
ಬೆಂಗಳೂರು, ಏಪ್ರಿಲ್ 20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ (heatwave) ಅಕ್ಷರಶಃ ಜನರನ್ನು ಸುಡುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಸೂರ್ಯನ ಶಾಖಕ್ಕೆ ಮೈ ಸುಟ್ಟು ಹೋಗುತ್ತಿದೆ. ಈ ಉರಿಯುವ ಬಿಸಿಲಿನಿಂದ ಬಚಾವಾಗಲು ಬೆಂಗಳೂರಿಗರು ಈಗ ಒಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಬೈರ್, ಸ್ಕೂಟರ್ ಮತ್ತು ನಾನ್-ಎಸಿ ಕಾರುಗಳನ್ನು ಮನೆಯಲ್ಲೇ ಬಿಟ್ಟು, ಕೂಲ್ ಕೂಲ್ ಆಗಿರುವ ಬಿಎಂಟಿಸಿ ಎಸಿ ಬಸ್ (BMTC AC bus) ಹಾಗೂ ನಮ್ಮ ಮೆಟ್ರೋದತ್ತ ಜನ ಮುಖ ಮಾಡಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗಳ ಖಜಾನೆ ಕೂಡ ತುಂಬುತ್ತಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಗರು ಕಾರು, ಬೈಕ್ ಬಿಟ್ಟು ನಮ್ಮ ಮೆಟ್ರೋ, ಬಿಎಂಟಿಸಿಯ ಎಸಿ ಬಸ್ಗಳನ್ನು ಹತ್ತುತ್ತಿದ್ದಾರೆ. ನಗರದಲ್ಲಿ ಈಗಾಗಲೇ 36° ಡಿಗ್ರಿ ತಾಪಮಾನ ತಲುಪಿದ್ದು, ಈ ಹಿನ್ನೆಲೆ ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಬೈಕ್, ನಾರ್ಮಲ್ ಬಸ್ ಮತ್ತು ಕಾರು ಸಹವಾಸವೇ ಬೇಡ ಅಂತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!
ಇತ್ತ ಬಿಸಿಲಿನಿಂದ ಬಿಎಂಟಿಸಿ ಎಸಿ ಬಸ್ಗಳಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಬಿಎಂಟಿಸಿಯ ಡಿಸೇಲ್, ಎಲೆಕ್ಟ್ರಿಕ್ ಸೇರಿ 535 ಎಸಿ ಬಸ್ಗಳಿದ್ದು, ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬೇಸಿಗೆ ಆರಂಭವಾದ ಮೇಲೆ 2.5 ಕೋಟಿ ರೂ ಆದಾಯ ಹರಿದುಬಂದಿದೆ. ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕರು, ನಗರದಲ್ಲಿ ಜಾಸ್ತಿ ಬಿಸಿಲಿರುವದರಿಂದ ಹೊರಗೆ ಹೋಗಲು ಆಗುತ್ತಿಲ್ಲ. ಅದಕ್ಕೆ ನಾನು ಬಿಎಂಟಿಸಿಯ ಎಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಬಾಲಾಜಿ ಅವರು ಹೇಳಿದ್ದಾರೆ.
ಇನ್ನು ಬಿಸಿ ಹೆಚ್ಚಾಗುತ್ತಿರುವುದರಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರತಿದಿನ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ನಿಲ್ಲಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಪ್ರಯಾಣಿಕರು. ವೈಟ್ ಫೀಲ್ಡ್ ಟು ಚಲ್ಲಘಟ್ಟ ಮಾರ್ಗದಲ್ಲಿ ವಿಪರೀತ ರಶ್ ಉಂಟಾಗುತ್ತಿದೆ.
ಇಷ್ಟು ದಿನ ಬೈಕ್, ಸ್ಕೂಟರ್ನಲ್ಲಿ ಓಡಾಡುತ್ತಿದ್ದವರು ಇದೀಗ ಬಿಸಿಲಿಗೆ ಕೂಲ್ ಆಗಿರುವ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರಾದ ರಾಮದಾಸ್ ಪಂಡಿತ್, ವೈಟ್ ಫೀಲ್ಡ್ ನಿಂದ ಮೆಜೆಸ್ಟಿಕ್ಗೆ ಮೆಟ್ರೋದಲ್ಲಿ ಬಂದೆ, ಕಾಲಿಡಲು ಜಾಗವಿಲ್ಲ ಅಷ್ಟು ರಶ್ ಇತ್ತು, ಆದರೆ ಕೂಲ್ ಆಗಿತ್ತು. ಮೆಜೆಸ್ಟಿಕ್ಗೆ ಇಳಿದು ಸಂಬಂಧಿಕರನ್ನು ಬಿಡಲು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ಗೆ ಹೋಗಿ ಬರುವಷ್ಟರಲ್ಲಿ ಶರ್ಟ್ ಎಲ್ಲಾ ಬೆವರಿನಿಂದ ಒದ್ದೆಯಾಗಿದೆ ಎಂದರು.
ಇದನ್ನೂ ಓದಿ: ಕೆಆರ್ಎಸ್ ಡ್ಯಾಂ ನೀರಿನ ಮಟ್ಟ 99 ಅಡಿಗೆ ಕುಸಿತ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಎದುರಾಯ್ತು ಜಲಕಂಟಕ
ಒಟ್ಟಿನಲ್ಲಿ, ಸಿಲಿಕಾನ್ ಸಿಟಿಯ ಬಿಸಿಲು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದರೂ, ಎಸಿ ಪ್ರಯಾಣ ಮಾತ್ರ ಜನರಿಗೆ ಸದ್ಯದ ಮಟ್ಟಿಗೆ ದೊಡ್ಡ ರಿಲೀಫ್ ನೀಡುತ್ತಿದೆ. ಬಿಸಿಲು ಹೆಚ್ಚಾದಂತೆ ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿರುವುದು ಮಾತ್ರ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.