ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿಯಾಗಬಹುದು ಗೊತ್ತಾ? ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಯೂರಿನ್ ಇನ್ಫೆಕ್ಷನ್ ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ದೀರ್ಘಕಾಲದವರೆಗೆ ಮುಂದುವರಿದರೆ, ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು. ಹಾಗಾಗಿ ಮೂತ್ರನಾಳದ ಸೋಂಕು ಏಕೆ ಕಂಡುಬರುತ್ತದೆ ಮತ್ತು ಅವು ಯಾವಾಗ ಅಪಾಯಕಾರಿಯಾಗಬಹುದು ಜೊತೆಗೆ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನುತಿಳಿದುಕೊಂಡಿರಬೇಕಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಯೂರಿನ್ ಇನ್ಫೆಕ್ಷನ್ (ಮೂತ್ರನಾಳದ ಸೋಂಕು) ಸಾಮಾನ್ಯ ಸಮಸ್ಯೆಯಾದರೂ, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆರಂಭದಲ್ಲಿ ಕೇವಲ ಮೂತ್ರ ವಿಸರ್ಜನೆಯಾಗುವಾಗ ಉರಿಯೂತ ಅಥವಾ ಪದೇಪದೇ ಮೂತ್ರಕ್ಕೆ ಹೋಗುವ ಸಮಸ್ಯೆಯಂತೆ ಕಾಣಿಸಿದರೂ, ಸೋಂಕು ಹೆಚ್ಚಾದರೆ ಕಿಡ್ನಿಗೂ ಹಾನಿಯಾಗುವ ಅಪಾಯವಿದೆ. ತಜ್ಞರ ಪ್ರಕಾರ, ಯೂರಿನ್ ಇನ್ಫೆಕ್ಷನ್ (Urine Infection) ಸಾಮಾನ್ಯವಾಗಿ ಇ.ಕೋಲಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾ ಮೂತ್ರನಾಳದ ಮೂಲಕ ದೇಹಕ್ಕೆ ಪ್ರವೇಶಿಸಿ ಸೋಂಕು ಉಂಟುಮಾಡುತ್ತದೆ. ವೈಯಕ್ತಿಕ ಸ್ವಚ್ಛತೆಯ ಕೊರತೆ, ಕಡಿಮೆ ನೀರು ಕುಡಿಯುವುದು, ಅಸ್ವಚ್ಛ ಶೌಚಾಲಯ ಬಳಕೆ ಹಾಗೂ ಅನಗತ್ಯವಾಗಿ ಆಂಟಿಬಯೋಟಿಕ್ ಸೇವಿಸುವುದರಿಂದ ಈ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಈ ಸಮಸ್ಯೆ ಯಾವಾಗ ಅಪಾಯಕಾರಿಯಾಗಬಹುದು, ಈ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿ?
ಸೋಂಕು ಕೇವಲ ಮೂತ್ರಾಶಯದವರೆಗೆ ಸೀಮಿತವಾಗಿದ್ದರೆ ಸಾಮಾನ್ಯವಾಗಿ ಗಂಭೀರ ಸಮಸ್ಯೆಯಾಗುವುದಿಲ್ಲ. ಆದರೆ ಅದು ಕಿಡ್ನಿವರೆಗೆ ಹರಡಿದರೆ ಪರಿಸ್ಥಿತಿ ಗಂಭೀರವಾಗಬಹುದು. ದೀರ್ಘಕಾಲ ಸೋಂಕು ಮುಂದುವರಿದರೆ ಕಿಡ್ನಿ ಕಾರ್ಯಕ್ಷಮತೆ ಕುಸಿಯುವ ಅಪಾಯವೂ ಇದೆ. ತೀವ್ರ ಜ್ವರ, ಶೀತ, ವಾಂತಿ, ಮೂತ್ರದಲ್ಲಿ ರಕ್ತದ ಗುರುತು ಕಾಣಿಸುವುದು ಅಥವಾ ಬೆನ್ನುನೋವು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು.
ಸಾಮಾನ್ಯ ಲಕ್ಷಣಗಳು ಯಾವುವು?
- ಮೂತ್ರ ವಿಸರ್ಜನೆಯಾಗುವಾಗ ಉರಿಯೂತ
- ಪದೇಪದೇ ಮೂತ್ರಕ್ಕೆ ಹೋಗಬೇಕು ಎಂದು ಅನಿಸುವುದು
- ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ
- ಮೂತ್ರದಿಂದ ದುರ್ವಾಸನೆ ಬರುವುದು
- ಹೊಟ್ಟೆಯ ಕೆಳಭಾಗದಲ್ಲಿ ನೋವು
ಇದನ್ನೂ ಓದಿ: ಕೆಳಹೊಟ್ಟೆಯ ನೋವನ್ನು ನಿರ್ಲಕ್ಷಿಸಬೇಡಿ; ಇದು ಗಂಭೀರ ಕಾಯಿಲೆಗಳ ಸೂಚನೆಯಾಗಿರಬಹುದು
ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?
- ವೃದ್ಧರು
- ಮಧುಮೇಹ ರೋಗಿಗಳು
- ಗರ್ಭಿಣಿಯರು
- ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ
ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು?
ಸರಿಯಾಗಿ ನೀರು ಕುಡಿಯುವುದು, ಮೂತ್ರವನ್ನು ಹೆಚ್ಚು ಸಮಯ ತಡೆಯದೇ ಇರುವುದು ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ಸೇವಿಸಬಾರದು. ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Fri, 15 May 26





