ಹೆಂಡತಿಯನ್ನು ಕಂಡು ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಬೆಂಗಳೂರಿನಲ್ಲಿ ಸಾಕು ನಾಯಿ ಸ್ಕೂಬಿ ಮೇಲೆ ನೆರೆಮನೆಯವನ ಕ್ರೂರ ಹಲ್ಲೆ ನಡೆದಿದೆ. ತನ್ನ ಮೇಲೆ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ನಾಯಿಗೆ ಮನಸೋಇಚ್ಛೆ ಥಳಿಸಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಕೂಬಿ ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ಮತ್ತು ಸಾಕು ನಾಯಿಗಳ ಸುರಕ್ಷತೆ ಕುರಿತು ಈ ಪ್ರಕರಣ ಗಂಭೀರ ಚರ್ಚೆಗೆ ಗ್ರಾಸ ಒದಗಿಸಿದೆ.

ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ (Stray Dogs) ಹಾವಳಿ ಹೆಚ್ಚಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ನಾಯಿ ದಾಳಿಗೆ ಹೆದರಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ನಾಯಿ ಎಂದ ಮೇಲೆ ಬೊಗಳುವುದು ಸಹಜ. ಅದರಲ್ಲೂ ಸಾಕು ನಾಯಿಯನ್ನು ರಕ್ಷಣೆಗಾಗಿಯೇ ಇಟ್ಟುಕೊಳ್ಳುವುದರಿಂದ, ಮನೆಯ ಜನರನ್ನು ಬಿಟ್ಟು ಉಳಿದವರು ಯಾರೇ ತಮ್ಮ ಮನೆ ಬಳಿ ಬಂದರೂ ಸಾಕು ನಾಯಿಗಳು ಬೊಗಳುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪಕ್ಕದ ಮನೆಯವರ ಸಾಕು ನಾಯಿ ತನ್ನ ಹೆಂಡತಿಗೆ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕೆ ಅದರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಆತನ ಈ ಕ್ರೌರ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ನಾಯಿ ಅಸ್ವಸ್ಥ!
ಬೆಂಗಳೂರಿನ ಅವರೆಹಳ್ಳಿಯಲ್ಲಿರುವ ವ್ಯಾಪಾರಿ ಅಂಜನಪ್ಪ ಅವರಿಗೆ ಸೇರಿದ ಆರು ವರ್ಷದ ‘ಸ್ಕೂಬಿ, ಪಕ್ಕದ ಮನೆಯ ಮಹಿಳೆಯನ್ನು ಕಂಡು ಬೊಗಳಿದೆ. ಇಷ್ಟಕ್ಕೇ ರೊಚ್ಚಿಗೆದ್ದ ಆಕೆಯ ಪತಿ ಗೋಪಿ, ಅಂಜನಪ್ಪ ಮನೆಯ ಆವರಣಕ್ಕೆ ನುಗ್ಗಿ, ಗೇಟ್ ಬಳಿ ಕಟ್ಟಿ ಇಟ್ಟಿದ್ದ ನಾಯಿಯನ್ನು ದೊಣ್ಣೆಯಿಂದ ಹಲವಾರು ಬಾರಿ ಥಳಿದಿ ವಿಕೃತಿ ಮೆರೆದಿದ್ದಾನೆ. ಹಲ್ಲೆಗೊಳಗಾದ ಸ್ಕೂಬಿ ತಕ್ಷಣವೆ ಮೂರ್ಛೆ ಹೋಗಿದ್ದು, ಮಾಲೀಕರು ಅದನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೆಲ್ಲದರ ಬಳಿಕ ಗೋಪಿ ಪರಾರಿಯಾಗಿದ್ದು, ಘಟನೆ ವೇಳೆ ಆತ ಕಂಠಪೂರ್ತಿ ಕುಡಿದು ಬಂದಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ ಸೈಕಲ್ ಓಡಿಸುತ್ತಿದ್ದ ಬಾಲಕನಿಗೆ ಸಾಕು ನಾಯಿ ಕಡಿತ; ನಾಯಿ ಮಾಲೀಕರ ಮೇಲೆ ಎಫ್ಐಆರ್!
ಪರಾರಿಯಾದ ಗೋಪಿಗಾಗಿ ಶೋಧ
ಸಧ್ಯಕ್ಕೆ ನಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿಯ ಕ್ರೌರ್ಯದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವಾರದ ಹಿಂದೆಯಷ್ಟೇ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ 11 ವರ್ಷದ ಬಾಲಕನ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ನಾಯಿಗಳ ಈ ರೀತಿಯ ವರ್ತನೆಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ಆದರೆ ಈ ರೀತಿ ಕ್ಷುಲ್ಲಕ ಕಾರಣಕ್ಕೆ ಮೂಕಪ್ರಾಣಿಯ ಮೇಲೆ ಇಂತಹ ದೌರ್ಜನ್ಯ ಮಾಡುವುದು ಅಸಮಂಜಸ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




