ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!
ಬೆಳಗಾವಿಯ ಶತಾಯುಷಿ ಸುಶೀಲಾದೇವಿ ರಾಮಣ್ಣವರ್ 101ನೇ ವಯಸ್ಸಿನಲ್ಲಿ ದೇಹದಾನ ಮಾಡಿ ಮಾದರಿಯಾಗಿದ್ದಾರೆ. ಅವರ ವೈದ್ಯ ಪುತ್ರನೇ ತಾಯಿಯ ದೇಹವನ್ನು ಛೇದಿಸಲಿದ್ದಾರೆ. ಈ ಕುಟುಂಬ ದೇಹದಾನದ ಬಗ್ಗೆ ಸಾವಿರಾರು ಜನರಲ್ಲಿ ಜಾಗೃತಿ ಮೂಡಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ. ಇದು ಶ್ಲಾಘನೀಯ ಕಾರ್ಯ.

ಬೆಳಗಾವಿ, ಮಾರ್ಚ್ 11: ದಾನಗಳಲ್ಲಿ ಅನ್ನದಾನ, ನೇತ್ರದಾನ ಹಾಗೂ ದೇಹದಾನ ಶ್ರೇಷ್ಠ. ಇಂತಹ ಶ್ರೇಷ್ಠ ದಾನಗಳ ಪೈಕಿ 101 ವರ್ಷದ ತಾಯಿ ದೇಹದಾನ (Body Donation) ಮಾಡಿರುವುದು ಗಮನ ಸೆಳೆಯುತ್ತಿದೆ. ತಂದೆಯಂತೆ ತಾಯಿ ಕೂಡ ತನ್ನ ಮಗನೇ ದೇಹವನ್ನ ಛೇದಿಸಬೇಕೆಂದು ವಿಲ್ ಬರೆದು ಸಾವನ್ನಪ್ಪಿದ್ದರೆ, ತಾಯಿ ಕೊನೆ ಆಸೆಯಂತೆ ವೈದ್ಯ ಪುತ್ರ ದೇಹ ಛೇದಿಸಲು ಸಿದ್ಧರಾಗಿದ್ದಾರೆ. ಅಜ್ಜಿಯ ಮಾದರಿಯ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಸಮಾಜಕ್ಕೆ ಮಾದರಿಯಾಗುವಂತಹದ್ದು, ಶತಾಯುಷಿ ಅಜ್ಜಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ವೈದ್ಯ ಕುಟುಂಬದ ಸ್ಟೋರಿ. ಯಾಕೆಂದರೆ ಹೆತ್ತಮಕ್ಕಳಿಗೆ ತಂದೆ-ತಾಯಿ ಆಸ್ತಿ ಅಂತಸ್ತನ್ನ ವಿಲ್ ಆಗಿ ಬರೆದಿಡುತ್ತಾರೆ. ಇಲ್ಲೊಬ್ಬರು ಮಹಾತಾಯಿ ತನ್ನ ಪುತ್ರನಿಂದಲೇ ದೇಹ ಛೇದಿಸಬೇಕೆಂದು ವಿಲ್ ಬರೆದಿಟ್ಟು ದೇಹದಾನ ಮಾಡಿದ್ದಾರೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ದೇಹದಾನ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಶತಾಯಿಷಿ ಸುಶೀಲಾದೇವಿ ರಾಮಣ್ಣವರ್. ಈ ಮಹಾ ತಾಯಿಯ ವಯಸ್ಸು 101 ವರ್ಷ. ತಮ್ಮ ನಿಧನದ ಬಳಿಕ ದೇಹವನ್ನ ದಾನ ಮಾಡಿದ್ದರು. ಅದು ಬೆಳಗಾವಿ ನಗರದಲ್ಲಿರುವ ಕೆಎಲ್ಇ ಕಂಕಣವಾಡಿ ಆಯುರ್ವೇದ ಕಾಲೇಜಿಗೆ ದೇಹದಾನವನ್ನ ಮಾಡಿದ್ದಾರೆ. ಅದರಂತೆ ಅವರ ನಿಧನದ ಬಳಿಕ ಶತಾಯುಷಿ ಸುಶೀಲಾದೇವಿ ದೇಹವನ್ನ ಆಸ್ಪತ್ರೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ನೀಡಿದ್ದಾರೆ. ಆಸ್ಪತ್ರೆಗೆ ದೇಹದಾನ ಮಾಡುವುದಕ್ಕೂ ಮುನ್ನ ಕೆಲ ಧಾರ್ಮಿಕ ವಿಧಿಗಳ ಪ್ರಕಾರ ಪೂಜೆ ಸಲ್ಲಿಸಿ, ಗೌರವವನ್ನ ಅರ್ಪಿಸಲಾಗಿದೆ.
ಈ ಹಿಂದೆ ಇದೇ ಆಸ್ಪತ್ರೆಗೆ ಡಾ.ಮಹಾಂತೇಶ ರಾಮಣ್ಣನವರ ತಂದೆ ಸಹ ದೇಹದಾನ ಮಾಡಿದ್ದರು. ತಂದೆ ದೇಹವನ್ನು ಸಹ ಪುತ್ರ ಮಹಾಂತೇಶ ರಾಮಣ್ಣನವರ ಛೇದಿಸಿದ್ದರು. ಈಗ ತಾಯಿ ಇಚ್ಛೆಯಂತೆ ಅವರ ದೇಹವನ್ನ ಮಗ ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಇಷ್ಟೇ ಅಲ್ಲದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೇಹಗಳ ಕೊರತೆ ಇರೋದನ್ನ ಮನಗೊಂಡು ಇಡೀ ಕುಟುಂಬ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿ ಕಂಕಣವಾಡಿ ಆಸ್ಪತ್ರೆಗೆ ಒಂದು ಸಾವಿರ ಜನರು ದೇಹವನ್ನ ದಾನ ಮಾಡಿಸಿದ್ದಾರೆ. ಅಲ್ಲದೇ ಇನ್ನೂ 5 ಸಾವಿರ ಜನರು ದೇಹದಾನ ಮಾಡಿಸುವ ವಾಗ್ದಾನ ಮಾಡಿದ್ದಾರೆ.
ಇದನ್ನೂ ಓದಿ: ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿಗೆ ಬಲಿ ಆಯ್ತು ಜೀವ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ
ರಾಮಣ್ಣನವರ ಕುಟುಂಬವು ಸಮಾಜಕ್ಕೆ ಆಯುರ್ವೇದಿಕ ವೈದ್ಯಕೀಯ ಚಿಕಿತ್ಸೆ ಜೊತೆಗೆ ದೇಹದಾನದಂತಹ ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕೆಲಸಕ್ಕೆ ಸಾರ್ವಜನಿಕರು ಕೂಡ ಮುಂದಾಗಬೇಕು ಅಂತಾ ಕರೆ ಕೂಡ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ತಂದೆಯಂತೇ ತಾಯಿ ಕೂಡ ಪುತ್ರನ ಕೈಯಿಂದಲೇ ದೇಹ ಛೇದಿಸಲು ವಿಲ್ ಬರೆದು ಗಮನ ಸೆಳೆದಿದ್ದಾರೆ. ದಶಕಗಳ ಹಿಂದೇ ತಂದೆ ದೇಹ ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಪುತ್ರ ಈಗ ತಾಯಿ ದೇಹ ಛೇದಿಸಲು ಮುಂದಾಗಿರುವುದು ವಿಶೇಷ. ಸದ್ಯ ಒಂದು ವೈದ್ಯಕೀಯ ಕುಟುಂಬವೇ ಈ ರೀತಿ ದೇಹ ದಾನದ ಮೂಲಕ ಜನರನ್ನ ಗಮನ ಸೆಳೆದು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದು ಇದಕ್ಕೆ ಸಾರ್ವಜನಿಕರು ಕೂಡ ಇದಕ್ಕೆ ಸಾಥ್ ಕೊಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.