100 ಸಿಬ್ಬಂದಿಯಿಂದ 36 ಅಡ್ಡೆಗಳ ಮೇಲೆ ದಾಳಿ: ಇಡೀ ಬಾಗಲಕೋಟೆಯ ಅಕ್ರಮ ಮರಳು ಜಾಲಾಡಿದ ಲೋಕಾಯುಕ್ತ

ಬಾಗಲಕೋಟೆ ಜಿಲ್ಲೆಯ 36 ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. 24 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 65 ಟಿಪ್ಪರ್‌, 18 ಹಿಟಾಚಿ ಸೇರಿ ಭಾರೀ ಪ್ರಮಾಣದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ತಡೆಯದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ದೂರು ಕೂಡ ದಾಖಲಾಗಿದೆ.

100 ಸಿಬ್ಬಂದಿಯಿಂದ 36 ಅಡ್ಡೆಗಳ ಮೇಲೆ ದಾಳಿ: ಇಡೀ ಬಾಗಲಕೋಟೆಯ ಅಕ್ರಮ ಮರಳು ಜಾಲಾಡಿದ ಲೋಕಾಯುಕ್ತ
ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಲೋಕಾ ದಾಳಿ
Image Credit source: tv9 kannada
Edited By:

Updated on: May 20, 2026 | 10:33 PM

ಬಾಗಲಕೋಟೆ, ಮೇ 20: ಜಿಲ್ಲಾದ್ಯಂತ ದೀರ್ಘಕಾಲದಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ (Illegal sand mining) ಬ್ರೇಕ್ ಹಾಕಲು ಲೋಕಾಯುಕ್ತ ಪೊಲೀಸರು (Lokayukta raid) ಭರ್ಜರಿ ಬೇಟೆಯಾಡಿದ್ದಾರೆ. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಬೃಹತ್ ಕಾರ್ಯಾಚರಣೆ ಇದಾಗಿದೆ.

ಮುಖ್ಯಾಂಶಗಳು

  • ಬಾಗಲಕೋಟೆ ಅಕ್ರಮ ಮರಳು ಗಣಿಗಾರಿಕೆ ಮೇಲೆ ಲೋಕಾಯುಕ್ತರ ಭರ್ಜರಿ ದಾಳಿ
  • ಅಕ್ರಮ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು
  • ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ

ಅಧಿಕಾರಿಗಳ ವಿರುದ್ಧವೇ ದೂರು 

ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾದ ಹಿನ್ನೆಲೆ ಬಾಗಲಕೋಟೆ ಜಿಲ್ಲಾಧಿಕಾರಿ ಸೇರಿದಂತೆ ಬೆಂಗಳೂರಿನ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಹಾಗೂ ಇಳಕಲ್ ತಾಲೂಕುಗಳ ತಹಶೀಲ್ದಾರ್​​ಗಳ ವಿರುದ್ಧವೇ ಲೋಕಾಯುಕ್ತ ಅಧಿಕಾರಿಗಳು ಸ್ವಯಂಪ್ರೇರಿತ (ಸುಮೋಟೋ) ದೂರು ದಾಖಲಿಸಿದ್ದಾರೆ.

100ಕ್ಕೂ ಹೆಚ್ಚು ಸಿಬ್ಬಂದಿ, 8 ಜಿಲ್ಲೆಗಳ ಅಧಿಕಾರಿಗಳಿಂದ ಜಂಟಿ ಆಪರೇಷನ್

ಬಾಗಲಕೋಟೆ ಜಿಲ್ಲೆಯ ಮುಧೋಳ, ಬಾದಾಮಿ, ಹುನಗುಂದ, ಇಳಕಲ್, ಜಮಖಂಡಿ ಹಾಗೂ ಬಾಗಲಕೋಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಜಿಲ್ಲೆಯ ಒಟ್ಟು 24 ಪ್ರಮುಖ ಸ್ಥಳಗಳಲ್ಲಿದ್ದ 36 ಅಕ್ರಮ ಮರಳು ಸಂಗ್ರಹಣಾ ಅಡ್ಡೆಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪಡೆ ದಾಳಿ ಮಾಡಿದೆ. ಈ ಬೃಹತ್ ಕಾರ್ಯಾಚರಣೆಗಾಗಿ ಕೇವಲ ಬಾಗಲಕೋಟೆ ಅಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಒಟ್ಟು 8 ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಲೋಕಾಯುಕ್ತ ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಈ ಜಂಟಿ ಆಪರೇಷನ್‌ನಲ್ಲಿ ಪಾಲ್ಗೊಂಡಿದ್ದರು.

ಹಿಟಾಚಿ, ದೋಣಿ, ಟಿಪ್ಪರ್‌ಗಳು ಜಪ್ತಿ

ಅಕ್ರಮವಾಗಿ ಮರಳು ಎತ್ತಲು ಮತ್ತು ಸಾಗಿಸಲು ಬಳಸುತ್ತಿದ್ದ ಕೋಟ್ಯಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ದಾಳಿ ವೇಳೆ 65 ಟಿಪ್ಪರ್‌ಗಳು, 18 ಹಿಟಾಚಿ ಯಂತ್ರಗಳು, ನದಿಗಳಿಂದ ಮರಳು ತೆಗೆಯಲು ಬಳಸುತ್ತಿದ್ದ 14 ಯಾಂತ್ರೀಕೃತ ದೋಣಿಗಳು, 6 ಟ್ರ್ಯಾಕ್ಟರ್‌ಗಳು ಹಾಗೂ 1 ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಗಣಿ, ಪರಿಸರ, ಪೊಲೀಸ್, ಅರಣ್ಯ, ತೆರಿಗೆ, ಸಾರಿಗೆ ಇಲಾಖೆ ಮತ್ತು ತಾಲೂಕು ಪಂಚಾಯತ್ ಇಒಗಳಿಗೆ ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಂಡು ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಪ್ರಾಥಮಿಕವಾಗಿ ಗುರುತಿಸಲ್ಪಟ್ಟಿದ್ದು, ತನಿಖೆ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us