ಬನ್ನೇರುಘಟ್ಟ ಉದ್ಯಾನವನದಲ್ಲಿ ಮುಂದುವರೆದ ಜಿಂಕೆಗಳ ಸಾವು; ಇಂದು ಸಚಿವ ಈಶ್ವರ್ ಖಂಡ್ರೆ ಭೇಟಿ

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದೊಂದು ವಾರದಿಂದ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್​ಗೆ ತುತ್ತಾಗಿ ಏಳು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಸಸ್ಯಹಾರಿ ಸಫಾರಿಯಲ್ಲಿದ್ದ ಜಿಂಕೆಗಳ ಸರಣಿ ಸಾವಾಗುತ್ತಿದೆ. ದಿನಕ್ಕೆ ಎರಡು ಮೂರರಂತೆ ಜಿಂಕೆಗಳ ಸರಣಿ ಸಾವಾಗುತ್ತಿದೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಮುಂದುವರೆದ ಜಿಂಕೆಗಳ ಸಾವು; ಇಂದು ಸಚಿವ ಈಶ್ವರ್ ಖಂಡ್ರೆ ಭೇಟಿ
ಬನ್ನೇರುಘಟ್ಟ ಉದ್ಯಾನವನದಲ್ಲಿ ಕಂಡು ಬಂದ ಜಿಂಕೆಗಳು
Follow us
| Updated By: ಆಯೇಷಾ ಬಾನು

Updated on: Sep 21, 2023 | 10:23 AM

ಆನೇಕಲ್, ಸೆ.21: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ(Bannerghatta Biological Park) ಪ್ರಾಣಿಗಳ ಸರಣಿ ಸಾವು ಮುಂದುವರೆದಿದೆ. ಮಾರಕ ವೈರಸ್ ನಿಂದ ಚಿರತೆ ಮರಿಗಳ(Leopard Cubs) ಸಾವಿನ ಪ್ರಕರಣ ಮಾಸುವ ಮುನ್ನವೇ ಜಿಂಕೆಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್​ನಿಂದಾಗಿ ಏಳು ಚಿರತೆ ಮರಿಗಳು ಮೃತಪಟ್ಟಿದ್ದವು. ಇದಾದ ಬಳಿಕ 13 ಜಿಂಕೆಗಳ ಸಾವಿನ ಬಗ್ಗೆ ವರದಿಯಾಗಿತ್ತು. ಆದ್ರೆ ಇದೀಗ ಆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಜಿಂಕೆಗಳ(Deer) ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಮೂಲಕ ಬನ್ನೇರುಘಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಹೀಗಾಗಿ ಇಂದು ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಈ ಬಗ್ಗೆ ಚರ್ಚಿಸಲಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದೊಂದು ವಾರದಿಂದ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್​ಗೆ ತುತ್ತಾಗಿ ಏಳು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಸಸ್ಯಹಾರಿ ಸಫಾರಿಯಲ್ಲಿದ್ದ ಜಿಂಕೆಗಳ ಸರಣಿ ಸಾವಾಗುತ್ತಿದೆ. ದಿನಕ್ಕೆ ಎರಡು ಮೂರರಂತೆ ಜಿಂಕೆಗಳ ಸರಣಿ ಸಾವಾಗುತ್ತಿದೆ. ಇತ್ತೀಚೆಗೆ 13 ಜಿಂಕೆಗಳ ಸಾವಿನ ಬಗ್ಗೆ ವರದಿ ಮಾಡಲಾಗಿತ್ತು. ಈಗ ಮತ್ತೆ ಮೂರು ಜಿಂಕೆಗಳು ಮೃತಪಟ್ಟಿದ್ದು ಒಟ್ಟು 16 ಜಿಂಕೆಗಳ ಸಾವಾಗಿದೆ.

ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳು ಕಿರಿದಾದ ಜಾಗದಲ್ಲಿ ಸರಿಯಾದ ಆರೈಕೆ ಹಾಗೂ ಆಹಾರದ ಸಮಸ್ಯೆಯಿಂದಾಗಿ ಬಳಲಿದ್ದವು. ಈ ಹಿನ್ನೆಲೆ ಅವುಗಳನ್ನ ಕಳೆದ ಆಗಸ್ಟ್ 17ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕಳೆದ ಏಳೆಂಟು ದಿನಗಳಿಂದ ಬನ್ನೇರುಘಟ್ಟದ ಸಸ್ಯಹಾರಿ ಸಫಾರಿಯ ಕ್ವಾರೆಂಟೈನ್ ಜಾಗದಲ್ಲಿ ಜಿಂಕೆಗಳನ್ನ ನೋಡಿಕೊಳ್ಳಲಾಗಿತ್ತು. ಬಳಿಕ ಅವುಗಳನ್ನ ಸಸ್ಯಹಾರಿ ಸಫಾರಿಗೆ ಬಿಟ್ಟಿದ್ದು ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ 37 ಜಿಂಕೆಗಳ ಪೈಕಿ ಒಟ್ಟು 16 ಜಿಂಕೆಗಳು ಮೃತಪಟ್ಟಿವೆ. ಮೃತಪಟ್ಟ ಜಿಂಕೆಗಳ ಹೊಟ್ಟೆಯ ಕೆಲಭಾಗದಲ್ಲಿ ಭಾರಿ ಗಾತ್ರದ ಊತ ಕಾಣಿಸಿಕೊಂಡಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ: 7 ಚಿರತೆ ಮರಿ ಸಾವು ಬೆನ್ನಲ್ಲೇ 13 ಚಿಂಕೆಗಳು ಬಲಿ

ಇನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಹಾರಿ ಸಫಾರಿಯ ಕ್ವಾರಂಟೈನ್ ಜಾಗದಲ್ಲಿ ಗಂಡು ಜಿಂಕೆಗಳೇ ಹೆಚ್ಚಾಗಿದ್ದವು. ಇದು ಜಿಂಕೆಗಳ ಮಿಲನದ ಸಮಯವಾದ್ದರಿಂದ ಹೆಣ್ಣು ಜಿಂಕೆಗಾಗಿ ಪರಸ್ಪರ ಕಾದಾಟದಿಂದಾಗಿ ಹೆಚ್ಚಿನ ಗಂಡು ಜಿಂಕೆಗಳು ಮೃತಪಟ್ಟಿವೆ. ಕೆಲವೊಂದು ಹೊಟ್ಟೆಯಲ್ಲಿ ಜಂತುಹುಳು ಬಾಧೆಯಿಂದ ಮೃತಪಟ್ಟಿರಬಹುದು ಹಾಗೂ ಜಿಂಕೆಗಳು ಅತ್ಯಂತ ಸೂಕ್ಷ್ಮ ಪ್ರಾಣಿಯಾಗಿದ್ದು ಕೆಲವೊಮ್ಮೆ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೇ. ಉಳಿದ ಜಿಂಕೆಗಳಿಗೆ ಜಂತುಹುಳು ನಿವಾರಕ ಡಿ ವರ್ಮಿಂಗ್ ಪೌಡರ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಬನ್ನೇರುಘಟ್ಟ ಆಡಳಿತ ವರ್ಗ ಹಾಗೂ ವೈದ್ಯರ ತಂಡ ಜಿಂಕೆಗಳ ಬಗ್ಗೆ ತುರ್ತು ನಿಗಾ ವಹಿಸಲಾಗಿದ್ದು ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯಾನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.

ಬನ್ನೇರುಘಟ್ಟಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ

ಇನ್ನು ಬನ್ನೇರುಘಟ್ಟದಲ್ಲಿ ಚಿರತೆ ಹಾಗೂ ಜಿಂಕೆ ಸಾವು ಹೆಚ್ಚಾದ ಹಿನ್ನೆಲೆ ಬನ್ನೇರುಘಟ್ಟಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಲಿದ್ದಾರೆ. ಬನ್ನೇರುಘಟ್ಟ ಆಡಳಿತ ವರ್ಗ ಹಾಗೂ ಪಶುವೈದ್ಯರಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ