ಹೊಸ ಧಾರವಾಹಿಯನ್ನೇ ಸೀತಾರಾಮ್​ ನಿರ್ದೇಶಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪಾತ್ರವರ್ಗ, ಪ್ರಸಾರ ದಿನಾಂಕದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಒದಿ: ಮಗಳು ಜಾನಕಿ ಬಳಿಕ ಟಿಎನ್​​ ಸೀತಾರಾಮ್​ ಹೊಸ ಸೀರಿಯಲ್​! ಟೈಟಲ್​ ಇಡುವ ಅವಕಾಶ ಪ್ರೇಕ್ಷಕರಿಗೆ

Published On - 8:35 pm, Sun, 11 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us