ಐದು ವರ್ಷಗಳೊಳಗೆ ಮನೆ ನಿರ್ಮಿಸದ ಖಾಲಿ ಸೈಟ್ ವಾಪಸ್ ಪಡೆಯುವ ಸರ್ಕಾರದ ಪ್ರಸ್ತಾಪಕ್ಕೆ ತೀವ್ರ ವಿರೋಧ
ಐದು ವರ್ಷಗಳೊಳಗೆ ಮನೆ ನಿರ್ಮಿಸದ ಖಾಲಿ ನಿವೇಶನಗಳನ್ನು ವಾಪಸ್ ಪಡೆಯುವ ಅಥವಾ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಕುರಿತು ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾಪವು ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೂಲ ಸೌಕರ್ಯಗಳೇ ಇಲ್ಲದ ಜಾಗದಲ್ಲಿ ಮನೆ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 02: ಐದು ವರ್ಷಗಳೊಳಗೆ ಮನೆ ನಿರ್ಮಿಸದ ಖಾಲಿ ನಿವೇಶನಗಳನ್ನು ವಾಪಸ್ ಪಡೆಯುವ ಅಥವಾ ಅಂತಹ ನಿವೇಶನಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿರೋದಾಗಿ ರಾಜ್ಯ ಸರ್ಕಾರ ಹೇಳಿರೋದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರದ ಪ್ರಸ್ತಾಪಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳ ನಿವೇಶನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮೂಲ ಸೌಕರ್ಯಗಳೇ ಇಲ್ಲದ ಜಾಗದಲ್ಲಿ ಮನೆ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನಿವೇಶನ ಮಾಲೀಕರು ಹೇಳೋದೇನು?
ನಾಡಪ್ರಭು ಕೆಂಪೇಗೌಡ ಬಡಾವಣೆ)ಯ (NPKL) ನಿವೇಶನದಾರರೊಬ್ಬರು, 2016ರಲ್ಲೇ ನಿವೇಶನ ಹಂಚಿಕೆಯಾಗಿದೆ. ಆದರೆ ಇಂದಿಗೂ ಶೇ.75ರಷ್ಟು ರಸ್ತೆ ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಕಾಮಗಾರಿ ಕಳೆದ ಎರಡು-ಮೂರು ವರ್ಷಗಳ ಹಿಂದೆ ವೇಗ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಆರ್ಕಾವತಿ ಬಡಾವಣೆಯ ಮತ್ತೊಬ್ಬ ನಿವೇಶನ ಮಾಲೀಕರು, ಕಾನೂನು ತೊಡಕುಗಳು ಹಾಗೂ ಮೂಲಸೌಕರ್ಯದ ಕೊರತೆಯಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸಿದ್ದೇವೆ. ಮೊದಲು ಬಡಾವಣೆಗಳಲ್ಲಿ ರಸ್ತೆ, ವಿದ್ಯುತ್, ನೀರಿನಂತಹ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸಬೇಕು. ನಂತರ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಖಾಲಿ ಸೈಟ್ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು, ಇಲ್ಲಾಂದ್ರೆ ಡಬ್ಬಲ್ ಆಸ್ತಿ ತೆರಿಗೆ: ಸಿಎಂ ಖಡಕ್ ಸೂಚನೆ
ಬಿಜೆಪಿಯಿಂದಲೂ ವಿರೋಧ
ಸಇರ್ಕಾರದ ಪ್ರಸ್ತಾಪಕ್ಕೆ ವಿಪಕ್ಷ ಬಿಜೆಪಿaಯಿಂದಲೂ ವಿರೋಧ ಕೇಳಿಬಂದಿದೆ. ಸಾಲ ಮಾಡಿ ಸೈಟ್ ಖರೀದಿ ಮಾಡಿರ್ತಾರೆ. ಅವರಿಗೆ ಲೋನ್ ಆಗದಕ್ಕೆ ಮನೆ ಕಟ್ಟಲು ಸಾಧ್ಯವಿರಲ್ಲ. ದುಡಿದ್ದೋರು ಮನೆ ಕಟ್ತಾರೆ, ಇಲ್ಲದರಿಗೆ ಮನೆಕಟ್ಟಲು 10-15 ವರ್ಷ ಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಖಾಲಿ ನಿವೇಶನಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಅಥವಾ ಇತರ ಅಪಾಯಗಳಿಗೆ ಸರ್ಕಾರ ಜವಾಬ್ದಾರಿಯಲ್ಲ. ಅದು ನಿಮ್ಮ ಆಸ್ತಿ, ಅದರ ನಿರ್ವಹಣೆ ನಿಮ್ಮ ಹೊಣೆ. ನಿವೇಶನ ಹಂಚಿಕೆಗೊಂಡು ಐದು ವರ್ಷ ಕಳೆದರೂ ಮನೆ ನಿರ್ಮಿಸದಿದ್ದರೆ, ಆ ನಿವೇಶನವನ್ನು ವಾಪಸ್ ಪಡೆಯುವ ಅಥವಾ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ನಿನ್ನೆಯಷ್ಟೇ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




