ತನಗಿಂತ 2 ವರ್ಷ ದೊಡ್ಡವಳೊಂದಿಗೆ ಲವ್: ವಾರ್ನ್ ಮಾಡಿದ್ರೂ ಯುವತಿ ಹಿಂದೆ ಬಿದ್ದ ಯುವಕ ಹತ್ಯೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನೀರುಗುಂಟೆಪಾಳ್ಯದಲ್ಲಿ ಯುವಕನನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ. ತನಗಿಂತ ಎರಡು ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ಪ್ರೀತಿಯ ವಿಷಯ ತಿಳಿದು ಯುವತಿಯ ಸಂಬಂಧಿಕರು ಎಚ್ಚರಿಕೆ ನೀಡಿದ್ದರೂ, ಪ್ರೀತಿ ಮುಂದುವರೆಸಿದ್ದರಿಂದ ಕೊಲೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ದೇವನಹಳ್ಳಿ, ಮೇ 04: ಯುವಕನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ದುಷ್ಕರ್ಮಿಗಳು ಹತ್ಯೆ (kill) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ಗ್ರಾಮದಲ್ಲಿ ನಡೆದಿದೆ. ನೀರುಗುಂಟೆಪಾಳ್ಯ ಗ್ರಾಮದ ಪ್ರೀತಂ (19) ಕೊಲೆಯಾದ ಯುವಕ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸ್ ಠಾಣೆಯ ಮುಂದೆ ಯುವಕನ ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ತನಗಿಂತ 2 ವರ್ಷ ದೊಡ್ಡವಳೊಂದಿಗೆ ಪ್ರೀತಿ
ಮೃತ ಯುವಕ ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಯುವತಿ ಎಂಬಿಬಿಎಸ್ ಓದುತ್ತಿದ್ದಳು. ಪ್ರೀತಿ ವಿಚಾರ ತಿಳಿದು ಯುವಕನಿಗೆ ಯುವತಿ ಸಂಬಂಧಿಕರು ವಾರ್ನ್ ಮಾಡಿದ್ದರು.
ಇದನ್ನೂ ಓದಿ: ಪಲ್ಯ, ಸಾಂಬಾರ್ ಸರಿ ಮಾಡಲ್ಲ ಎಂದು ಪ್ರೀತಿಸಿ ಮದ್ವೆಯಾದ ಹೆಂಡ್ತಿಯನ್ನೇ ಕೊಂದ ಪತಿ
ವಾರ್ನಿಂಗ್ ಮಾಡಿದರೂ ಯುವತಿಯನ್ನು ಪ್ರೀತಂ ಪ್ರೀತಿ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಪ್ರೀತಂ ನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ. ಯುವತಿ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಕಿಡ್ನ್ಯಾಪ್ ಮಾಡಲಾಗಿದ್ದು, ಕಂಠಪೂರ್ತಿ ಕುಡಿದು 4-5 ಜನರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಪ್ರೀತಂ ಸಾವು ಹಿನ್ನೆಲೆ ಶವ ಬಿಸಾಕಿ ಆರೋಪಿಗಳು ಎಸ್ಕೇಪ್ ಆಗಿರುವ ಆರೋಪ ಕೇಳಿಬಂದಿದೆ.
ಇತ್ತ ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಠಾಣೆ ಮುಂದೆ ತಾಯಿ ಮತ್ತು ಸಂಬಂಧಿಕರು ಕಣೀರು ಹಾಕಿದ್ದಾರೆ. ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಲಾಗಿದೆ.
ಯುವತಿ ತಂದೆ ಶ್ರೀನಿವಾಸ್ ಹೇಳಿದ್ದಿಷ್ಟು
ಯುವಕನ ಕೊಲೆ ಸಂಬಂಧ ಯುವತಿ ತಂದೆ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು, ನನ್ನ ಮಗಳು ಪಲ್ಲವಿ ಚಿತ್ರದುರ್ಗದಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ. ಈ ಹುಡುಗ ಪತ್ರ ಬರೆದುಕೊಂಡು ನನ್ನ ಮಗಳಿಗೆ ಲವ್ ಮಾಡುತ್ತಿದ್ದು, ಇಲ್ಲಾಂದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದನಂತೆ. ಮಗಳು ಇತ್ತೀಚೆಗೆ ನನ್ನ ಬಳಿ ಹೆಚ್ಚಿನ ಹಣ ಕೇಳುತ್ತಿದ್ದಳು. ಏಕೆ ಎಂದು ಕೇಳಿದ್ದೇ. ಮನೆಗೆ ಬಂದಾಗ ಅವಳ ಫೋನ್ ಚೆಕ್ ಮಾಡಿದಾಗ ಫ್ರೆಂಡ್ ಮೂಲಕ ಕೊಲೆಯಾದ ಪ್ರೀತಂಗೆ ಹಣ ಹಾಕಿಸಿದ್ದಳು. ಕೇಳಿದಕ್ಕೆ ನನ್ನ ಫೋಟೋ ಇಟ್ಕೊಂಡು ಬೆದರಿಸುತ್ತಿದ್ದ, ಅದಕ್ಕೆ ಹಣ ಹಾಕಿದ್ದೆ ಅಂತ ಹೇಳಿದ್ದಳು. ಹೀಗಾಗಿ ನನ್ನ ಮಗಳಿಗೆ ನಾನು ಬೈದು ಬುದ್ದಿವಾದ ಹೇಳಿದ್ದೆ. ಬಳಿಕ ಸಿಮ್ ಚೇಂಜ್ ಮಾಡಿ ಫೋನ್ ಪೇ ಎಲ್ಲಾ ಡಿಲೀಟ್ ಮಾಡಿಸಿದ್ದೆ. ಆದರೂ ಅವನು ಅವಳನ್ನ ಹುಡುಕಿಕೊಂಡು ಚಿತ್ರದುರ್ಗಕ್ಕೆ ಹೋಗಿ ಕಿರುಕುಳ ನೀಡಿದ್ದ ಎಂದಿದ್ದಾರೆ.
ನಮ್ಮ ಪತ್ನಿಯ ಅಕ್ಕನ ಮಗ ಈ ರೀತಿ ಮಾಡಿದ್ದಾನೆ: ಶ್ರೀನಿವಾಸ್
ನಮ್ಮ ಪತ್ನಿಯ ಅಕ್ಕನ ಮಗ ವಿಚಾರ ತಿಳಿದುಕೊಂಡು ಬಂದು ಈ ರೀತಿ ಮಾಡಿದ್ದಾನೆ. ನಮ್ಮ ಮನೆಯಲ್ಲಿ ಸಂಬಂಧಿಕರ ಮದುವೆ ಇತ್ತು. ಮದುವೆಗೆ ಅಂತ ಕಾರು ರೆಡಿ ಮಾಡಿಕೊಂಡು ಬಂದವನು ಈ ರೀತಿ ಮಾಡಿದ್ದಾನೆ. ನಮಗೆ ಪೊಲೀಸರು ಮನೆ ಬಳಿಗೆ ಬಂದ ಮೇಲೆ ಕೊಲೆಯಾಗಿದೆ ಅನ್ನೂ ವಿಚಾರ ಗೊತ್ತಾಗಿದೆ. ಈ ಕೊಲೆ ಕೇಸ್ನಲ್ಲಿ ನಮ್ಮದು, ನಮ್ಮ ಮಗಳದ್ದು ಯಾವುದೇ ಪಾತ್ರವಿಲ್ಲ. ನಾನು ಆ ಹುಡುಗನಿಗೆ ಯಾವುದೇ ವಾರ್ನಿಂಗ್ ನೀಡಿಲ್ಲ. ಅವನ ಮುಖ ಸಹ ನಾನು ನೋಡಿಲ್ಲ. ನಮಗೆ ಮಾಹಿತಿನೇ ಇಲ್ಲದೆ ಬಂದು ಈ ರೀತಿ ಮಾಡಿದ್ದಾನೆ. ನನ್ನ ಪತ್ನಿ ಸಹ ಈ ರೀತಿ ಮಾಡು ಅಂತ ಹೇಳಿಲ್ಲ. ಸಾಲ ಮಾಡಿ ನನ್ನ ಮಗಳನ್ನ ಓದಿಸುತ್ತಿದ್ದೀನಿ, ಕೊಲೆ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾವೆಲ್ಲ ಮದುವೆಯಲ್ಲಿ ಬ್ಯುಸಿಯಾಗಿದ್ದೇವು ಎಂದು ಹೇಳಿದ್ದಾರೆ.
ಕಟ್ಟಡದ 3ನೇ ಮಹಡಿಯಿಂದ ಬಿದ್ದು ವೃದ್ಧೆ ಆತ್ಮಹತ್ಯೆ
ಕಟ್ಟಡದ 3ನೇ ಮಹಡಿಯಿಂದ ಬಿದ್ದು ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ರಾಜೀವ್ ಗಾಂಧಿ ನಗರದ ಚರ್ಚ್ ರೋಡ್ನಲ್ಲಿ ನಡೆದಿದೆ. ವಿಜಯಲಕ್ಷ್ಮೀ(60) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಮಾಡಿದ್ದು, ಸದ್ಯ ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು? ಅವರ ಹಿನ್ನೆಲೆ ಏನು?
ಮೃತ ವಿಜಯಲಕ್ಷ್ಮೀ ಕೊವಿಡ್ ಸಮಯದಲ್ಲಿ ಓರ್ವ ಪುತ್ರನನ್ನು ಕಳೆದುಕೊಂಡಿದ್ದರು. ಬಳಿಕ ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ವಾಸವಾಗಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗಿನ ಜಾವ 4.30ರ ಸುಮಾರಿಗೆ ಆಟೋ ಚಾಲಕ ವೃದ್ಧೆಯ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Sun, 4 May 25







