ಹಾಸನಾಂಬೆ ಸನ್ನಿಧಿಯಲ್ಲಿ ಪವಾಡ: ಕಳೆದಲ್ಲೇ ಸಿಕ್ತು 6 ಲಕ್ಷ ರೂ.ಮೌಲ್ಯದ ವಸ್ತು, ಇದು ಮೈಸೂರು ಮಹಿಳೆಯ ಸರದ ಕಥೆ

ಈಗಿನ ಕಾಲದಲ್ಲಿ ಕಳೆದು ಹೋದ ವಸ್ತು ವಾಪಸ್ ಸಿಗುವುದು ಅನುಮಾನ. ಹೀಗಾಗಿ ಕಳೆದುಕೊಂಡಿರುವುದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ ಅಂತಾರೆ. ಎಲ್ಲೋ ಸಿಕ್ಕವಸ್ತುವನ್ನು ತಮ್ಮದೆಂದು ತೋರಿಸಿಕೊಂಡು ತೆಗೆದುಕೊಂಡು ಹೋಗುವ ಜನರು ಉಂಟು. ಇವರ ನಡುವೆ ಸಿಕ್ಕ ವಸ್ತುವನ್ನು ಪ್ರಮಾಣಿಕವಾಗಿ ಮರಳಿ ವಾರಸುದಾರರಿಗೆ ಒಪ್ಪಿಸಿರುವ ಜನ ಸಹ ನಮ್ಮಲ್ಲಿ ಇದ್ದಾರೆ. ಇದಕ್ಕೆ ಪೂರಕವೆಂಬಂತೆ ಹಾಸನಾಂಬೆ ಸನ್ನಿಧಿಯಲ್ಲಿ ಪವಾಡವೊಂದು ನಡೆದಿದೆ.

ಹಾಸನಾಂಬೆ ಸನ್ನಿಧಿಯಲ್ಲಿ ಪವಾಡ: ಕಳೆದಲ್ಲೇ ಸಿಕ್ತು 6 ಲಕ್ಷ ರೂ.ಮೌಲ್ಯದ ವಸ್ತು, ಇದು ಮೈಸೂರು ಮಹಿಳೆಯ ಸರದ ಕಥೆ
Hasanambe

Updated on: Oct 21, 2025 | 6:58 PM

ಹಾಸನ, (ಅಕ್ಟೋಬರ್ 21): ಹಾಸನದ ಹಾಸನಾಂಬ (Hassan Hasanabe) ದೇವಾಲಯವು ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತೆ. ಆಕೆಯನ್ನು ಭಕ್ತರು (devotees) ಸಪ್ತ ಮಾತೃಕೆ, ಅಂಬಾ ದೇವಿ, ಮಹಾದೇವಿ ಎಂಬ ಹೆಸರಿನಿಂದಲೂ ಕರೆದು ಆರಾಧಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆದು ದರ್ಶನ ಭಾಗ್ಯ ಕರುಣಿಸುವ ಈ ದೇವತೆಯ ಆಶೀರ್ವಾದ ಪಡೆಯಲು ಕೇವಲ ರಾಜ್ಯದ ಜನರು ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದಲೂ ಬರುತ್ತಾರೆ. ಇಂತಹ ಶಕ್ತಿಯು ಹಾಸನಾಂಬೆ ಸನ್ನಿಧಿಯಲ್ಲಿ ಇಂದು ಪವಾಡವೊಂದು ನಡೆದಿದೆ. ಹೌದು…ಗದ್ದಲದಲ್ಲಿ 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ (Gold Chain) ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಗೆ ವಾಪಸ್ ಸಿಕ್ಕಿದೆ. ಸರ ಕಳೆದಾಗ ಯಾಕಾದ್ರೂ ಈ ದೇವಸ್ಥಾನಕ್ಕೆ ಬಂದೆ ಎಂದುಕೊಂಡು ಕಣ್ಣಿರುತ್ತಿದ್ದ ಮಹಿಳೆಗೆ ವಾಪಸ್ ಚಿನ್ನದ ಸರ ಸಿಕ್ಕಿದ್ದು, ನಿಟ್ಟುಸಿರುಬಿಟ್ಟಿದ್ದಾಳೆ.

ಮೈಸೂರಿನಿಂದ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ದೇವಿಯ ದರ್ಶನ ಪಡೆಯುವ ವೇಳೆ ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಇದರಿಂದ ಕಂಗಾಲಾಗಿದ್ದ ಮಹಿಳೆ ಚಿನ್ನದ ಸರ ಹೊಯ್ತು ಎಂದು ಕಣ್ಣಿರಿಟ್ಟಿದ್ದಳು. ಅಷ್ಟೇ ಅಲ್ಲ ಯಾಕಾದ್ರೂ ದೇವಸ್ಥಾನಕ್ಕೆ ಬಂದ್ನೋ ಎಂದು ಗೋಳಾಡುತ್ತಿದ್ದಳು. ಇದೇ ವೇಳೆ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸನ್ನಿಧಿ ಆವರಣದಲ್ಲೇ ಚಿನ್ನದ ಸರ ಸಿಕ್ಕಿದೆ.

ಇದನ್ನೂ ಓದಿ: ಹಾಸನಾಂಬೆ ದರ್ಶನ ವೇಳೆ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ: ಭಕ್ತಿ ಮೆರೆದ ವ್ಯಕ್ತಿ

ಕೂಡಲೇ ಆ ವ್ಯಕ್ತಿ ಚಿನ್ನದ ಸರವನ್ನು ಅಲ್ಲೇ ಇದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಕಾರ್ಯಕರ್ತರ ಮೂಲಕ ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದ್ದಾರೆ.  ಬಳಿಕ ಅಧಿಕಾರಿಗಳು ದೇವಸ್ಥಾನದ ಮೈಕಿನಲ್ಲಿ ಸರ ಸಿಕ್ಕಿರುವ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಯಾವಾಗ ಮೈಕಿನ ಸೌಂಡ್ ಕೇಳಿತೋ ಸರ ಕಳೆದುಕೊಂಡ ಮಹಿಳೆ ಎದ್ನೋ ಬಿದ್ನೋ ಅಂತ ದೇವಾಲಯದ ಆಡಳಿತ ಕಚೇರಿಗೆ ಓಡೋಡಿ ಹೋಗಿದ್ದಾಳೆ.

ಬಳಿಕ ದೇವಸ್ಥಾನದ ಸಿಬ್ಬಂದಿ ಮಹಿಳೆಯಿಂದ ಸರದ ಸರಿಯಾದ ಮಾಹಿತಿ ಪಡೆದುಕೊಂಡರು. ಅಂದರೆ ಸರದ ಗುರುತು, ಯಾವ ಸರ? ಯಾವ ರೀತಿ ಇದೆ? ಅಂತೆಲ್ಲಾ ಮಾಹಿತಿ ಪಡೆದುಕೊಂಡು ಬಳಿಕ ಅದು ಆಕೆಯದ್ದೇ ಎಂದು ಖಚಿತವಾದ ಬಳಿಕ ಮಹಿಳೆಗೆ ಸರವನ್ನು ಹಸ್ತಾಂತರಿಸಿದರು. ಇದರಿಂದ ಮಹಿಳೆ ಫುಲ್ ಖುಷ್ ಆಗಿದ್ದಾರೆ.

ಇನ್ನು ಸಿಕ್ಕ ಚಿನ್ನದ ಸರವನ್ನು ತಂದು ಕೊಟ್ಟು ವ್ಯಕ್ತಿಯ ಈ ಅಪೂರ್ವ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ದರ್ಶನೋತ್ಸವದ ಪಾವಿತ್ರ್ಯತೆ ಮತ್ತು ಭಕ್ತರ ಸದ್ಗುಣಕ್ಕೆ ಸಾಕ್ಷಿಯಾಗಿದೆ ಎಂದರು. ಇನ್ನು ವ್ಯಕ್ತಿ ಸಹ ಎಲ್ಲರ ಮೆಚ್ಚುಗೆ ಮಾತುಗಳಿಂದ ಪುಳಕಿತರಾದರು.

ಒಟ್ಟಿನಲ್ಲಿ ಒಂದು ರೂಪಾಯಿ ಸಿಕ್ಕರೂ ಬಿಡದ ಈಗಿನ ಕಾಲದಲ್ಲಿ ಬರೋಬ್ಬರಿ 6 ಲಕ್ಷ ರೂ. ಮೌಲ್ಯದ ಸಿಕ್ಕ ಚಿನ್ನದ ಸರವನ್ನು ವಾಪಸ್ ವಾರಸುದಾರರಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us