ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ: ಸರ್ಕಾರದ ಮೇಲೆ ಒತ್ತಡ ಹೇರಲು ಮೂರು ನಿರ್ಣಯ

ಮೀಸಲಾತಿ ಹೋರಾಟ ಯಾತ್ರೆಗೆ 1 ವರ್ಷವಾದ ಹಿನ್ನೆಲೆಯಲ್ಲಿ ‘ಮೀಸಲಾತಿಗಾಗಿ ಜನಾಕ್ರೋಶ’ ಹೆಸರಿನಲ್ಲಿ ಸಂಕ್ರಾಂತಿ ಹಬ್ಬದ ದಿನ ಕೂಡಲಸಂಗಮದಲ್ಲಿ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ ನಡೆಸಲಾಗುವುದು.

ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ: ಸರ್ಕಾರದ ಮೇಲೆ ಒತ್ತಡ ಹೇರಲು ಮೂರು ನಿರ್ಣಯ
ಬಸವ ಜಯಮೃತ್ಯುಂಜಯ ಸ್ವಾಮೀಜಿ (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 09, 2021 | 10:19 PM

ಬಾಗಲಕೋಟೆ: ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಮೀಸಲಾತಿ ಹೋರಾಟ ಯಾತ್ರೆಗೆ 1 ವರ್ಷವಾದ ಹಿನ್ನೆಲೆಯಲ್ಲಿ ‘ಮೀಸಲಾತಿಗಾಗಿ ಜನಾಕ್ರೋಶ’ ಹೆಸರಿನಲ್ಲಿ ಸಂಕ್ರಾಂತಿ ಹಬ್ಬದ ದಿನ ಕೂಡಲಸಂಗಮದಲ್ಲಿ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಮೀಸಲಾತಿ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಪಂಚಮಸಾಲಿ ಸಮಾಜದ ಹಾಲಿ‌ ಮತ್ತು ಮಾಜಿ ಶಾಸಕರ ಸಭೆ ಕರೆಯಲಾಗಿದೆ. ಬೆಳಗಾವಿಯಲ್ಲಿ ಡಿಸೆಂಬರ್ 15ರಂದು ಸಂಜೆ 5 ಗಂಟೆಗೆ ಸಭೆ ಕರೆಯಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ಬಂದು ಮಾಹಿತಿ ನೀಡಬೇಕು ನಿರ್ಣಯ ತೆಗೆದುಕೊಳ್ಳಲಾಯಿತು.

1995ನೇ ಇಸವಿಯಲ್ಲಿ ಸ್ಥಾಪನೆಯಾದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯೇ ಅಂತಿಮ. ಸರ್ಕಾರವು ಇದೀಗ ಹೊಸದಾಗಿ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಸಮಿತಿಯನ್ನು ರದ್ದು ಪಡಿಸಬೇಕು ಎಂದು ನಿರ್ಣಯಿಸಲಾಯಿತು. ಬಾಗಲಕೋಟೆಯ ಖಾಸಗಿ ಹೊಟೆಲ್ ಒಂದರಲ್ಲಿ ನಡೆದ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.

ಸಭೆಯಲ್ಲಿ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟಿಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ ಹಾಗೂ ಸಮಾಜದ ಗಣ್ಯರು ಪಾಲ್ಗೊಂಡಿದ್ದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ನಾಯಕತ್ವದಲ್ಲಿ ಸಭೆ ನಡೆಯಿತು.

ಸ್ವಾಮೀಜಿ ಘೋಷಿಸಿದ ಮೂರು ನಿರ್ಣಯಗಳು 1) ಪಂಚಮಸಾಲಿ ಮೀಸಲಾತಿ ಹೋರಾಟ ಪಾದಯಾತ್ರೆ ಮುಗಿದು ಒಂದು ವರ್ಷವಾದ ನೆನಪಿಗೆ ‘ಮೀಸಲಾತಿಗಾಗಿ ಜನಾಕ್ರೋಶ’ ಎಂಬ ಶೀರ್ಷಿಕೆಯಡಿ, ಅಂತಿಮ ಘೋಷಣೆಗಾಗಿ ಜನವರಿ 14, 2022ರ ಸಂಕ್ರಾಂತಿಯಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ. 2) ಸರ್ಕಾರದ ಮೇಲೆ ಒತ್ತಡ ಹೇರಲು ಡಿಸೆಂಬರ್ 15ರಂದು ಸಂಜೆ 5 ಗಂಟೆಗೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಹಾಲಿ‌ ಮಾಜಿ ಶಾಸಕರ ಸಭೆ. ಸಭೆಗೆ ಮುಖ್ಯಮಂತ್ರಿಗೂ ಆಹ್ವಾನ. ೩) 1995ರಲ್ಲಿ ರಚನೆಯಾದ ಶಾಸ್ವತ ಹಿಂದುಳಿದ ವರ್ಗದ ಆಯೋಗದ ವರದಿಯೇ ಅಂತಿಮ. ಸರ್ಕಾರವು ಇದೀಗ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಸಮಿತಿ ರದ್ದು ಪಡಿಸಬೇಕು.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಸಿಎಂ ಭರವಸೆ ಒಪ್ಪಿದ ಬಸವ ಜಯಮೃತ್ಯುಂಜಯಶ್ರೀ ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠ ರಚನೆಗಾಗಿ ಜಮಖಂಡಿಯಲ್ಲಿ ಟ್ರಸ್ಟ್​ ನೋಂದಣಿ