ಬಾಗಲಕೋಟೆಯಲ್ಲಿ ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿದು 8 ಮಕ್ಕಳಿಗೆ ಗಾಯ ಪ್ರಕರಣ: ಮೂವರ ತಲೆದಂಡ
ಬಾಗಲಕೋಟೆಯ ಮುಗಳೊಳ್ಳಿ ತಾಂಡಾ ಸರ್ಕಾರಿ ಶಾಲೆಯ ಛಾವಣಿ ಕುಸಿದು 8 ಮಕ್ಕಳು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪ ಹಿನ್ನೆಲೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಹಾಗೂ ಇಬ್ಬರು ಪಿಆರ್ಇಡಿ ಎಂಜಿನಿಯರ್ಗಳನ್ನು ಅಮಾನತುಗೊಳಿಸಲಾಗಿದೆ. ಸೆಪ್ಟೆಂಬರ್ 2ರಂದು ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಕೊಠಡಿಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿತ್ತು. ಪರಿಣಾಮ 8 ಮಕ್ಕಳು ಗಾಯಗೊಂಡಿದ್ದರು.

ಬಾಗಲಕೋಟೆ, ಸೆಪ್ಟೆಂಬರ್ 04: ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ 8 ಮಕ್ಕಳು ಗಾಯಗೊಂಡ ಪ್ರಕರಣ ಸಂಬಂಧ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಿ.ಬಿ.ಹೆಳವರ ಅವರನ್ನು ಅಮಾನತ್ತುಗೊಳಿಸಿ ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಸೀತಾರಾಮು ಆದೇಶಿಸಿದ್ದಾರೆ. ಕೊಠಡಿಯ ಮೆಲ್ಛಾವಣಿ ದುರಸ್ತಿ ಹಂತದಲ್ಲಿದ್ದರೂ ಇಲಾಖೆಗೆ ತಿಳಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆ ಕರ್ನಾಟಕ ನಾಗರಿಕ ಸೇವೆ 1957ರ ನಿಯಮ 10 (1) ರ ಅನ್ವಯ ಅವರನ್ನು ಅಮಾನತು ಮಾಡಲಾಗಿದೆ.
ಪಿಆರ್ಇಡಿ ಇಂಜಿನಯರ್ಗಳೂ ಅಮಾನತು
ಶಾಲಾ ಕಟ್ಟಡದ ಫಿಟ್ನೆಸ್ ಸಂಬಂಧ ಸರಿಯಾದ ಪ್ರಮಾಣಪತ್ರ ಕೊಡುವಲ್ಲಿ ವಿಫಲವಾದ ಹಿನ್ನೆಲೆ ಪಿಆರ್ಇಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ.ರೇವಡಿ ಮತ್ತು ಜ್ಯೂನಿಯರ್ ಇಂಜಿನಿಯರ್ ಎಸ್.ಎಂ.ಸಂಗನಾಳ ಅವರನ್ನು ಕೂಡ ಕೂಡ ಅಮಾನತು ಮಾಡಿ ಬಾಗಲಕೋಟೆ ಜಿಲ್ಲಾಪಂಚಾಯಿತಿ ಸಿಇಓ ಗಜಾನನ ಬಾಲೆ ಆದೇಶಿಸಿದ್ದಾರೆ.
ಇದನ್ನೂ ಓದಿ: ತರಗತಿ ನಡೆಯುತ್ತಿದ್ದ ವೇಳೆಯೇ ಕುಸಿದ ಸರ್ಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ: ಎಂಜಿನಿಯರ್ ನಿರ್ಲಕ್ಷ್ಯದಿಂದ ಅವಘಡ?
ಸೆಪ್ಟೆಂಬರ್ 2ರಂದು ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಕೊಠಡಿಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿತ್ತು. ಶಾಲಾ ಆರಂಭದ ವೇಳೆ ಜಿಲ್ಲೆಯಾದ್ಯಂತ ಕಟ್ಟಡ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ 628 ಶಾಲಾ ಕಟ್ಟಡಗಳು ಅನ್ಫಿಟ್ ಎಂದು ವರದಿ ನೀಡಲಾಗಿತ್ತು. ಆದರೆ ಈ ಶಾಲೆಯ ಹೆಸರು ಆ ಲಿಸ್ಟ್ನಲ್ಲಿ ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಎಂಜಿನಿಯರ್ ಶಾಲೆಯ ಕಟ್ಟಡವನ್ನು ಸರಿಯಾಗಿ ಪರಿಶೀಲನೆ ನಡೆಸದಿರೋದು ಸಾಬೀತಾಗಿದ್ದ ಕಾರಣ ಪರಿಶೀಲನೆ ನಡೆಸಿ ವರದಿ ನೀಡಿರುವ ಎಂಜಿನಿಯರ್ ವಿರುದ್ಧ ಕ್ರಮದ ಬಗ್ಗೆ ಅಂದೇ ಜಿಪಂ ಸಿಇಒ ಮಾತನಾಡಿದ್ದರು. ಕಟ್ಟಡದ ಹಾನಿಗೊಳಗಾದ ಭಾಗವನ್ನು ಕೂಡಲೇ ದುರಸ್ತಿ ಮಾಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Fri, 4 September 26




