ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!
ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳು ದೊಡ್ಡದಾಗಿಬಿಡುತ್ತವೆ. ತಲೆನೋವು ನೋಡಲು ಸಣ್ಣ ಸಂಗತಿ. ಆದರೆ, ಆ ತಲೆನೋವಿನಿಂದ ಕೆಲವೊಮ್ಮೆ ಸಹಿಸಲಾಗದಂತಾಗುತ್ತದೆ. ತಲೆನೋವು, ಶೀತ ಮುಂತಾದ ಆರೋಗ್ಯ ಸಮಸ್ಯೆಗಳು ಆಗಾಗ ಬರುತ್ತಲೇ ಇರುವುದರಿಂದ ಬಹುತೇಕ ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ತಲೆನೋವು ಕೂಡ ಕೆಲವೊಮ್ಮೆ ಬಹಳ ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು ಎಚ್ಚರ! ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 15: ಸಣ್ಣ ತಲೆನೋವು (Headache) ಎಂದು ನಿರ್ಲಕ್ಷ್ಯ ತೋರಿದರೆ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ಬೆಂಗಳೂರಿನ 32 ವರ್ಷದ ವ್ಯಕ್ತಿಯೊಬ್ಬರು ಮ್ಯೂಕರ್ಮೈಕೋಸಿಸ್ ಎಂಬ ಅಪರೂಪದ ಮತ್ತು ತೀವ್ರವಾದ ಫಂಗಲ್ ಸೋಂಕಿನಿಂದ ಬಳಲುತ್ತಿದ್ದರು. ಅಲ್ಲದೆ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ಕೂಡ ತಲುಪಿದ್ದರು. ಈ ರೀತಿಯ ಪ್ರಕರಣಗಳು ಕೋವಿಡ್ ಸಮಯದಲ್ಲಿ ಕಂಡುಬಂದಿತ್ತು. ಆದರೂ ನಂತರ ಈ ಕುರಿತು ಯಾರೂ ಎಚ್ಚೆತ್ತುಕೊಳ್ಳಲಿಲ್ಲ.
ಬೆಂಗಳೂರಿನ ರೋಗಿಯೊಬ್ಬರು ತಲೆ ಮತ್ತು ಕಣ್ಣಿನ ಸುತ್ತ ನೋವಿನಿಂದ ಬಳಲುತ್ತಿದ್ದರು. ಈ ರೀತಿಯ ಸಂದರ್ಭಗಳಲ್ಲಿ ಇದೊಂದು ಸಾಮಾನ್ಯ ನೋವು ಎಂದು ಅನೇಕರು ನಿರ್ಲಕ್ಷ್ಯ ತೋರುತ್ತಾರೆ ಮತ್ತು ಮನೆಮದ್ದುಗಳನ್ನು ಪ್ರಯೋಗಿಸುತ್ತಾರೆ. ಆದರೆ ತಲೆ, ಕಣ್ಣು, ಮೂಗಿನ ನೋವನ್ನು ನಿರ್ಲಕ್ಷಿಸಬಾರದು, ಅವು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಇಎನ್ಟಿ ತಜ್ಞರಾದ ಡಾ. ಯಶಸ್ವಿ ಶ್ರೀಕೌಳ.
ಇದನ್ನೂ ಓದಿ: ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ
ಆ ರೋಗಿಯು ಆಸ್ಪತ್ರೆಗೆ ಭೇಟಿ ನೀಡಿದಾಗ ನಾಸಲ್ ಎಂಡೋಸ್ಕೋಪಿಗೆ ಒಳಪಡಿಸಲಾಯಿತು. ರೋಗಿಯ ಮುಖದ ಬಲ ಮಧ್ಯದ ಟರ್ಬಿನೇಟ್ ಮೇಲೆ ಕಪ್ಪಾದ ಡಿಸ್ಚಾರ್ಜ್ (blackish discharge) ಕಂಡುಬಂದಿತು. ನಂತರ ಫಂಗಲ್ ಪರೀಕ್ಷೆಯಲ್ಲಿ ಮ್ಯೂಕರ್ಮೈಕೋಸಿಸ್ ಇದೆ ಎಂಬುದು ದೃಢಪಟ್ಟಿತು. ಮೆದುಳಿನಲ್ಲಿ ಬಾವು ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡದಿದ್ದರೆ ಸೋಂಕು ಶಾಶ್ವತವಾಗಿ ದೃಷ್ಟಿಹೀನತೆಗೆ ಕಾರಣವಾಗುತ್ತಿತ್ತು. ಸೋಂಕಿತ ಸೈನಸ್ ಅನ್ನು ಸ್ವಚ್ಛಗೊಳಿಸಲು ಮತ್ತು ಕಪ್ಪಾದ ಡಿಸ್ಚಾರ್ಜ್ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ನಡೆಸುವುದು ತಡವಾಗಿದ್ದಿದ್ದರೆ ರಾತ್ರೋರಾತ್ರಿ ರೋಗಿಯು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರು. ಕೋವಿಡ್ ನಂತರ ಹಲವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು, ಇಂಥವರಲ್ಲಿ ಸೋಂಕು ವೇಗವಾಗಿ ಹರಡುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಇದನ್ನೂ ಓದಿ: ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಾ, ಹಾಗಿದ್ರೆ ನಿರ್ಲಕ್ಷ್ಯ ಮಾಡದೆಯೇ ತಜ್ಞರ ಈ ಸಲಹೆ ಪಾಲಿಸಿ
ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ 6 ವಾರಗಳ ಕಾಲ ಇಂಟ್ರಾವೆನಸ್ ಆಂಫೋಟೆರಿಸಿನ್ ಬಿ (Amphotericin B) ಥೆರಪಿ ನೀಡಲಾಯಿತು. ತದನಂತರದಲ್ಲಿ ಕೈಗೊಂಡ ಎಂಆರ್ಐ ಸ್ಕ್ಯಾನ್ ಮೂಲಕ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಿರುವುದು ತಿಳಿದುಬಂದಿತು. ಇಲ್ಲಿ ಸಂತೋಷದ ವಿಷಯವೆಂದರೆ ರೋಗಿಯು ಆರೋಗ್ಯದ ಜೊತೆಗೆ ದೃಷ್ಟಿಯನ್ನು ಕಳೆದುಕೊಳ್ಳುವುದು ಸಹ ತಪ್ಪಿತು. ಈ ಪ್ರಕರಣದಿಂದ ತಿಳಿದುಬಂದದ್ದೇನೆಂದರೆ ತಲೆನೋವು, ಮೂಗಿನ ಸಮಸ್ಯೆಯನ್ನು ವಿಶೇಷವಾಗಿ COVID ನಂತರದ ದಿನಗಳಲ್ಲಿ ರೋಗಿಗಳು ನಿರ್ಲಕ್ಷಿಸಬಾರದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಯಾವುದೇ ಆರೋಗ್ಯ ಸಮಸ್ಯೆಯಾಗಲಿ ರೋಗಲಕ್ಷಣಗಳು ಕಂಡೊಡನೆ ಶೀಘ್ರವಾಗಿ ತಜ್ಞರನ್ನು ಭೇಟಿ ಮಾಡುವುದು ಒಳಿತು ಎಂದು ಡಾ. ಯಶಸ್ವಿ ಶ್ರೀಕೌಳ ಸಲಹೆ ನೀಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




