ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಡೆಡ್ಲಿ ಅಟ್ಯಾಕ್​​: ಯುವಕ ಜಸ್ಟ್​​ ಮಿಸ್​​

ಅಕ್ರಮ ಸಂಬಂಧದ ಆರೋಪ ಹಿನ್ನೆಲೆಯಲ್ಲಿ ಯುವಕನ ಮೇಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಗಂಡನ ಮನೆಯಲ್ಲಿ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕೊಲೆಗೆ ವ್ಯಕ್ತಿಯೋರ್ವ ಯತ್ನಿಸಿರುವ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮ‌ದಲ್ಲಿ ನಡೆದಿದೆ.

ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಡೆಡ್ಲಿ ಅಟ್ಯಾಕ್​​: ಯುವಕ ಜಸ್ಟ್​​ ಮಿಸ್​​
ಸಾಂದರ್ಭಿಕ ಚಿತ್ರ
Edited By:

Updated on: Dec 14, 2025 | 12:17 PM

ದೇವನಹಳ್ಳಿ, ಡಿಸೆಂಬರ್​​ 14: ಅಕ್ರಮ‌ ಸಂಬಂಧ ಹಿನ್ನೆಲೆ‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಚ್ಚಿ ಯುವಕನ ಕೊಲೆ ಮಾಡಲು ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕಾರ್ತಿಕ್​​ (26) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆ ವೇಳೆ ಬಿಡಿಸಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದೆ.

ದೀಪಾ ಎಂಬ ಮಹಿಳೆ ಜೊತೆಯಲ್ಲಿ ಕಾರ್ತಿಕ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ಈ ಹಿಂದೆ ಜಗಳ ನಡೆದಿತ್ತು. ವಿಷಯ ಪೊಲೀಸ್​​ ಠಾಣೆ ಮೆಟ್ಟಿಲು ಕೂಡ ಹತ್ತಿತ್ತು. ಆ ವೇಳೆ ಪೊಲೀಸರು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಈ ನಡುವೆ ಮಹಿಳೆಯೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಘಟನೆ ವೇಳೆ ಗ್ರಾಮಸ್ಥರ ಮಧ್ಯ ಪ್ರವೇಶದಿಂದಾಗಿ ಕಾರ್ತಿಕ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವಿಗೆ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಪತಿ ಮನೆಯವರ ಕಿರುಕುಳ; ಡ್ಯಾಂಗೆ ಹಾರಿ ಪ್ರಾಣಬಿಟ್ಟ ಉಪನ್ಯಾಸಕಿ

6 ಜನರ ಕೊಲೆಗೆ ಯತ್ನ

ಗಂಡನ ಮನೆಯಲ್ಲಿ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕೊಲೆಗೆ ವ್ಯಕ್ತಿಯೋರ್ವ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮ‌ದಲ್ಲಿ ನಡೆದಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಕೀಚಕ ಭೀಮಪ್ಪ ಭೋಸಲೆಯನ್ನ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್‌ 10ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿ ಭೀಮಪ್ಪನ ಕಿರುಕುಳ ತಾಳಲಾರದೆ ಪತ್ನಿ ರಾಣಿ ಭೋಸಲೆ ತವರು ಸೇರಿದ್ದಳು. ಬೇಡ ಅಂದ್ರೂ ಹೇಗೆ ತನ್ನ ಪತ್ನಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದೀರಿ ಎಂದು ಸಿಟ್ಟಾಗಿದ್ದ ಭೀಮಪ್ಪ, 6 ಜನರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಸಂಜು ಸಾಳುಂಕೆ, ಶಂಕರ್ ಸಾಳುಂಕೆ, ಕೃಷ್ಣಾ ಸಾಳುಂಕೆ, ಅಂಕುಶ ಪಡತಾರೆ, ಮನೋಹರ ಪಡತಾರೆ, ರಾಣಿ ಭೋಸಲೆಗೆ ಗಂಭೀರ ಗಾಯವಾಗಿದೆ. ವಿಜಯಪುರದ ಬಿಎಲ್‌ಡಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us