
ಬಾಗಲಕೋಟೆ, ಜುಲೈ 19: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ (Panchamasali Peetha) ಇತ್ತೀಚೆಗೆ ಬೀಗ ಹಾಕಲಾಗಿತ್ತು. ಈ ವಿಚಾರವಾಗಿ ಬಹಳ ನೊಂದುಕೊಂಡಿದ್ದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮುಖಂಡರ ಎದುರೇ ಕಣ್ಣೀರಿಟ್ಟದ್ದರು. ಇದೆಲ್ಲದರ ಬೆನ್ನಲ್ಲೇ ಇಂದು ಶ್ರೀಗಳ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡಿದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಇಂದು ಬೆಳಿಗಿನ ಜಾವ ತಲೆನೋವು, ವಾಂತಿ, ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಭಕ್ತರು ಸ್ವಾಮೀಜಿಯನ್ನು ನಗರದ ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನಾರೋಗ್ಯದಿಂದಾಗಿ ಸ್ವಾಮೀಜಿ ವೀಕ್ ಆಗಿದ್ದಾರೆ.
ಕಲಬುರಗಿ ಪಂಚಮಸಾಲಿ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದು, ನಿನ್ನೆ ಸಂಜೆ ಸ್ವಾಮೀಜಿಗೆ ಫುಡ್ ಪಾಯಿಸನ್ ಆಗಿತ್ತು. ವೈದ್ಯರಿಗೆ ಕೇಳಿ ಮಾತ್ರೆ ತೆಗೆದುಕೊಂಡಿದ್ದರು. ಬಳಿಕ ರಾತ್ರಿ ಸ್ವಲ್ಪ ಚೇತರಿಸಿಕೊಂಡಿದ್ದರು. ಬೆಳಿಗ್ಗೆ ತಲೆನೋವು, ವಾಂತಿ ಮತ್ತು ಎದೆನೋವು ಶುರುವಾಗಿ ಅಸ್ವಸ್ಥರಾಗಿದ್ದರು. ಭಕ್ತರು ಆಸ್ಪತ್ರೆಗೆ ಹೋಗೋಣವೆಂದಿದ್ದಕ್ಕೆ ಬಾಗಲಕೋಟೆ ಆಸ್ಪತ್ರೆಗೆ ಬಂದಿದ್ದೇವೆ. ಸದ್ಯ ಶ್ರೀಗಳು ಆರಾಮವಾಗಿದ್ದಾರೆ, ಭಕ್ತರು ಭಯ ಪಡುವಂತದ್ದು ಏನಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಪೀಠಕ್ಕೆ ಜಡಿದಿದ್ದ ಬೀಗ ನಿನ್ನೆಯೇ ಓಪನ್: ಕಾಶಪ್ಪನವರ್, ಸ್ವಾಮೀಜಿ ಮಧ್ಯದ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್
ಪೀಠಕ್ಕೆ ಇತ್ತೀಚೆಗೆ ಬೀಗ ಹಾಕಿದ್ದರಿಂದ ಸ್ವಾಮೀಜಿ ಬಹಳ ನೊಂದುಕೊಂಡಿದ್ದರು. ಬೇಜಾರಾಗಿದ್ದರು. ನನ್ನ ಭಕ್ತರ ಮೇಲೆ ಬೀಗ ಒಡೆದಿದ್ದಾರೆ ಅಂತ ವಿನಾಕಾರಣ ಕೇಸ್ ಹಾಕಿದರಲ್ಲಾ ಅಂತ ನೊಂದುಕೊಂಡಿದ್ದರು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಹುಬ್ಬಳ್ಳಿಯಲ್ಲಿ ಮಾತನಾಡಿದ್ದು, ಸ್ವಾಮೀಜಿ ಆಸ್ಪತ್ರೆಗೆ ಸೇರಿದ್ದು ನನಗೆ ಗೊತ್ತಿಲ್ಲ. ಮಠ ನೀಡಿದ್ದು ಅವರಿಗೆ ಧರ್ಮ ಪ್ರಚಾರ ಮತ್ತು ಸಂಘಟನೆಗೆ ಮಾತ್ರ. ಅದನ್ನು ಬಿಟ್ಟು ಅವರು ಮನೆ ಮಾಡಿಕೊಂಡು ಓಡಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:23 pm, Sat, 19 July 25