ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಆರಂಭವಾಗಿದ್ದು ಹೇಗೆ? ವಂಚನೆಗೆ ಹಾಕಿದ್ದ ಸ್ಕೆಚ್​ನ ಸಂಪೂರ್ಣ ವಿವರ ಇಲ್ಲಿದೆ

|

Updated on: Jul 11, 2024 | 2:26 PM

ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಕ್ಷಣಕ್ಕೊಂದು ತಿರುವು ಸಿಗುತ್ತಾ ಇದೆ. ಜಾರಿ ನಿರ್ದೇಶನಾಲಯ ಪ್ರವೇಶವಾದ ಮೇಲೆ, ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಅವರ ಸುತ್ತ ಇದ್ದವರೆಲ್ಲ ಮೆತ್ತಗಾಗುವಂತೆ ಮಾಡಿದೆ. ಹಗರಣ ಬೆಳಕಿಗೆ ಬಂದಮೇಲೆ, ಮೊದಲು ಎಸ್​​ಐಟಿ ತನಿಖೆ ಶುರು ಮಾಡಿತ್ತು. ಅತ್ತ ಸಿಬಿಐ ಕೂಡಾ ತನಿಖೆ ಆರಂಭಿಸಿತ್ತು. ಇದೀಗ ಇಡಿ ಅಧಿಕಾರಿಗಳ ಪ್ರವೇಶ ಇಡೀ ಪ್ರಕರಣವನ್ನೇ ಮತ್ತೊಂದು ದಿಕ್ಕಿಗೆ ಹೊರಳಿಸಿದೆ. ಈ ಹಗರಣ ಶುರುವಾಗಿದ್ದು ಹೇಗೆ? ದುಡ್ಡು ಕಬಳಿಸುವ ಸಂಚು ಆರಂಭವಾಗಿದ್ದು ಎಲ್ಲಿ? ರಹಸ್ಯ ಮೀಟಿಂಗ್ ನಡೆದಿದ್ದು ಎಲ್ಲಿ ಎಂಬ ಸಂಪೂರ್ಣ ವಿವರ ಇಲ್ಲಿದೆ.

ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಆರಂಭವಾಗಿದ್ದು ಹೇಗೆ? ವಂಚನೆಗೆ ಹಾಕಿದ್ದ ಸ್ಕೆಚ್​ನ ಸಂಪೂರ್ಣ ವಿವರ ಇಲ್ಲಿದೆ
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಆರಂಭವಾಗಿದ್ದು ಹೇಗೆ? ವಂಚನೆಗೆ ಹಾಕಿದ್ದ ಸ್ಕೆಚ್​ನ ಸಂಪೂರ್ಣ ವಿವರ ಇಲ್ಲಿದೆ
Follow us on

ಬೆಂಗಳೂರು, ಜುಲೈ 11: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಬೆಳಕಿಗೆ ಬಂದಮೇಲೆ ಎಸ್​ಐಟಿ, ಸಿಬಿಐ, ಸದ್ಯ ಇಡಿ ಅಧಿಕಾರಿಗಳು ಕೂಡಾ ತನಿಖೆ ತೀವ್ರಗೊಳಿಸಿದ್ದಾರೆ. ಮಾಜಿ ಸಚಿವ ಬಿ ನಾಗೇಂದ್ರಗೆ ಬಿಸಿ ಮುಟ್ಟಿಸಿದ್ದಾರೆ. ಆದರೆ ಈಗ ಹಗರಣ ಶುರುವಾಗಿದ್ದು, ಅಂದರೆ ದುಡ್ಡು ಹೊಡೆಯುವ ಸಂಚು ಆರಂಭವಾಗಿದ್ದು ಹೇಗೆ, ಹಂಚಿಕೆ ಆಗಿದ್ದು ಹೇಗೆ? ಹಣ ಎಲ್ಲಿಗೆ ವರ್ಗಾವಣೆಯಾಗಿತ್ತು ಎಂಬ ಸ್ಫೋಟಕ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

2023ರ ಡಿಸೆಂಬರ್​ನಲ್ಲಿ ಡೀಲ್ ಸ್ಕೆಚ್!

2023ರ ಡಿಸೆಂಬರ್​ನಲ್ಲಿ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್​​ನಲ್ಲಿ ಒಂದು ಮೀಟಿಂಗ್ ನಡೆಯುತ್ತದೆ. ಆ ರಹಸ್ಯ ಸಭೆಯಲ್ಲಿ ಮಾಜಿ ಸಚಿವ ನಾಗೇಂದ್ರ ಪಿಎ ದೇವೇಂದ್ರಪ್ಪ, ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್​, ವಾಲ್ಮೀಕಿ ನಿಗಮದ ಎಂಡಿ ಆಗಿದ್ದ ಪದ್ಮನಾಭ, ಆಂಧ್ರ ಮೂಲದ ನಾಗೇಶ್ವರ್​ ರಾವ್ ಹಾಗೂ ಯೂನಿಯನ್​ ಬ್ಯಾಂಕ್​ನ ಅಧಿಕಾರಿಯೊಬ್ಬರು ಭಾಗವಹಿಸಿದ್ದರು. ಅದೇ ಶಾಂಗ್ರಿಲಾ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ 187 ಕೋಟಿ ರೂಪಾಯಿ ವಂಚನೆಗೆ ಮೆಗಾ ಸ್ಕೆಚ್ ಹಾಕಲಾಗಿತ್ತು. ಸಭೆಯಲ್ಲಿ ಮೊದಲು ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಯೂನಿಯನ್ ಬ್ಯಾಂಕ್​ನಲ್ಲಿ ಖಾತೆ ತೆರೆಯುವಂತೆ ಅಂದು ನಿಗಮದ ಎಂಡಿ ಆಗಿದ್ದ ಪದ್ಮನಾಭಗೆ ಸೂಚಿಸಿದ್ದ. ಆಗ ಪದ್ಮನಾಭ, ಹಾಗೆ ಅಕೌಂಟ್ ತೆರೆಯಲು ಸಾಧ್ಯವಿಲ್ಲ, ಆಗಲ್ಲ ಎಂದಿದ್ದರು.

ಅಲ್ಲಿಗೆ, 187 ಕೋಟಿ ರೂಒಆಯಿ ಲೂಟಿ ಮಾಡುವ ಸಭೆಗೆ ಹಿನ್ನಡೆ ಆಗಿತ್ತು. ಹಾಗಂತ ಅಲ್ಲಿಗೆ ಆ ಸಭೆ ಮುಗಿಯಲಿಲ್ಲ. ಯಾಕಂದ್ರೆ ಪದ್ಮನಾಭ್ ಖಾತೆ ತೆರೆಯಲು ಆಗಲ್ಲ ಎನ್ನುತ್ತಿದ್ದಂತೆ, ಅಲ್ಲಿಗೆ ಖುದ್ದು ಅಂದು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ನಾಗೇಂದ್ರ ಪ್ರವೇಶವಾಗುತ್ತದೆ.

ಡೀಲ್ ಮೀಟಿಂಗ್​ಗೆ ನಾಗೇಂದ್ರ ಎಂಟ್ರಿ

ಅಂದಹಾಗೆ ಹೊಸ ಖಾತೆ ತೆರೆಯಲು ಆಗಲ್ಲ ಎಂದು ನೆಕ್ಕಂಟಿ ನಾಗರಾಜ್​ಗೆ ಪದ್ಮನಾಭ್ ತಿಳಿಸಿದ್ದ. ಇಲ್ಲಿ ಮೀಟಿಂಗ್ ನಡೆಯುತ್ತಿರುವಾಗ, ಹೋಟೆಲ್ ಹೊರಗೆ ಕಾರಿನಲ್ಲಿ ಶಾಸಕ ನಾಗೇಂದ್ರ ಕಾಯುತ್ತಿದ್ದರು. ಖಾತೆ ತೆರೆಯಲಾಗಲ್ಲ ಅನ್ನೋ ಸಂಗತಿ ಹೊರಗೆ ಇದ್ದ ನಾಗೇಂದ್ರಗೆ ತಿಳಿಯುತ್ತದೆ. ಪದ್ಮನಾಭ ಆಗಲ್ಲ ಎಂದು ಹೇಳುತ್ತಿದ್ದಂತೆಯೇ ಹೋಟೆಲ್​ಗೆ ಖುದ್ದು ನಾಗೇಂದ್ರ ಎಂಟ್ರಿ ಕೊಟ್ಟಿದ್ದಾರೆ. ಬಳಿಕ, ಖಾತೆ ತೆರೆದು ಠೇವಣಿ ಇಡುವಂತೆ ಖುದ್ದು ಪದ್ಮನಾಭಗೆ ಸೂಚನೆ ಕೊಟ್ಟಿದ್ದರು. ಇಲ್ಲಿಂದಲೇ 187 ಕೋಟಿ ರೂಪಾಯಿ ವಂಚನೆ ಎಸಗುವ ಡೀಲ್ ಪ್ರಾರಂಭವಾಗಿತ್ತು. ಈ ಮೀಟಿಂಗ್ ನಂತರ ಹೊಸ ಖಾತೆ ಓಪನ್ ಆಗಿತ್ತು. ಹಣ ವರ್ಗಾವಣೆ ಆಗಿತ್ತು.

ಹಣ ಹಂಚಿಕೆಯಾಗಿದ್ದು ಹೇಗೆ?

ನಾಗೇಂದ್ರ ಸೂಚನೆ ಬಳಿಕ ಖಾತೆಯೂ ಓಪನ್ ಆಗಿತ್ತು. ಜೊತೆಗೆ ಆರೋಪಿಗಳ ಕಳ್ಳಾಟವೂ ಶುರುವಾಗಿತ್ತು. ಮೊದಲಿಗೆ ಬೆಂಗಳೂರಿನ ವಸಂತನಗರದ ಶಾಖೆಯಲ್ಲಿ ನಿಗಮದ 2 ಖಾತೆಗಳಿರುತ್ತವೆ. ಅದರಲ್ಲಿ ಒಂದು ಖಾತೆಯನ್ನ ಎಂಜಿ ರಸ್ತೆ ಶಾಖೆಗೆ ವರ್ಗಾವಣೆಗೆ ಸಂಚು ಹೂಡಲಾಗುತ್ತದೆ. ಎಂಡಿ ಪದ್ಮನಾಭ್ ಸರ್ಕಾರದ ಅನುಮತಿ ಪಡೆಯದೇ ಖಾತೆ ವರ್ಗಾವಣೆ ಮಾಡುತ್ತಾರೆ. ಬಳಿಕ 187 ಕೋಟಿ ರೂಪಾಯಿ ಹಣವನ್ನ ಹೊಸ ಖಾತೆಗೆ ಪದ್ಮನಾಭ ವರ್ಗಾಯಿಸಿದ್ದರು. ಈ 187 ಕೋಟಿ ರೂಪಾಯಿ ಬೇರೆ ಬ್ಯಾಂಕ್​ನಲ್ಲಿದ್ದ, ಟ್ರೆಜರಿ ಹೂಜುರ್​​-2ನಲ್ಲಿದ್ದ ಹಣವಾಗಿತ್ತು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಪಂಪಣ್ಣ ಹಿನ್ನೆಲೆಯೇ ರೋಚಕ!

ಹೀಗೆ ಒಂದೇ ಸಲಕ್ಕೆ ಬರೋಬ್ಬರಿ 187 ಕೋಟಿ ರೂಪಾಯಿ ವರ್ಗಾವಣೆ ಆಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಈ ಹಣವನ್ನ ವಿಲೇವಾರಿ ಮಾಡುವ ಕೆಲಸ.

ಎಲ್ಲಿಗೆಲ್ಲ ವರ್ಗಾವಣೆಯಾಯಿತು ಹಣ?

187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್​ ಬ್ಯಾಂಕ್​ಗೆ ಅಂದರೆ, ಹೈದರಾಬಾದ್​ನ ಫಸ್ಟ್​ ಬ್ಯಾಂಕ್​​ಗೆ ವರ್ಗಾಯಿಸಲಾಗುತ್ತದೆ. ಫಸ್ಟ್​ ಬ್ಯಾಂಕ್​ನ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗುತ್ತದೆ. ಇದೆಲ್ಲವೂ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್​ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆ ಆಗುತ್ತದೆ. ಹೀಗೆ ವರ್ಗಾವಣೆ ಆದ ಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದ. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್​ ಬ್ಯಾಂಕಿಂಗ್​​, ಆರ್​​ಟಿಜಿಎಸ್, ಫೋನ್​ ಪೇ, ಗೂಗಲ್​ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರು.

ಪದ್ಮನಾಭ್​​ಗೆ ಸಿಕ್ಕಿದ್ದು ಭರ್ತಿ ₹5 ಕೋಟಿ ಪಾಲು

ನಿಗಮದ ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂಪಾಯಿ ಪಾಲು ಬಂದಿತ್ತು. ಈ ಹಣದಲ್ಲಿ ಅರ್ಧ ಹಣವನ್ನ ಮಗನ ಸ್ನೇಹಿತನ ಮನೆಯಲ್ಲಿ, ಅಂದರೆ ನೆಲಮಂಗಲದ ಗೋವಿನಹಳ್ಳಿಯ ಕೆಂಪೇಗೌಡ ಮನೆಯಲ್ಲಿದ್ದ ಇಟ್ಟಿದ್ದ. ಸದ್ಯ ಕೆಂಪೇಗೌಡ ಮನೆಯಲ್ಲಿ ಎಸ್​ಐಟಿ ಅಧಿಕಾರಿಗಳು 3.64 ಕೋಟಿ ರೂಪಾಯಿ ಹಣವನ್ನ ಸೀಜ್​ ಮಾಡಿದ್ದಾರೆ. ಅಲ್ಲದೆ, ಪದ್ಮನಾಭ ಸ್ನೇಹಿತರೊಬ್ಬರ ಕಾರಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂಪಾಯಿ ನಗದು ಕೂಡ ಸೀಜ್ ಆಗಿದೆ. ಅಲ್ಲದೆ, ನಾಗೇಂದ್ರ ಆಪ್ತ ಹರೀಶ್​​ಗೆ 25 ಲಕ್ಷ, ದದ್ದಲ್​ ಆಪ್ತನಿಗೆ 55 ಲಕ್ಷ, ದದ್ದಲ್​ ಆಪ್ತ ಹಂಪಣ್ಣಗೆ 55 ಲಕ್ಷ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಹೀಗೆ 94 ಕೋಟಿ ರೂಪಾಯಿ ಹಣವನ್ನ ನೆಕ್ಕಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮಾ ಹಂಚಿಕೆ ಮಾಡಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಈವರೆಗೆ ಬಂಧನಕ್ಕೊಳಗಾದವರು ಯಾರೆಲ್ಲ? ವಿವರ ಇಲ್ಲಿದೆ ನೋಡಿ

ಹೀಗೆ ತನಿಖೆಯಲ್ಲಿ ಸದ್ಯ 94 ಕೋಟಿ ಹಣ ವಿಲೇವಾರಿ ಆಗಿರುವುದು ತಿಳಿದುಬಂದಿದೆ. ಮಾಜಿ ಸಚಿವ ನಾಗೇಂದ್ರನ ಸೂಚನೆ ಮೇರೆಗೆ ಎಲ್ಲವೂ ನಡೆದಿದೆ ಎಂಬುದು ತನಿಖೆಯಲ್ಲಿ ಬಹುತೇಕ ದೃಢಪಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ನಾಗೇಂದ್ರ ಯಾವುದೇ ಕ್ಷಣದಲ್ಲಾದರೂ ಬಂಧಕ್ಕೊಳಗಾಗುವ ಸಾಧ್ಯತೆ ಇದೆ.

ಮಾಹಿತಿ: ಕಿರಣ್​ ಹೆಚ್​ವಿ, ಪ್ರದೀಪ್, ರಾಚಪ್ಪಾಜಿ ನಾಯ್ಕ್ ‘ಟಿವಿ9’

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ