ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವ ಪತ್ತೆ, ಅತ್ಯಾಚಾರ ಶಂಕೆ
ಮೈಸೂರು ದಸರಾ ಅದ್ಧೂರಿಯಾಗಿ ತರೆಕಂಡಿದೆ. ವಿವಿಧ ವಸ್ತುಪ್ರದರ್ಶನ, ಕಲಾ ತಂಡಗಳ ಮನೋರಂಜನೆ ಕಾರ್ಯಕ್ರಮ, ಕುಸ್ತಿ, ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಈ ಬಾರಿಯ ಮೈಸೂರು ದಸರಾದಲ್ಲಿ ಆಯೋಜಿಸಲಾಗಿತ್ತು. ಆದ್ರೆ, ಈ ವೇಳೆ ಪೈಶಾಚಿಕ ಕೃತ್ಯವೊಂದು ನಡೆದಿದೆ. ದಸರೆಯಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ.

ಮೈಸೂರು, (ಅಕ್ಟೋಬರ್ 09): ವಸ್ತುಪ್ರದರ್ಶನ ಮೈದಾನದಲ್ಲಿ ದಸರಾದಲ್ಲಿ (Mysuru Dasara 2025) ಬಲೂನ್ ಮಾರಲು ಬಂದಿದ್ದ 10 ವರ್ಷದ ಬಾಲಕಿಯ (Girl) ಶವ ಪತ್ತೆಯಾಗಿದೆ. ಬಾಲಕಿಯ ದೇಹದ ಮೇಲೆ ಬಟ್ಟೆ ಇಲ್ಲದೆ ಮೃತದೇಹ ಪತ್ತೆಯಾದ ಕಾರಣ ಅತ್ಯಾಚಾರ ಎಸಗಿ ಕೊಲೆ (Rape and Murder) ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾ ಯಾವುದೇ ತೊಂದರೆಗಳಿಲ್ಲದೇ ಅದ್ಧೂರಿ ತೆರೆಕಂಡಿದೆ ಎನ್ನುವಷ್ಟರಲ್ಲೇ ಈ ಪೈಶಾಚಿಕ ಕೃತ್ಯ ನಡೆದಿದೆ.
ದಸರಾ ಸಮಯದಲ್ಲಿ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ (Kalaburagi) ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50 ಕ್ಕೂ ಹೆಚ್ಚು ಕುಟುಂಬ ಬಂದಿವೆ. ಇವರು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆ ನಡೆಸಿದ್ದರು. ಆದ್ರೆ, ಹಿಂದಿನ ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು. ಆದ್ರೆ, ಬೆಳಗ್ಗೆ ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಟೆಂಟ್ನಿಂದ 50 ಮೀ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಇದನ್ನೂ ಓದಿ: ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿ ಅತ್ಯಾಚಾರ ಕೊಲೆ:ಕೀಚಕನಿಗೆ ಪೊಲೀಸ್ ಗುಂಡೇಟು
ನಗ್ನ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ
ಇಂದು (ಅಕ್ಟೋಬರ್ 09) ಬೆಳಗ್ಗೆ 6:30ರ ಸುಮಾರಿಗೆ ಜೋಪಡಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಮೇಲೆ ಸರಿಯಾಗಿ ಬಟ್ಟೆಯಿರಲಿಲ್ಲ, ಇದರಿಂದ ಕುಟುಂಬಸ್ಥರು ಅತ್ಯಾ೧ಚಾರ ಮತ್ತು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಕೇವಲ ಎರಡು ದಿನಗಳ ಹಿಂದೆ, ಇದೇ ಸ್ಥಳದ ಮತ್ತೊಂದು ಬದಿಯಲ್ಲಿ ಒಬ್ಬ ವ್ಯಕ್ತಿಯ ಬರ್ಬರ ಹತ್ಯೆ ನಡೆದಿತ್ತು. ಒಟ್ಟಾರೆ ಎರಡು ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆ ಘಟನೆಗಳು ನಡೆದಿರುವುದು ಆಘಾತಕಾರಿಯಾಗಿದೆ.
ಕೇವಲ ಎರಡೇ ದಿನಗಳ ಬಾಲಕಿ ಶವ ಪತ್ತೆಯಾದ ಜಾಗದ ಬಳಿ ರೌಡಿಶೀಟರ್ನ ಸಹರ್ವತಿಯ ಕೊಲೆ ನಡೆದಿತ್ತು. ಈಗ ಅದೇ ಜಾಗದ ಸಮೀಪ ಬಾಲಕಿಯ ಮೃತದೇಹ ಸಿಕ್ಕಿದೆ. ವ್ಯಾಪಾರಕ್ಕೆ ಆಗಮಿಸಿದ್ಧ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನು ಪೊಲೀಸರು ಈಗ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಮೂಲಕ ಬಾಲಕಿ ಕೊಲೆ ಆರೋಪಿ ಗುರುತು ಪತ್ತೆಹಚ್ಚಿದ್ದಾರೆ.
ಕೊಲೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸ್ರು
ಬಾಲಕಿ ಶವ ಪತ್ತೆಯಾಗುತ್ತಿದ್ದಂತೆಯೇ ಮೈಸೂರು ಪೊಲೀಸರು, ಕೊಲೆ ಆರೋಪಿಗಾಗಿ ಬಲೆ ಬೀಸಿದ್ದರು. ವಿವಿಧ ಕಡೆಗಳಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಒಂದು ವಿಡಿಯೋನಲ್ಲಿ ಕೊಲೆ ಆರೋಪಿ ಪತ್ತೆಯಾಗಿದ್ದಾನೆ. ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಕೊಲೆ ಆರೋಪಿ ಎಂಬುವುದು ಪತ್ತೆಯಾಗಿದೆ. ಈ ಕಾರ್ತಿಕ್ ಪ್ರಕರಣವೊಂದರಲ್ಲಿ 2 ವರ್ಷ ಜೈಲಿನಲ್ಲಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಆದ್ರೆ, ಊರಿಗೆ ಹೋಗದೆ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಅಲೆಯುತ್ತಿದ್ದ ಎಂದು ತಿಳಿದುಬಂದಿದ. ಸದ್ಯ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿದ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Thu, 9 October 25



