Karnataka Rains: ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಆರ್ಭಟ: ಸಿಡಿಲು ಬಡಿದು 6 ಜನ ಸಾವು..!
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿ ಸಹಿತ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅಲ್ಲದೇ, ಸಿಡಿಲಿಗೆ ರಾಜ್ಯಾದ್ಯಂತ ಆರು ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು/ಬಳ್ಳಾರಿ ಮೇ 13: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ (Rain). ಸಿಡಿಲು ಬಡಿದು ರಾಜ್ಯದಲ್ಲಿ ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ. ಮನೆಗಳಿಗೆ ಹಾನಿಯಾಗಿದೆ. ಬಳ್ಳಾರಿ (Ballari) ಜಿಲ್ಲೆಯ ಸಿರಗುಪ್ಪ (Siraguppa) ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಬೀರಪ್ಪ (45), ಸುನೀಲ (26) ಮೃತ ದುರ್ದೈವಿಗಳು. ಇದೇ ವೇಳೆ ಸಿಡಿಲು ಬಡಿದು ವಿನೋದ್ (14) ಎಂಬುವರು ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರಿ ಮೇಯಿಸಲು ಹೋದಾಗ ಜೋರು ಮಳೆ ಬಂದಿದೆ. ಈ ವೇಳೆ, ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು, ಮೃತಪಟ್ಟಿದ್ದಾರೆ. ಸಿರಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾರೆ. ಮಲ್ಲಪ್ಪ ತಾಳಿಕೋಟೆ (47) ಮೃತ ದುರ್ದೈವಿ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊಂತಿಕೊಂಡಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ರೈತನೋರ್ವ ಜಮೀನನ್ನು ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹುಲಿಹೈದರದಲ್ಲಿ ಗ್ರಾಮದಲ್ಲಿ ಯಂಕಪ್ಪ ಜಾಡಿ (45) ಮೃತ ದುರ್ದೈವಿ. ಇದೇ ವೇಳೆ ಎರಡು ಎತ್ತುಗಳೂ ಸಹಿತ ಮೃತಪಟ್ಟಿವೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ರೈತ ಬಸನಗೌಡ (39) ಸಿಡಿಲು ಬಡಿದು ಮೃತಪಟ್ಟಿದ್ದಾರೆ.ರೈತ ಬಸನಗೌಡ ಭತ್ತದ ಬೆಳೆ ಕಟಾವುಮಾಡಿ ಒಣಗಲು ಹಾಕಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಭತ್ತಕ್ಕೆ ಟಾರ್ಪಾಲ್ ಮುಚ್ಚುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಗೆದ್ಲೆಹಳ್ಳಿಗ್ರಾಮದ ಲೋಕೇಶಪ್ಪ (65) ಮೃತ ದುರ್ದೈವಿ. ಕುರಿ ಮೇಯಿಸಲು ತೆರಳಿದ್ದಾಗ ಘಟನೆ ನಡೆದಿದೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಗಾಳಿ ಮಳೆ, ಹಲವೆಡೆ ಟ್ರಾಫಿಕ್ ಜಾಮ್
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆ. ಎರಡೂ ಮನೆಯ ಕುಟುಂಬದವರು ಅದೃಷ್ಟವಶಾತ್ ಪಾರಾಗಿದ್ದಾರೆ. ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುತ್ ದೀಪಗಳು, ಯಂತ್ರೋಪಕರಣಗಳಿಗೆ ಭಾಗಶಃ ಹಾನಿಯಾಗಿದೆ. ಮನೆಯ ಎದುರಿನ ತೆಂಗಿನ ಮರ, ಮನೆಯ ಗೋಡೆ ಸಿಡಿಲು ಬಡಿದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?
- ಮನೆಯಿಂದ ಹೊರಗೆ ಬರಬೇಡಿ.
- ಮನೆಯ ಹೊರಗಿದ್ದರೆ ಸಮೀಪದ ಕಟ್ಟಡದ ಆಶ್ರಯ ಪಡೆಯಿರಿ, ಬಯಲು ಪ್ರದೇಶವಾಗಿದ್ದರೆ ತಗ್ಗು ತಾಣಗಳಲ್ಲಿ ಹೋಗಿ ಕುಳಿತುಕೊಳ್ಳಿ, ಬಯಲಿನಲ್ಲಿದ್ದರೆ ಅಲ್ಲೇ ಮಲಗಬೇಡಿ.
- ಒದ್ದೆ ನೆಲದೊಂದಿಗೆ ನಿಮ್ಮ ಇಡೀ ದೇಹ ಸಂಪರ್ಕದಲ್ಲಿರಬಾರದು. ಕುಕ್ಕರುಗಾಲಿನಲ್ಲಿ ಕುಳಿತು ನಿಮ್ಮ ತಲೆಯನ್ನಿ ಮೊಣಕಾಲುಗಳ ನಡುವೆ ಹುದುಗಿಸಿಳ್ಳಿ.
- ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಲ್ಲಬೇಡಿ. ಲೋಹದ ವಸ್ತುಗಳಿಂದ ದೂರವಿರಿಸಿ. ಕರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ.
- ವಿದ್ಯುತ್ ಕಂಬ, ಎಲೆಕ್ಟ್ರಿಕ್ ಟವರ್, ಮೊಬೈಲ್ ಟವರ್, ಟ್ರಾನ್ಸ್ಫಾರ್ಮರ್, ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಲೋಹದ ಗೇಟ್ ಮತ್ತು ಪೈಪ್ಗಳಿಂದ ದೂರವಿರಿ.
- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಕರೆ ಮಾಡಬೇಡಿ. ಚಾರ್ಜ್ ಮಾಡಬೇಡಿ. ಕಂಪ್ಯೂಟರ್ ಕೆಲಸದಿಂದ ದೂರವಿರಿ, ಕಿಟಕಿ ಪಕ್ಕ ಕೂರಬೇಡಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Tue, 13 May 25