ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆಗೆ ಅನುಮತಿ: ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಅಮುಲ್ ಉತ್ಪನ್ನ ಮಳಿಗೆಗಳನ್ನು ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪಿಸುವ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕೇವಲ ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್ಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳಿಗೆ ಕೆಎಂಎಫ್ಗೆ ಟೆಂಡರ್ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಬೆಂಗಳೂರು, ಜೂನ್ 18: ಬೆಂಗಳೂರಿನ ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ (Amul) ಉತ್ಪನ್ನ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ಕೆಎಂಎಫ್ಗೆ ಟೆಂಡರ್ ಕೊಟ್ಟಿದ್ದೇವೆ. ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್ಗೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ನಮ್ಮದೇ ರಾಜ್ಯದ ಕೆಎಂಎಫ್ಗೆ ಅನುಮತಿ ಕೊಡಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಮಳಿಗೆಗಳನ್ನು ತೆರೆಯುವುದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಅದರ ಅಡಿಯಲ್ಲಿ ಅಮುಲ್ಗೆ ಅವಕಾಶ ಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೆಎಂಎಫ್ ನಂದಿನಿ ಬಿಟ್ಟು ಬೇರೆ ರಾಜ್ಯದ ಅಮುಲ್ ಮಳಿಗೆಗಳಿಗೆ ಅವಕಾಶ ಕೊಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಟೆಂಡರ್ನಲ್ಲಿ ಯಾರೂ ಭಾಗಿಯಾಗಿರಲಿಲ್ಲ: ಡಿಕೆ ಶಿವಕುಮಾರ್
ಮೆಟ್ರೋ ನಿಲ್ದಾಣಗಳಲ್ಲಿ ಉತ್ಪನ್ನ ಮಳಿಗೆಗಳನ್ನು ತೆರೆಯಲು ಬಿಎಂಆರ್ಸಿಎಲ್ ಜಾಗತಿಕ ಟೆಂಡರ್ ಕರೆದಿತ್ತು. ಅದರಲ್ಲಿ ಯಾರೂ ಕೂಡ ಭಾಗಿಯಾಗಿರಲಿಲ್ಲ. ಅಮುಲ್ ಸಂಸ್ಥೆಯವರು 10 ಕಡೆ ಮಳಿಗೆ ಹಾಕಲು ಕೇಳಿಕೊಂಡಿದ್ದರು. ಆಗ, ಕೆಎಂಎಫ್ಗೂ ಟೆಂಡರ್ ಹಾಕುವಂತೆ ಹೇಳಿದ್ದೆ. 8 ಕಟೆ ಕೆಎಂಎಫ್ ಮಳಿಗೆಗಳನ್ನು ತೆರೆಯಲು ಟೆಂಡರ್ ಕೊಟ್ಟಿದ್ದೇವೆ. 2 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ಗೆ ಅವಕಾಶ ಕೊಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಎಂಟು ಕಡೆ ಅಮುಲ್ ಮಳಿಗೆ ಎಂದಿದ್ದ ಬಿಎಂಆರ್ಪಿಎಲ್
ಇದೀಗ ಉಪಮುಖ್ಯಮಂತ್ರಿಗಳು ಎರಡು ಕಡೆ ಮಾತ್ರ ಅಮುಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದಿದ್ದಾರೆ. ಆದರೆ, ಈ ಹಿಂದೆ ಬಿಎಂಆರ್ಸಿಎಲ್ ಹೌಸ್ ಜರ್ನಲ್ನಲ್ಲಿ ಪ್ರಕಟಿಸಿದ್ದ ಮಾಹಿತಿ ಪ್ರಕಾರ, ಎಂಟು ಕಡೆಗಳಲ್ಲಿ ಅಮುಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು.
ಪ್ರತಿಪಕ್ಷ ಜೆಡಿಎಸ್ ಕೂಡ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ‘ಡುಪ್ಲಿಕೇಟ್ ಸಿಎಂ ಡಿಕೆಶಿ ಅವರ ನವರಂಗಿ ಆಟ ಮತ್ತೆ ಬಯಲಾಗಿದೆ. ಚುನಾವಣೆಗೆ ಮುಂಚೆ ಸೇವ್ ನಂದಿನಿ ಎಂದಿದ್ದವರು ಈಗ ಕಮಿಷನ್ ಆಸೆಗೆ ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ’ ಎಂದು ಜಾತ್ಯತೀತ ಜನತಾದಳ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್ಸಿಎಲ್: ಸಾರ್ವಜನಿಕರಿಂದ ಆಕ್ಷೇಪ
2023 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಅಮುಲ್ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಡಿಕೆ ಶಿವಕುಮಾರ್ ಆಗ ಹೇಳಿಕೊಂಡಿದ್ದರು. ಅಲ್ಲದೆ, ಸೇವ್ ನಂದಿನಿ ಅಭಿಯಾನ ಮಾಡಲಾಗಿತ್ತು. ಇದೀಗ ಅವರ ಮಾತನ್ನು ಅವರಿಗೇ ತಿರುಗುಬಾಣವಾಗಿಸಿ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Wed, 18 June 25








