ಮನೆ ಮುಂದೆ ಕಸಗುಡಿಸುತ್ತಿದ್ದಾಕೆ ಮೇಲೆ ಬೆಳ್ಳಂ ಬೆಳಿಗ್ಗೆ ಸರಗಳ್ಳರ ದಾಳಿ: ಕುಸಿದು ಬಿದ್ದು ಮಹಿಳೆ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಹುಸ್ಕೂರು ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ. ಘಟನೆ ವೇಳೆ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೆಲಮಂಗಲ, ಫೆಬ್ರವರಿ 09: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಈ ನಡುವೆ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳು ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ಓಲೆಯನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದಿದ್ದ ಜ್ಯೋತಿ ಕೈ ಮೇಲೆ ಮಾರ್ಕ್ ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್ಮ್ಯಾನ್ ಅರೆಸ್ಟ್
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಜ್ಯೋತಿ ಸಹೋದರಿ ನೀತು, ಮನೆಯ ಬಾಗಿಲ ಬಳಿಯೇ ಅಟ್ಯಾಕ್ ಮಾಡಿ ಕತ್ತಿನಲ್ಲಿದ್ದ ಚಿನ್ನ ಮತ್ತು ಓಲೆ ಎರಡನ್ನೂ ಕಿತ್ತುಕೊಂಡಿದ್ದಾರೆ. ಬಳಿಕ ಮುಖಕ್ಕೆ ಸ್ಪ್ರೇ ಮಾಡಿ ಜೋರಾಗಿ ನೂಕಿದ್ದಾರೆ. ಈ ವೇಳೆ ಮನೆಯ ಮುಂದಿನ ಸಂಪ್ ಮುಚ್ಚಳಕ್ಕೆ ಜ್ಯೋತಿ ಅವರ ಮುಖ ತಾಗಿ ಗಾಯಗಳಾಗಿವೆ. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿರೋದಾಗಿ ತಿಳಿಸಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:25 pm, Mon, 9 February 26
