ನಮ್ಮ ಮೆಟ್ರೋ ಪರ್ಪಲ್ ಲೈನ್ನಲ್ಲಿ ಬ್ಯಾಗ್ ಚೆಕ್ಕಿಂಗ್ ಕಿರಿಕಿರಿ: ಕಿಲೋಮೀಟರ್ಗಟ್ಟಲೆ ಕ್ಯೂ ನಿಂತು ಪ್ರಯಾಣಿಕರ ಆಕ್ರೋಶ!
ನಮ್ಮ ಮೆಟ್ರೋ ಪರ್ಪಲ್ ಲೈನ್ನಲ್ಲಿ ಪ್ರಯಾಣಿಕರು ಬ್ಯಾಗ್ ತಪಾಸಣೆಗಾಗಿ 20 ರಿಂದ 30 ನಿಮಿಷ ಕಾಯುವಂತಾಗಿದ್ದು, ಬಿಎಂಆರ್ಸಿಎಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಬ್ಬಂದಿ ಮತ್ತು ತಪಾಸಣಾ ಯಂತ್ರಗಳ ಕೊರತೆಯಿಂದಾಗಿ ಪಿಕ್ ಅವರ್ನಲ್ಲಿ ಮೆಟ್ರೋ ಸ್ಟೇಷನ್ನಿಂದ ಸ್ಕೈವಾಕ್ವರೆಗೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ.

ಮುಖ್ಯಾಂಶಗಳು
- ನಮ್ಮ ಮೆಟ್ರೋ ಪರ್ಪಲ್ ಲೈನ್ನಲ್ಲಿ ಬ್ಯಾಗ್ ಚೆಕ್ಕಿಂಗ್ಗೆ ತೀವ್ರ ಕ್ಯೂ ಸಾಲು.
- ಸಿಬ್ಬಂದಿ ಕೊರತೆಯಿಂದ 30 ನಿಮಿಷ ಕಾಯುವಂತಾಗಿ ಪ್ರಯಾಣಿಕರು ತೀವ್ರ ಆಕ್ರೋಶಗೊಂಡಿದ್ದಾರೆ.
- ಸಮಸ್ಯೆ ಬಗೆಹರಿಸಲು ವರದಿ ಕೇಳಿರುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 19: ನಮ್ಮ ಮೆಟ್ರೋ ಎಂದರೆ ಅದು ಬೆಂಗಳೂರಿನ ಜನರ ಪಾಲಿನ ಅತ್ಯಂತ ವೇಗದ ಮತ್ತು ನಂಬಿಕಸ್ಥ ಸಾರಿಗೆ ವ್ಯವಸ್ಥೆ. ಆದರೆ, ಇತ್ತೀಚೆಗೆ ವೈಟ್ಫೀಲ್ಡ್ನಿಂದ ಚಲ್ಲಘಟ್ಟ ಸಂಪರ್ಕಿಸುವ ಪರ್ಪಲ್ ಲೈನ್ನಲ್ಲಿ ಪ್ರಯಾಣಿಕರು ಮೆಟ್ರೋ ಹತ್ತುವುದಕ್ಕಿಂತ ಮುಂಚೆಯೇ ಹೈರಾಣಾಗುತ್ತಿದ್ದಾರೆ. ಪ್ರವೇಶ ದ್ವಾರದಲ್ಲಿ ಬ್ಯಾಗ್ ತಪಾಸಣೆ ಮಾಡಿಸಿಕೊಳ್ಳಲು ಬರೊಬ್ಬರಿ 20 ರಿಂದ 30 ನಿಮಿಷಗಳ ಕಾಲ ಕಿಲೋಮೀಟರ್ಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು, ಬಿಎಂಆರ್ಸಿಎಲ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಬ್ಬಂದಿ ಮತ್ತು ಯಂತ್ರಗಳ ಕೊರತೆಯೇ ಮುಖ್ಯ ಕಾರಣ
ಪ್ರತಿದಿನ ನಮ್ಮ ಮೆಟ್ರೋದಲ್ಲಿ 10 ರಿಂದ 12 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ರಸ್ತೆ ಸಂಚಾರ ದಟ್ಟಣೆಯಿಂದ ಬಚಾವ್ ಆಗಿ ಸರಿಯಾದ ಸಮಯಕ್ಕೆ ತಲುಪಬಹುದು ಎನ್ನುವ ಕಾರಣಕ್ಕೆ ಐಟಿ-ಬಿಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಮೆಟ್ರೋವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಆದರೆ ಬೈಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ, ವೈಟ್ಫೀಲ್ಡ್ ಸೇರಿದಂತೆ ಹಲವು ಪ್ರಮುಖ ಸ್ಟೇಷನ್ಗಳಲ್ಲಿ ಮೆಟ್ರೋ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರ ಬ್ಯಾಗ್ ತಪಾಸಣೆ ಮಾಡಲು ಪೂರಕವಾದ ವ್ಯವಸ್ಥೆಯಿಲ್ಲ. ಬ್ಯಾಗ್ ಚೆಕ್ ಮಾಡಲು ಅಗತ್ಯ ಸಿಬ್ಬಂದಿಗಳ ಕೊರತೆ ಹಾಗೂ ಪರಿಶೀಲನಾ ಯಂತ್ರಗಳು ಸಾಲುತ್ತಿಲ್ಲ ಎಂಬುದು ಪ್ರಯಾಣಿಕರ ದೂರಾಗಿದೆ.
ಪೀಕ್ ಅವರ್ನಲ್ಲಿ ಮೆಟ್ರೋ ಸ್ಟೇಷನ್ನಿಂದ ಸ್ಕೈವಾಕ್ವರೆಗೆ ಸಾಲು!
ವಿಶೇಷವಾಗಿ ಬೆಳಿಗ್ಗೆ 7 ರಿಂದ 10 ಮತ್ತು ಸಂಜೆ 4 ರಿಂದ 7 ಗಂಟೆಯ ‘ಪಿಕ್ ಅವರ್ಸ್’ ಸಮಯದಲ್ಲಿ ಈ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮೆಟ್ರೋ ಪ್ರವೇಶ ದ್ವಾರದಿಂದ ಹಿಡಿದು ಹೊರಗಿನ ಸ್ಕೈವಾಕ್ವರೆಗೆ ಪ್ರಯಾಣಿಕರು ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದಾಗಿ ಕಚೇರಿ ಮತ್ತು ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪಿಕ್ ಅವರ್ನಲ್ಲಿ ಹೆಚ್ಚಿನ ಸಿಬ್ಬಂದಿ ಹಾಗೂ ಯಂತ್ರಗಳನ್ನು ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿಎಂಆರ್ಸಿಎಲ್ ಅಧಿಕಾರಿಗಳ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ **ಯಶ್ವಂತ್ ಚೌವ್ಹಾಣ್** ಅವರು, “ಪ್ರಯಾಣಿಕರಿಂದ ದೂರುಗಳು ಬಂದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಲು ಸ್ಟೇಷನ್ ಕಂಟ್ರೋಲರ್ಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ಸಿಬ್ಬಂದಿ ನಿಯೋಜನೆ ಹಾಗೂ ಹೆಚ್ಚುವರಿ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು” ಎಂದು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




