ಇಂದಿನಿಂದ ಐಪಿಎಲ್​, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತಡರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಪಂದ್ಯ ವೀಕ್ಷಿಸಿ ಹಿಂದಿರುಗುವ ಜನರಿಗೆ ಅನುಕೂಲವಾಗುವಂತೆ ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದ್ದು, ಪಾರ್ಕಿಂಗ್ ಮತ್ತು ಟಿಕೆಟ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದಿನಿಂದ ಐಪಿಎಲ್​, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತಡರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)

Updated on: Mar 28, 2026 | 6:56 AM

ಬೆಂಗಳೂರು, ಮಾರ್ಚ್ 28: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ (BMRCL) ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಿದೆ. ಕ್ರಿಕೆಟ್ ಪ್ರೇಕ್ಷಕರಿಗೆ ಸುಗಮ ಪ್ರಯಾಣ ಕಲ್ಪಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರೇಕ್ಷಕರು ಹೆಚ್ಚು ಮೆಟ್ರೋ ಸೇವೆಯನ್ನೇ ಬಳಸಿಕೊಳ್ಳುವಂತೆ ಸಂಚಾರಿ ಪೊಲೀಸರೂ ಸಹ ಮನವಿ ಮಾಡಿದ್ದಾರೆ.

ಪಂದ್ಯದ ದಿನದಂದು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯ ಬದಲಾಗಿ ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1:30ಕ್ಕೆ ಹೊರಡಲಿದೆ.

ಕೊನೆಯ ರೈಲು ಹೊರಡುವ ಸಮಯ

  • ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30
  • ಚಲ್ಲಘಟ್ಟ: ರಾತ್ರಿ 12:45
  • ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12:45
  • ಬೊಮ್ಮಸಂದ್ರ: ರಾತ್ರಿ 01:00
  • ಆರ್.ವಿ. ರಸ್ತೆ: ರಾತ್ರಿ 02:00

ಟಿಕೆಟ್ ರಹಿತ ಪ್ರಯಾಣಕ್ಕೆ ಕ್ಯೂಆರ್ ಕೋಡ್

ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿ ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ (ಟೂ-ವೇ ಟ್ರಾವೆಲ್) ಮುದ್ರಿತವಾಗಿರುತ್ತದೆ. ಡಿಜಿಟಲ್ ಟಿಕೆಟ್ ಹೊಂದಿರುವವರು ಸಹ ಇದನ್ನು ಬಳಸಿ ಪ್ರಯಾಣಿಸಬಹುದು. ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಐಪಿಎಲ್ ವಿಐಪಿ ಟಿಕೆಟ್‌ಗಾಗಿ ಶಾಸಕರ ಪಟ್ಟು: ನಾವು ಸಾಮಾನ್ಯರೇ? ಕ್ಯೂನಲ್ಲಿ ನಿಲ್ಲಲಾಗದೆಂದ ಕಾಶಪ್ಪನವರ್‌ಗೆ ತೇಜಸ್ವಿ ಸೂರ್ಯ ಟಾಂಗ್!

ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ

ವಾಹನ ದಟ್ಟಣೆ ನಿಯಂತ್ರಿಸಲು ನಗರದ 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರುಗಳಿಗೆ 60 ರೂ. ದರ ಇರಲಿದೆ. ಇದು ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಅನ್ವಯವಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us