ಸೋತು ಸುಣ್ಣವಾದ ‘ಅಪ್ಪು’ ನಿರ್ದೇಶಕನಿಗೆ ವಿಜಯ್ ಅವಕಾಶ ಕೊಟ್ಟಿದ್ದೇಕೆ? ವಿವರಿಸಿದ ನಟ
ವಿಜಯ್ ಸೇತುಪತಿ ಅವರು ಪುರಿ ಜಗನ್ನಾಥ್ ಅವರೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. 'ಲೈಗರ್' ಚಿತ್ರದ ವೈಫಲ್ಯದ ನಂತರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ವಿಜಯ್ ಅವರು ಕಥೆಯನ್ನು ಇಷ್ಟಪಟ್ಟಿದ್ದರಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ತಬು ಅವರೊಂದಿಗೆ ನಟಿಸುವ ಅವಕಾಶವೂ ಅವರಿಗೆ ಸಂತೋಷ ತಂದಿದೆ.

ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ (Vijay Sethupathi) ಅವರು ಸಿನಿಮಾಗಳ ಆಯ್ಕೆಯಲ್ಲಿ ಸದಾ ಭಿನ್ನ. ಅವರು ಇತ್ತೀಚೆಗೆ ಫ್ಲಾಪ್ ಡೈರೆಕ್ಟರ್ ಪುರಿ ಜಗನ್ನಾಥ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಕೊಟ್ಟಿದ್ದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಯಾರೂ ಅವಕಾಶ ಕೊಡದೇ ಇದ್ದಾಗ ವಿಜಯ್ ಅವರು ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡಲು ಮುಂದೆ ಬಂದಿದ್ದು ಏಕೆ ಎಂಬ ಪ್ರಶ್ನೆ ಮೂಡಿತ್ತು. ಅಭಿಮಾನಿಗಳು ಕೂಡ ಈ ಬಗ್ಗೆ ಬೇಸರಗೊಂಡಿದ್ದರು. ಇವುಗಳಿಗೆ ವಿಜಯ್ ಸೇತುಪತಿ ಸ್ಪಷ್ಟನೆ ನೀಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಯಿತು. ಇದು ದೊಡ್ಡ ಸೋಲು. ಅಲ್ಲದೆ, ‘ಡಬಲ್ ಇಸ್ಮಾರ್ಟ್’ ಕೂಡ ಹಿಟ್ ಆಗಲಿಲ್ಲ. ಇದಕ್ಕಿನ ಮೊದಲಿನ ಸಿನಿಮಾಗಳು ಅಂಥ ಸದ್ದು ಮಾಡಲಿಲ್ಲ. ಈ ಕಾರಣಕ್ಕೆ ಎಲ್ಲ ಹೀರೋಗಳು ಅವರ ಜೊತೆ ಸಿನಿಮಾ ಮಾಡಲು ಹಿಂಜರಿಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ವಿಜಯ್ ಸೇತುಪತಿ.
ಈ ಬಗ್ಗೆ ಮಾತನಾಡಿರೋ ವಿಜಯ್, ‘ನಿರ್ದೇಶಕರ ಹಿಂದಿನ ಸಿನಿಮಾಗಳ ಫಲಿತಾಂಶ ಏನಾಗಿತ್ತು ಎಂಬುದನ್ನು ನಾನು ನೋಡುವುದಿಲ್ಲ. ನನಗೆ ಸ್ಟೋರಿ ಇಷ್ಟ ಆದರೆ ನಾನು ಸಿನಿಮಾ ಮಾಡುತ್ತೇನೆ. ಪುರಿ ಹೇಳಿದ ಕಥೆ ನನಗೆ ಮೆಚ್ಚುಗೆ ಆಯಿತು. ನಾನು ಈ ಮೊದಲು ಈ ರೀತಿಯ ಸಿನಿಮಾ ಮಾಡಿರಲಿಲ್ಲ. ನನಗೆ ಮಾಡಿದ್ದೇ ಮಾಡುವ ಬದಲು ಹೊಸ ಕಥೆ ಮಾಡೋದು ಇಷ್ಟ’ ಎಂದಿದ್ದಾರೆ.
ತಬು ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆ ತೆರೆ ಹಂಚಿಕೊಳ್ಳುವ ಬಗ್ಗೆ ವಿಜಯ್ ಖುಷಿ ಆಗಿದ್ದಾರೆ. ‘ತಬು ಒಳ್ಳೆಯ ನಟಿ. ನಾನು ಅವರ ಜೊತೆ ಈ ಮೊದಲು ಕೆಲಸ ಮಾಡಿಲ್ಲ. ನನಗೆ ಅವರ ಜೊತೆ ಕೆಲಸ ಮಾಡೋಕೆ ಖುಷಿ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಅಪ್ಪು’ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ತಬು
‘ಡಬಲ್ ಇಸ್ಮಾರ್ಟ್’ ಡಿಸಾಸ್ಟರ್ ಆದ ಬಳಿಕ ಪುರಿ ಅವರು ಅನೇಕ ಹೀರೋಗಳಿಗೆ ಕಥೆ ಹೇಳಿದ್ದು ಇದೆ. ಆದರೆ, ಯಾರೊಬ್ಬರೂ ಅವರ ಜೊತೆ ಸಿನಿಮಾ ಮಾಡುವ ಧೈರ್ಯ ತೋರಿಲ್ಲ. ಈಗ ವಿಜಯ್ ಜೊತೆ ಮಾಡಿದ ಅವರ ಸಿನಿಮಾ ಹಿಟ್ ಆದರೆ, ಎರಡನೇ ಇನ್ನಿಂಗ್ಸ್ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 16 April 25