‘ಏನಿದು ವಿಪರ್ಯಾಸ?’ ಶಶಿ ತರೂರ್, ಅನುಪಮ್ ಖೇರ್‌ ಅಮೆರಿಕದಲ್ಲಿ ಆರೋಗ್ಯ ತಪಾಸಣೆಗೆ ಬೆಂಗಳೂರಿನ ವೈದ್ಯರ ಪೋಸ್ಟ್ ವೈರಲ್

ಶಶಿ ತರೂರ್ ಹಾಗೂ ಅನುಪಮ್ ಖೇರ್ ಅಮೆರಿಕದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವ ಕುರಿತು ಬೆಂಗಳೂರಿನ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಅದರ ಬೆನ್ನಲ್ಲೇ, ತರೂರ್ ತಮ್ಮ ಅಮೆರಿಕ ಭೇಟಿಯ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ವೈದ್ಯರ ಎಕ್ಸ್​ ಸಂದೇಶದಲ್ಲೇನಿದೆ? ತರೂರ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

‘ಏನಿದು ವಿಪರ್ಯಾಸ?’ ಶಶಿ ತರೂರ್, ಅನುಪಮ್ ಖೇರ್‌ ಅಮೆರಿಕದಲ್ಲಿ ಆರೋಗ್ಯ ತಪಾಸಣೆಗೆ ಬೆಂಗಳೂರಿನ ವೈದ್ಯರ ಪೋಸ್ಟ್ ವೈರಲ್
ಶಶಿ ತರೂರ್, ಅನುಪಮ್ ಖೇರ್‌
Image Credit source: @ShashiTharoor

Updated on: Sep 19, 2026 | 9:37 AM

ಮುಖ್ಯಾಂಶಗಳು

  • ತರೂರ್, ಖೇರ್ ಆರೋಗ್ಯ ತಪಾಸಣೆ ಬಗ್ಗೆ ಚರ್ಚೆ
  • ಬೆಂಗಳೂರಿನ ವೈದ್ಯರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಲಾಸ್ ಏಂಜಲೀಸ್ ಭೇಟಿಗೆ ತರೂರ್ ಸ್ಪಷ್ಟನೆ

ಬೆಂಗಳೂರು, ಸೆಪ್ಟೆಂಬರ್ 19: ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ನಟ ಅನುಪಮ್ ಖೇರ್ ಅಮೆರಿಕದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಕುರಿತು ಬೆಂಗಳೂರಿನ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಎಂಬವರು ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಾ. ದೀಪಕ್ ಕೃಷ್ಣಮೂರ್ತಿ, ಕಾಂಗ್ರೆಸ್ ನಾಯಕ ಹಾಗೂ ಬಿಜೆಪಿ ಬೆಂಬಲಿಗ ಎಂದು ಗುರುತಿಸಿಕೊಂಡಿರುವ ಇಬ್ಬರೂ ಭಾರತದಲ್ಲಿ ಹಲವು ವರ್ಷಗಳ ಕಾಲ ಪ್ರಭಾವ ಬೀರಿದವರು. ಆದರೆ, ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈದ್ಯರ ಪೋಸ್ಟ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆದಿದೆ. ಆರೋಗ್ಯ ವಿಚಾರದಲ್ಲಿ ರಾಜಕೀಯವನ್ನು ಬೆರೆಸಬಾರದು, ಸಾಮರ್ಥ್ಯವಿರುವವರು ತಮಗೆ ಬೇಕಾದ ಅತ್ಯುತ್ತಮ ವೈದ್ಯಕೀಯ ಸೇವೆ ಪಡೆಯುವುದು ಸಹಜ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, ದೇಶದ ಆರೋಗ್ಯ ವ್ಯವಸ್ಥೆ ಕುರಿತು ಸಾರ್ವಜನಿಕವಾಗಿ ಮಾತನಾಡುವ ಗಣ್ಯರು ವಿದೇಶದಲ್ಲಿ ಚಿಕಿತ್ಸೆ ಅಥವಾ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಡಾ. ದೀಪಕ್ ಕೃಷ್ಣಮೂರ್ತಿ ಎಕ್ಸ್ ಸಂದೇಶ


ಈ ಚರ್ಚೆಗೆ ಶಶಿ ತರೂರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವುದಕ್ಕೆ ಕಾರಣ ನೀಡಿದ ಅವರು, ಭಾರತದಲ್ಲಿರುವ ಬಿಡುವಿನ ಸಮಯಕ್ಕಿಂತ ವಿದೇಶದಲ್ಲಿರುವಾಗ ನಾಲ್ಕು ಗಂಟೆ ಸಮಯ ಹೊಂದಿಸಿಕೊಳ್ಳುವುದು ತಮ್ಮ ಪಾಲಿಗೆ ಸುಲಭವಾಗಿದೆ ಎಂದು ಹೇಳಿದ್ದಾರೆ.

ಶಶಿ ತರೂರ್ ಸ್ಪಷ್ಟನೆಯುಳ್ಳ ಎಕ್ಸ್ ಸಂದೇಶ


ಅಲ್ಲದೆ, ತರೂರ್ ಹಾಗೂ ಅನುಪಮ್ ಖೇರ್ ಅವರನ್ನು ಉದ್ಯಮಿ ಪುನೀತ್ ಚಂದಕ್ ಮತ್ತು ಅವರ ಪತ್ನಿ ಸೋನಿಯಾ ಆಹ್ವಾನಿಸಿದ್ದರು. ಒಂದೇ ಸ್ಥಳದಲ್ಲಿ ಹಲವು ಸುಧಾರಿತ ಸ್ಕ್ಯಾನಿಂಗ್ ತಂತ್ರಜ್ಞಾನಗಳಿರುವುದರಿಂದ ಕೆಲವೇ ಗಂಟೆಗಳಲ್ಲಿ ಹಲವು ಪರೀಕ್ಷೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ತರೂರ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us