ಒಂದಲ್ಲಾ, ಎರಡಲ್ಲಾ, ₹3,269 ಕೋಟಿ ಹಗರಣ: ಎಸ್​ಬಿಐನಿಂದ ದೂರು ದಾಖಲು

ಸುಮಾರು 24 ವರ್ಷಗಳ ಹಿಂದೆ ಸ್ಥಾಪನೆಯಾದ ಆಹಾರ ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಶಕ್ತಿಭೋಗ್​ ಉತ್ತರ ಭಾರತ ಪ್ರಾಂತ್ಯದಲ್ಲಿ ಗೋಧಿಹಿಟ್ಟು, ಅಕ್ಕಿ, ಬಿಸ್ಕತ್ ಮತ್ತು ಕುಕ್ಕೀಸ್ ಮಾರಾಟದಲ್ಲಿ ದೊಡ್ಡ ಹೆಸರು ಮಾಡಿದೆ. ಭಾರತದ ಇತರೆ ರಾಜ್ಯಗಳಲ್ಲಿ ಬೇರೆ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಹಿವಾಟು ನಡೆಸುತ್ತಿದೆ.

ಒಂದಲ್ಲಾ, ಎರಡಲ್ಲಾ, ₹3,269 ಕೋಟಿ ಹಗರಣ: ಎಸ್​ಬಿಐನಿಂದ ದೂರು ದಾಖಲು
ಪ್ರಾತಿನಿಧಿಕ ಚಿತ್ರ
Updated By: ರಾಜೇಶ್ ದುಗ್ಗುಮನೆ

Updated on: Jan 02, 2021 | 6:58 PM

ದೆಹಲಿ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಮುಂದಾಳತ್ವದ 10 ಬ್ಯಾಂಕ್​ಗಳಿಗೆ ₹3,269.42 ಕೋಟಿ ವಂಚಿಸಿರುವ ಆರೋಪದ ಮೇಲೆ ದೆಹಲಿ ಮೂಲದ ಶಕ್ತಿಭೋಗ್ ಆಹಾರ ನಿಗಮ ಮತ್ತು ಇನ್ನಿತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಶಕ್ತಿಭೋಗ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೇವಲ್​ ಕೃಷ್ಣನ್ ಕುಮಾರ್​, ನಿರ್ದೇಶಕ ಸಿದ್ಧಾರ್ಥ್​ ಕುಮಾರ್ ಮತ್ತು ಸುನಂದಾ ಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಸುಮಾರು 24 ವರ್ಷಗಳ ಹಿಂದೆ ಸ್ಥಾಪನೆಯಾದ ಆಹಾರ ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಶಕ್ತಿಭೋಗ್​ ಉತ್ತರ ಭಾರತ ಪ್ರಾಂತ್ಯದಲ್ಲಿ ಗೋಧಿಹಿಟ್ಟು, ಅಕ್ಕಿ, ಬಿಸ್ಕತ್ ಮತ್ತು ಕುಕ್ಕೀಸ್ ಮಾರಾಟದಲ್ಲಿ ದೊಡ್ಡ ಹೆಸರು ಮಾಡಿದೆ. ಭಾರತದ ಇತರೆ ರಾಜ್ಯಗಳಲ್ಲಿ ಬೇರೆ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಹಿವಾಟು ನಡೆಸುತ್ತಿದೆ.

ಎಫ್​ಐಆರ್​ ಪ್ರಕಾರ ವಿಧಿವಿಜ್ಞಾನ ಲೆಕ್ಕ ಪರಿಶೋಧಕರು 2019ನೇ ಇಸವಿಯ ಜೂನ್​ ತಿಂಗಳಲ್ಲಿ ಒಪ್ಪಿಸಿದ ವರದಿಯಿಂದಾಗಿ ಅಕ್ರಮ ವಹಿವಾಟು ಬೆಳಕಿಗೆ ಬಂದಿದೆ. ಏಪ್ರಿಲ್​ 2013ರಿಂದ ಮಾರ್ಚ್​ 2017ರ ನಡುವೆ ನಡೆದಿರುವ ವ್ಯವಹಾರದ ಲೆಕ್ಕಾಚಾರ ಮಾಡಿದಾಗ ಲೋಪ ಪತ್ತೆಯಾಗಿದೆ.

ಒಟ್ಟು ₹2,016 ಕೋಟಿ ವಹಿವಾಟು ನಡೆಸುತ್ತಿದ್ದ ಖಾತೆ ಮಾರ್ಚ್​ 2015ರ ವೇಳೆಗೆ ಅನುತ್ಪಾದಕ ಆಸ್ತಿಯಾಗಿ ಬದಲಾಗಿದೆ. ವಿಧಿವಿಜ್ಞಾನ ಲೆಕ್ಕ ಪರಿಶೋಧನಾ ವರದಿಯಲ್ಲಿ ಖಾತೆಗೆ ಸಂಬಂಧಿಸಿದ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿವೆ.

ಕೆಲವೊಂದು ಕಾರಣಕ್ಕಾಗಿ ವಿಮೆ ಮಾಡಿಸಿದ್ದು,  ಅದಕ್ಕಾಗಿ ಸಲ್ಲಿಸಿರುವ ದಾಖಲೆ ಸುಳ್ಳು. ಅಷ್ಟೇ ಅಲ್ಲದೇ ಸಹಿ ವಿಚಾರದಲ್ಲಿಯೂ ಅಕ್ರಮ ನಡೆದಿದ್ದು ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಸಹಿ ಮಾಡಿರುವುದು ಸಹ ಪತ್ತೆಯಾಗಿದೆ. ಈ ಎಲ್ಲಾ ವಿಚಾರವನ್ನು ಪರಿಶೀಲಿಸಿದ ಸಿಬಿಐ ಶಕ್ತಿಭೋಗ್​ ಆಹಾರ ನಿಗಮದ ವಿರುದ್ಧ ಪ್ರಕರಣ ದಾಖಲಿಸಿದೆ.

ಬೆಂಗಳೂರಲ್ಲಿ IMA ಅಕ್ರಮದ ಮಾದರಿಯಲ್ಲೇ ಮತ್ತೊಂದು ಬಹುಕೋಟಿ ವಂಚನೆ ಬಯಲಿಗೆ!