ವಿಧಾನಸೌಧ ಆವರಣಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿ: ಡಿಕೆಶಿ ಸೈಕ್ಲಿಂಗ್ ಬೆನ್ನಲ್ಲೇ ಮೋಹನ್ದಾಸ್ ಪೈ ಆಗ್ರಹ
ಮೋಹನ್ದಾಸ್ ಪೈ ಅವರು ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸೈಕಲ್ ಸವಾರಿ ಫೋಟೋ ವೈರಲ್ ಆದ ನಂತರ ಪೈ ಅವರು ಸಾಮಾಜಿಕ ಮಾಧ್ಯಮದ ಮೂಲಕ ಆಗ್ರಹ ವ್ಯಕ್ತಪಡಿಸಿದ್ದಾರೆ. ವಿಧಾನಸೌಧಕ್ಕೆ ಪ್ರಸ್ತುತ ವಾರಾಂತ್ಯಗಳಲ್ಲಿ ಶುಲ್ಕದೊಂದಿಗೆ ಪ್ರವೇಶ ಇದೆ.

ಬೆಂಗಳೂರು, ಜೂನ್ 18: ವಿಧಾನಸೌಧದ ಆವರಣದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಉದ್ಯಮಿ ಮೋಹನ್ದಾಸ್ ಪೈ (Mohandas Pai), ಸಾರ್ವಜನಿಕರಿಗೂ ಆಡಳಿತಸೌಧದ ಆವರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾದ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ನಾಗರಿಕರಿಗೆ ವಿಧಾನಸೌಧದ ಆವರಣಕ್ಕೆ ವಾರಾಂತ್ಯಗಳಲ್ಲಿ ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಜಾದಿನಗಳಲ್ಲಿ ನಾಗರಿಕರು ವಿಧಾನಸೌಧ ಆವರಣದೊಳಗೆ ಬರಲು ಅವಕಾಶ ನೀಡಿ. ಇದರಿಂದ ಅವರು ‘ಜನರ ಅರಮನೆ’ಯ ಭವ್ಯತೆಯನ್ನು ಕಣ್ತುಂಬಿಕೊಳ್ಳಬಹುದು ಮತ್ತು ಆನಂದಿಸಬಹುದು. ಇದು ನಮ್ಮ ಅರಮನೆ ಮತ್ತು ನಮ್ಮನ್ನು ಹೊರಗೆ ಇಡಲಾಗುತ್ತಿದೆ. ಮೊದಲು ನಮಗೆ ಒಳಗೆ ಹೋಗಲು, ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಅವಕಾಶವಿತ್ತು. ಈಗ ನಮಗೆ ಅನುಮತಿ ಇಲ್ಲ. ದಯಮಾಡಿ ಸಾರ್ವಜನಿಕರಿಗೆ ಒಳ ಪ್ರವೇಶಿಸಲು, ಮಕ್ಕಳು ಒಳಗೆ ಆಟವಾಡಲು, ಆವರಣದಲ್ಲಿ ನಡೆಯಲು ಅವಕಾಶ ಕಲ್ಪಿಸಿ ಎಂದು ಮೋಹನ್ದಾಸ್ ಪೈ ಎಕ್ಸ್ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
ಮೋಹನ್ದಾಸ್ ಪೈ ಎಕ್ಸ್ ಸಂದೇಶ
Minister @DKShivakumar Pl Allow citizens to come inside Vidhana Soudha grounds on holidays so that they can enjoy the grandeur of the people’ palace. It is our palace and we are being kept out. Earlier we were allowed inside, sit on steps. Now we are not allowed. Pl allow, open… https://t.co/fd1SyZjCWD
— Mohandas Pai (@TVMohandasPai) June 17, 2025
ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕಚೇರಿ ಮತ್ತು ಇತರರನ್ನು ಪೈ ಟ್ಯಾಗ್ ಮಾಡಿದ್ದಾರೆ.
ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸಂದೀಪ್ ಹೆಗ್ಡೆ ಎಂಬವರು, ವಾರಾಂತ್ಗಳಲ್ಲಿ ಶುಲ್ಕ ಪಾವತಿ ಮಾಡಿ ಗೈಡ್ಗಳ ಜತೆ ವಿಧಾನಸೌಧಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿದ ಪೈ, ‘ಅದಕ್ಕೆ ಶುಲ್ಕ ಯಾಕೆ? ನಾಗರಿಕರ ತೆರಿಗೆ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಲಾಗಿದೆ’ ಎಂದಿದ್ದಾರೆ.
ಪ್ರವಾಸ ಯೋಜನೆಯಾಗಿ ವಾರಾಂತ್ಯಗಳಲ್ಲಿ ಸೀಮಿತ ಸಂಖ್ಯೆಯ ನಾಗರಿಕರ ವಿಧಾನಸೌಧ ಪ್ರವೇಶಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಸ್ಪೀಕರ್ ಕಚೇರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮತ್ತು ವಿಧಾನಸೌಧ ಭದ್ರತಾ ವಿಭಾಗದ ಸಮನ್ವಯದೊಂದಿಗೆ ಈ ಉಪಕ್ರಮ ಹಮ್ಮಿಕೊಳ್ಳಲಾಗಿದೆ. ಭಾನುವಾರ ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸಕ್ಕೆ ಅವಕಾಶ ಇದೆ.
ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ವಿಧಾನಸೌಧ ಪ್ರವಾಸಕ್ಕೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಅವಕಾಶ ಇದ್ದು, ಪ್ರವಾಸಿಗರನ್ನು ಗೇಟ್ 3 ರ ಮೂಲಕ ಒಳಗೆ ಕರೆದೊಯ್ಯಲಾಗುತ್ತದೆ. ಪ್ರವೇಶ ದರವು ಪ್ರತಿ ವ್ಯಕ್ತಿಗೆ 50 ರೂ. ಆಗಿದ್ದು, 16 ವರ್ಷದೊಳಗಿನ ಮಕ್ಕಳು ಕಡ್ಡಾಯ ನೋಂದಣಿಯೊಂದಿಗೆ ಉಚಿತವಾಗಿ ಭಾಗವಹಿಸಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ