ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ

ಬಾಗಲಕೋಟೆ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಸಮರ ಸಾರಿದ್ದಾರೆ. ಒಂದೇ ವರ್ಷದಲ್ಲಿ 10 ಕೋಟಿಗೂ ಹೆಚ್ಚು ದಂಡ ವಿಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಆದರೆ ವಿಧಿಸಿದ ದಂಡದಲ್ಲಿ ಕೇವಲ 1.72 ಕೋಟಿ ರೂ ಮಾತ್ರ ಸಂಗ್ರಹವಾಗಿದೆ. ಇನ್ನು ಹೈಟೆಕ್ ತಂತ್ರಜ್ಞಾನದಿಂದಾಗಿ ಅಪಘಾತ ಹಾಗೂ ಅಪರಾಧ ಪ್ರಮಾಣ ಶೇ.20ರಷ್ಟು ಕಡಿಮೆ ಆಗಿದೆ.

ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ
ಟ್ರಾಫಿಕ್ ಫೈನ್
Image Credit source: tv9 kannada
Edited By:

Updated on: Jul 02, 2026 | 8:29 PM

ಬಾಗಲಕೋಟೆ, ಜುಲೈ 02: ಬಾಗಲಕೋಟೆ (bagalkot) ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಡಿಜಿಟಲ್ ಸಮರ ಸಾರಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ದಂಡ (Fine) ವಿಧಿಸುವ ಮೂಲಕ ದಾಖಲೆ ಬರೆದಿದ್ದಾರೆ. 2 ಲಕ್ಷಕ್ಕೂ ಅಧಿಕ ಕೇಸ್​​ ದಾಖಲಾಗಿದ್ದು, ಸದ್ಯ ಒಂದೂವರೆ ಕೋಟಿ ರೂ ವಸೂಲಿ ಮಾಡಲಾಗಿದೆ.

10 ಕೋಟಿ 22 ಲಕ್ಷ 97 ಸಾವಿರ ರೂ ಟ್ರಾಫಿಕ್ ಫೈನ್​

ಬಾಗಲಕೋಟೆ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಜೂನ್ 2025ರಿಂದ ಜುಲೈ 2026ರವರೆಗೆ ಬಾಗಲಕೋಟೆ ಪೊಲೀಸರು ವಿಧಿಸಿದ ದಂಡ ದಾಖಲೆಯ 10 ಕೋಟಿ 22 ಲಕ್ಷ 97 ಸಾವಿರ ರೂಪಾಯಿ. 2025 ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಐಟಿಎಂಎಸ್ ​ಯೋಜನೆ ಸಂಚಾರ ನಿಯಮ ಉಲ್ಲಂಘಿಸುವವರ ಪಾಲಿಗೆ ಸಿಂಹಸ್ವಪ್ನವಾಗಿದೆ.

ಇದನ್ನೂ ಓದಿ: ಚಾಕು ತೋರಿಸಿ ಬಂಗಾಳ ಕಾರ್ಮಿಕರ ದರೋಡೆ: ಮೊಬೈಲ್, ನಗದು ದೋಚಿದ ದುಷ್ಕರ್ಮಿಗಳು

ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ, ಗದ್ದನಕೇರಿ ಕ್ರಾಸ್ ಸೇರಿದಂತೆ ನಗರದಾದ್ಯಂತ ಎಐ ಸಾಫ್ಟ್‌ವೇರ್ ಒಳಗೊಂಡ 22 ವಿಶೇಷ ಎಎನ್‌ಪಿಆರ್ (Automatic Number Plate Recognition) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಟ್ರಿಪಲ್ ರೈಡಿಂಗ್ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ವಿಶೇಷ ಕಂಟ್ರೋಲ್ ರೂಂ ಮೂಲಕ ಸಿಬ್ಬಂದಿ 24×7 ನಿಗಾ ಇಟ್ಟಿದ್ದಾರೆ.

1 ವರ್ಷದ ಲೆಕ್ಕಾಚಾರ ಹೀಗಿದೆ 

  • ಒಟ್ಟು ದಾಖಲಾದ ಕೇಸ್‌ಗಳು: 2,11,074
  • ವಿಧಿಸಲಾದ ಒಟ್ಟು ದಂಡದ ಮೊತ್ತ: 10 ಕೋಟಿ 22 ಲಕ್ಷ 97 ಸಾವಿರ ರೂ.
  • ಸದ್ಯ ವಸೂಲಿಯಾದ ದಂಡ: 1 ಕೋಟಿ 72 ಲಕ್ಷ 60 ಸಾವಿರದ 350 ರೂ.
  • ದಂಡ ಪಾವತಿಸಿದ ಕೇಸ್‌ಗಳ ಸಂಖ್ಯೆ: 48,500

ಇನ್ನು ಈ ಹೈಟೆಕ್ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ನಗರದಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್ ಬಿದ್ದಿದೆ. ಇದರ ಪರಿಣಾಮವಾಗಿ ನಗರದಲ್ಲಿ ಸಂಭವಿಸುತ್ತಿದ್ದ ಅಪಘಾತ ಸಾವು ಹಾಗೂ ಅಪರಾಧಗಳ ಸಂಖ್ಯೆ ಶೇಕಡಾ 20 ರಷ್ಟು ಇಳಿಕೆಯಾಗಿದೆ. ಪೊಲೀಸರ ಈ ಹೈಟೆಕ್ ಕಣ್ಗಾವಲಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಒಂದು ಕೋಟಿ 70 ಲಕ್ಷ ರೂ ದಂಡ ವಸೂಲಿ ಬಾಕಿ

ಹತ್ತು ಕೋಟಿ ರೂ ದಂಡದಲ್ಲಿ ಒಂದು ಕೋಟಿ 70 ಲಕ್ಷ ರೂ ಮಾತ್ರ ವಸೂಲಿ ಆಗಿದೆ. ಬಾಕಿ ಹಣ ಬೇಗ ವಸೂಲಿ ಮಾಡಬೇಕು. ಜೊತೆಗೆ ಟ್ರಾಫಿಕ್ ಉಲ್ಲಂಘನೆ ಅಂತ ಅಮಾಯಕರು, ರೈತರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಅದು ನಿಲ್ಲಬೇಕು. ಟ್ರಾಫಿಕ್ ಪೊಲೀಸರಿಂದ ಹಣ ವಸೂಲಿ ಬಗ್ಗೆ ಪೊಲೀಸ್‌ ಮೇಲಾಧಿಕಾರಿಗಳು ನಿಗಾ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಇನ್ಮುಂದೆ ಸಿಬ್ಬಂದಿ ಹಾಜರತಿಗೆ ವೇತನ ಲಿಂಕ್!

ಹದ್ದಿನ ಕಣ್ಣಿಡುವ ಮೂಲಕ ನಿಯಮ ಉಲ್ಲಂಘನೆ ತಡೆದಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದರಿಂದ ಅಪಘಾತ, ಅಪರಾಧ ಎರಡೂ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ 10 ಕೋಟಿ ರೂ ದಂಡ ವಿಧಿಸಿ ಕೇವಲ ಒಂದೂವರೆ ಕೋಟಿ ವಸೂಲಿ ಮಾಡಿರುವುದು ಪ್ರಶ್ನಾರ್ಹ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us