ಬಿಜೆಪಿ ಭಿನ್ನಮತಕ್ಕೆ ದಿನಕ್ಕೊಂದು ಆಯಾಮ: ಬಳ್ಳಾರಿ ಪಾದಯಾತ್ರೆಗೆ ಶಾಸಕಾಂಗ ಪಕ್ಷದ ನಾಯಕರಿಂದಲೇ ಬೆಂಬಲ

| Updated By: ಗಣಪತಿ ಶರ್ಮ

Updated on: Aug 15, 2024 | 6:32 AM

ರಾಜ್ಯ ಬಿಜೆಪಿಯೊಳಗಿನ ಅಸಮಾಧಾನದ ಮಾತುಗಳು ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿವೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದ ಸಿ.ಟಿ. ರವಿಗೆ, ಇದು ಹಾದಿ ಬೀದಿಯಲ್ಲಿ ಮಾತಾಡುವ ವಿಷಯವಲ್ಲ ಎಂದು ವಿಪಕ್ಷ ನಾಯಕ ಅಶೋಕ್ ವಿರೋಧಿಸಿದ್ದಾರೆ. ಇದರ ಜೊತೆಗೆ ಬಳ್ಳಾರಿ ಪಾದಯಾತ್ರೆಗೆ ನಾನೂ ಹೋಗುತ್ತೇನೆ ಎನ್ನುವ ಮೂಲಕ ಪ್ರತ್ಯೇಕ ಪಾದಯಾತ್ರೆಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಿಂದಲೇ ಬೆಂಬಲ ಸಿಕ್ಕಿದೆ.

ಬಿಜೆಪಿ ಭಿನ್ನಮತಕ್ಕೆ ದಿನಕ್ಕೊಂದು ಆಯಾಮ: ಬಳ್ಳಾರಿ ಪಾದಯಾತ್ರೆಗೆ ಶಾಸಕಾಂಗ ಪಕ್ಷದ ನಾಯಕರಿಂದಲೇ ಬೆಂಬಲ
ಆರ್ ಅಶೋಕ, ಸಿಟಿ ರವಿ, ವಿಜಯೇಂದ್ರ
Follow us on

ಬೆಂಗಳೂರು, ಆಗಸ್ಟ್ 15: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತಂತೆ ಬಳ್ಳಾರಿಗೆ ಬಿಜೆಪಿ ಶಾಸಕರ ನೇತೃತ್ವದ ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಸಿಗುತ್ತದೋ ಇಲ್ಲವೋ ಎಂಬುದು ಸದ್ಯಕ್ಕೆ ರಾಜ್ಯ ಬಿಜೆಪಿಯ ಕಾರಿಡಾರ್​​ನಲ್ಲಿ ಓಡಾಡುತ್ತಿರುವ ಪ್ರಶ್ನೆ. ಅತ್ತ ಸಂಖ್ಯಾಬಲ ಕ್ರೋಢೀಕರಿಸಿಕೊಂಡು ರಾಜ್ಯ ನಾಯಕತ್ವದ ವಿರುದ್ಧದ ಅಸಮಾಧಾನಿತ ಶಾಸಕರ ತಂಡ ಸಿದ್ಧತೆಯಲ್ಲಿದ್ದರೆ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೇ ಪಾದಯಾತ್ರೆಗೆ ಹೋಗುವುದಾಗಿ ಹೇಳಿದ್ದಾರೆ.

ಹೈಕಮಾಂಡ್ ಅನುಮತಿ ಕೊಟ್ಟರೆ ತಾವೂ ಹೋಗಿ ಭಾಗವಹಿಸುವುದಾಗಿ ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್ ಹೇಳಿರುವುದು, ಪಾದಯಾತ್ರೆ ನಡೆಯಬೇಕು ಎಂಬ ಇರಾದೆ ಬಿಜೆಪಿಯ ಹಲವರಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಮಧ್ಯೆ ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕಾರಣದ ಬಗ್ಗೆ ಧ್ವನಿ ಎತ್ತಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿಗೆ ಆರ್ ಅಶೋಕ್ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಂದಾಣಿಕೆ ಬಗ್ಗೆ ಕೇವಲ ಮಾತನಾಡದೇ ದಾಖಲೆ ಸಮೇತ ಮಾತಾಡಬೇಕು ಎಂದಿದ್ದಾರಲ್ಲದೇ, ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು ಎಂದು ಪರೋಕ್ಷ ಸೂಚನೆ ನೀಡಿದ್ದಾರೆ.

ಕೇಶವಕೃಪಾಕ್ಕೆ ವಿಜಯೇಂದ್ರ ದೌಡು

ಈ ಬೆಳವಣಿಗೆಗಳ ನಡುವೆಯೇ ಬುಧವಾರ ಬಿವೈ ವಿಜಯೇಂದ್ರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್​​​ಎಸ್​​ಎಸ್ ಕಚೇರಿ ಕೇಶವಕೃಪಾಕ್ಕೆ ಭೇಟಿ ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನೂ ವಿಜಯೇಂದ್ರ ಭೇಟಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಬೆಳವಣಿಗಳ ನಡುವೆಯೇ ಆರ್​​​ಎಸ್​​ಎಸ್ ಕಚೇರಿಗೆ ಭೇಟಿ ಮಾಡಿ ಮುಖಂಡರೊಂದಿಗೆ ಚರ್ಚೆ ಮಾಡಿರುವುದು ಮಹತ್ವ ಪಡೆದಿದೆ.

ಇದನ್ನೂ ಓದಿ: ವಿಜಯೇಂದ್ರ ಬಗ್ಗೆ ಸೂಕ್ತ ಸಮಯದಲ್ಲಿ ವರಿಷ್ಠರಿಂದ ತೀರ್ಮಾನ: ಆರ್ ಅಶೋಕ್

ಈ ಮಧ್ಯೆ ಇಂದು ನಡೆಯಬೇಕಿದ್ದ ಬಿಜೆಪಿ-ಆರ್​​​ಎಸ್​​ಎಸ್ ಮುಖಂಡರ ಸಮನ್ವಯ ಸಭೆ ಮುಂದೂಡಿಕೆಯಾಗಿದೆ. ಆಗಸ್ಟ್ 21 ರಂದು ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರಿನ ಆರ್​​​ಎಸ್​​ಎಸ್ ಕಚೇರಿ ಕೇಶವಕೃಪಾದಲ್ಲೇ ಸಭೆ ನಡೆಯಲಿದ್ದು, ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ, ಸೇರಿದಂತೆ ಸುಮಾರು 40 ರಷ್ಟು ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮುಡಾ ಪಾದಯಾತ್ರೆಯ ನಿರ್ವಹಣೆ, ಪ್ರತ್ಯೇಕ ಪಾದಯಾತ್ರೆಯ ಬೇಡಿಕೆ, ಮುನ್ನೆಲೆಗೆ ಬಂದ ಹೊಂದಾಣಿಕೆ ರಾಜಕಾರಣದ ವಿಚಾರ, ಹಿರಿಯ ನಾಯಕರ ಪ್ರತ್ಯೇಕ ಸಭೆಗಳು ಸೇರಿದಂತೆ ಹಲವು ವಿಚಾರ ಚರ್ಚೆಗೊಳಪಡುವ ನಿರೀಕ್ಷೆ ಇದೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 am, Thu, 15 August 24