ಬರ ಘೋಷಣೆಗೆ ಅರ್ಹತೆ ಪಡೆದ ಕರ್ನಾಟಕದ 62 ತಾಲೂಕುಗಳು: ಕೃಷ್ಣ ಬೈರೇಗೌಡ

ಕರ್ನಾಟಕ ಸಚಿವ ಸಂಪುಟ ಉಪಸಮಿತಿ ಸಭೆ ಇಂದು ನಡೆಯಿತು. ಈ ಸಭೆಯಲ್ಲಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ನಿಯಮದಂತೆ 113 ತಾಲೂಕಗಳ ಪೈಕಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಆದರೆ ಜಂಟಿ ಸಮೀಕ್ಷೆಯ ನಂತರ 51 ತಾಲೂಕುಗಳಲ್ಲಿ ಬೆಳೆ ಪರಿಸ್ಥಿತಿ ಕುಸಿದಿರುವ ಹಿನ್ನೆಲೆ ಈ ತಾಲೂಕುಗಳಲ್ಲಿ ಮೊತ್ತೊಮ್ಮೆ ಜಂಟಿ ಸಮೀಕ್ಷೆ ಮಾಡಲು ನಿರ್ಧಾರಿಸಲಾಗಿದೆ.

ಬರ ಘೋಷಣೆಗೆ ಅರ್ಹತೆ ಪಡೆದ ಕರ್ನಾಟಕದ 62 ತಾಲೂಕುಗಳು: ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ (ಎಡಚಿತ್ರ) ಮತ್ತು ಬರಗಾಲದ ಸಾಂದರ್ಭಿಕ ಚಿತ್ರ
Follow us
| Updated By: Rakesh Nayak Manchi

Updated on: Sep 04, 2023 | 5:34 PM

ಬೆಂಗಳೂರು, ಸೆ.4; ಕೇಂದ್ರ ಸರ್ಕಾರದ ನಿಯಮದಂತೆ ಕರ್ನಾಟಕದ 113 ತಾಲೂಕಗಳ ಪೈಕಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದರು. ಕರ್ನಾಟಕ ಸಚಿವ ಸಂಪುಟ ಉಪಸಮಿತಿ ಸಭೆಯ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಂಟಿ ಸಮೀಕ್ಷೆಯ ನಂತರ 51 ತಾಲೂಕುಗಳಲ್ಲಿ ಬೆಳೆ ಪರಿಸ್ಥಿತಿ ಕುಸಿದಿರುವ ಹಿನ್ನೆಲೆ ಈ ತಾಲೂಕುಗಳಲ್ಲಿ ಮೊತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಉಳಿದ 81 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಮೇಲೆ ಬರ ಘೋಷಣೆ ತೀರ್ಮಾನ ಮಾಡುತ್ತೇವೆ. ಇನ್ನೊಂದು ವಾರದೊಳಗೆ ಬರ ಬೆಳೆ ಸಮೀಕ್ಷೆ ಬರಲಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಬರ ತಾಲೂಕುಗಳ ಪಟ್ಟಿ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಬರಗಾಲ..ಇತ್ತ ಮಂತ್ರಾಲಯಕ್ಕೂ ತಟ್ಟಿದ ಬಿಸಿ! ತುಂಗಭದ್ರಾ ನದಿ ಖಾಲಿ, ಪುಣ್ಯ ಸ್ನಾನವಿಲ್ಲದೇ ಭಕ್ತರು ಬೇಸರ!

ಬರ ಘೋಷಣೆ ಪಟ್ಟಿ ಘೋಷಣೆಯಾದ ಬಳಿಕ ಕೇಂದ್ರ ಸರ್ಕಾರದ ನೆರವಿಗಾಗಿ ಮನವಿ ಸಲ್ಲಿಸುತ್ತೇವೆ. ಬರ ಘೋಷಣೆಯಾದ ದಿನದಿಂದ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲು ತೀರ್ಮಾನ ಮಾಡಲಾಗಿದೆ. ಬರ ಘೋಷಣೆ ನಂತರ ವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ಅಥವಾ ಬಾಡಿಗೆ ಬೋರವೆಲ್ ಮುಖಾಂತರ ಕುಡಿಯುವ ನೀರು ಒದಗಿಸಲು ತೀರ್ಮಾನಿಸಲಾಗಿದೆ. ಇದರ ವೆಚ್ಚವನ್ನ ಎಸ್​ಡಿಆರ್​​ಎಫ್ ಮುಖಾಂತರ ಬರಿಸಲು ಅನುಮತಿಸಲಾಗಿದೆ ಎಂದರು.

ಬಿತ್ತನೆ ಕಿಟ್ ವಿತರಿಸಲು ಅನುದಾನ

ಮುಂದಿನ ದಿನಗಳಲ್ಲಿ ಮೇವಿನ ಕೊರತೆ, ರೈತರಿಗೆ ಮೇವು ಬಿತ್ತನೆ ಕಿಟ್ ವಿತರಿಸಲು 20 ಕೋಟಿ ನೀಡಲು ತೀರ್ಮಾನ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅಕೌಂಟ್​ನಲ್ಲಿ ಹಣ ಇದೆ‌‌. ಯಾವುದೇ ಸಮಸ್ಯೆ ಇಲ್ಲ. ದಕ್ಷಿಣ ಒಳನಾಡಿನ ಭಾಗದಲ್ಲಿ ಹೆಚ್ಚಿನ ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲೂ ಸ್ಪಲ್ಪ ಮಟ್ಟಿನ ಮಳೆ ಕೊರತೆ‌ ಇದೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲೂ ಮಳೆ ಕೊರತೆಯಾಗಿದೆ ಎಂದರು.

ಸಚಿವ ಸಂಪುಟ ಉಪಸಮಿತಿ ಸಭೆಯ‌ ಮಾಧ್ಯಮ ಪ್ರಕಟಣೆ

  1. ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮಂಗಾರು ದುರ್ಬಲಗೊಂಡು ಜೂನ್ ತಿಂಗಳಿನಲ್ಲಿ ಶೇ.56 ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇಕಡಾ 73 ರಷ್ಟು ಮಳೆ ಕೊರತೆಯಾಗಿದೆ.
  2. ಒಟ್ಟಾರೆ ಪ್ರಸಕ್ತ ಮಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4 ರ ವರೆಗೆ ವಾಡಿಕೆಯಾಗಿ 711 ಮಿ.ಮೀ ಮಳೆಯಾಗಬೇಕಿತ್ತು. ವಾಸ್ತವಿಕ 526 ಮಿ.ಮೀ ಮಳೆಯಾಗಿದ್ದು, ಶೇಕಡಾ 26 ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ.
  3. ಬರ ಪರಿಸ್ಥಿತಿ ಬಗ್ಗೆ ನಿಗಾ ಮತ್ತು ನಿರ್ವಹಣೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈವರೆಗೆ 3 ಬಾರಿ ಸಭೆ ನಡೆಸಿ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪರಾಮರ್ಶಿಸಿದೆ.
  4. ಆಗಸ್ಟ್ 22 ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರಲ್ಲಿ ಸೂಚಿಸಲಾಗಿರುವ, ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇಕಡಾ 60), ಸತತ 3 ವಾರಗಳ ಶುಷ್ಕ ವಾತಾವರಣ, ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರತ ಬೆಳೆ ಸೂಚ್ಯಂಕ, ತೆೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ, ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.
  5. ಆಗಸ್ಟ್ 19 ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹಾಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಜಂಟಿ ಸಮೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದೆ.
  6. ಆಗಸ್ಟ್ 02 ಅಂತ್ಯಕ್ಕೆ ಅರ್ಹವಾಗಿರುವ 83 ತಾಲೂಕುಗಳಲ್ಲಿ Ground Truthingಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು.
  7. ಒಟ್ಟಾರೆ 51 ಮತ್ತು 83 ತಾಲೂಕುಗಳಲ್ಲಿ Ground Truthing ಮುಗಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
  8. ಈ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆವರದಿ ಆಧಾರದ ಅನುಸಾರ ಬರ ಘೋಷಣೆ ತೀರ್ಮಾನಿಸಲಾಗುವುದು.
  9. ಬರ ಘೋಷಣೆಯ ನಂತರ ಕೇಂದ್ರ ಸರ್ಕಾರದ ನೆರವಿಗಾಗಿ ಮನವಿ ಸಲ್ಲಿಸಲು (ಮೆಮೊರಾಂಡಮ್) ಸಲ್ಲಿಸಲಾಗುವುದು.
  10. ಬರ ಘೋಷಣೆಯಾದ ದಿನದಿಂದ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಲಾಗಿದೆ.
  11. ಬರ ಘೋಷಣೆ ನಂತರ ಕುಡಿಯುವ ನೀರು ಕೊರತೆ ಕಂಡುಬಂದ ವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ಮುಖಾಂತರ ಅಥವಾ ಬಾಡಿಗೆ ಬೋರ್ ವೆಲ್ ಮುಖಾಂತರ ತುರ್ತು ಕುಡಿಯುವ ನೀರು ಒದಗಿಸುವ ಖರ್ಚು ವೆಚ್ಚವನ್ನು SDRF ಮುಖಾಂತರ ಬರಿಸಲು ಅನುಮತಿಸಿದೆ.
  12. ಹಾಲಿ ಮೇವು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಮೇವಿನ ಕೊರತೆ ನಿಭಾಯಿಸಲು ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್ ವಿತರಿಸಲು ಪಶು ಸಂಗೋಪನೆ ಇಲಾಖೆಗೆ 20 ಕೋಟಿ ರೂ. ಮೊತ್ತ ವಿತರಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ