ಐಪಿಎಲ್ ವಿಐಪಿ ಟಿಕೆಟ್ಗಾಗಿ ಶಾಸಕರ ಪಟ್ಟು: ನಾವು ಸಾಮಾನ್ಯರೇ? ಕ್ಯೂನಲ್ಲಿ ನಿಲ್ಲಲಾಗದೆಂದ ಕಾಶಪ್ಪನವರ್ಗೆ ತೇಜಸ್ವಿ ಸೂರ್ಯ ಟಾಂಗ್!
ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ 5 ವಿಐಪಿ ಟಿಕೆಟ್ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್ಗೆ ಬೇಡಿಕೆ ಇಡುವುದು ವಿಧಾನಸಭೆಯ ಘನತೆಗೆ ಕುಂದು ಉಂಟುಮಾಡಿದಂತೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಮಾರ್ಚ್ 27: ಬೆಂಗಳೂರಿನಲ್ಲಿ (Bangalore) ಐಪಿಎಲ್ (IPL 2026) ಕ್ರೇಜ್ ಆರಂಭವಾಗುತ್ತಿದ್ದಂತೆಯೇ, ಇತ್ತ ವಿಧಾನಸೌಧದ ಒಳಗೂ ಟಿಕೆಟ್ ಕಿರಿಕ್ ಶುರುವಾಗಿದೆ. ‘ನಾವು ವಿಐಪಿಗಳು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಪ್ರತಿ ಶಾಸಕರಿಗೂ 5 ವಿಐಪಿ ಟಿಕೆಟ್ ನೀಡಬೇಕು’ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆ ಈಗ ರಾಜ್ಯಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ವಿಜಯಾನಂದ ಕಾಶಪ್ಪನವರ್ ಹೇಳಿದ್ದೇನು?
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ವಿಧಾನಸಭೆಯಲ್ಲಿ ಕೆಎಸ್ಸಿಎ (KSCA) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಜನಪ್ರತಿನಿಧಿಗಳು, ನಮಗೆ ಗೌರವ ಕೊಡಬೇಕು. ಕಳೆದ ಬಾರಿ ನಮ್ಮನ್ನು ಸಾಮಾನ್ಯ ಗ್ಯಾಲರಿಯಲ್ಲಿ ಕೂರಿಸಲಾಗಿತ್ತು. ಕೆಎಸ್ಸಿಎ ಸರ್ಕಾರದಿಂದ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯುತ್ತದೆ, ಆದರೆ ಶಾಸಕರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದೆ. ಆನ್ಲೈನ್ನಲ್ಲಿ ಟಿಕೆಟ್ ಪಡೆಯುವುದು ಒಂದು ನಾಟಕ, ಅಲ್ಲಿ ಬ್ಲಾಕ್ ಮಾರ್ಕೆಟ್ ದಂಧೆ ನಡೆಯುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಕಾಶಪ್ಪನವರ್ ಬೇಡಿಕೆಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಹ ದನಿಗೂಡಿಸಿದ್ದಾರೆ.
ವಿಧಾನಸೌಧದ ಘನತೆಗೆ ತಕ್ಕುದಲ್ಲ: ತೇಜಸ್ವಿ ಸೂರ್ಯ ಖಂಡನೆ
ಶಾಸಕರ ಈ ವಿಐಪಿ ಟಿಕೆಟ್ ಬೇಡಿಕೆಯನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ಶಾಸಕರ ಈ ಬೇಡಿಕೆ ಅವರ ಆದ್ಯತೆಗಳು ಏನಾಗಿವೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್ಗಾಗಿ ಪಟ್ಟು ಹಿಡಿಯುವುದು ವಿಧಾನಸೌಧದ ಘನತೆಗೆ ತಕ್ಕುದಲ್ಲ. ಜನಸಾಮಾನ್ಯರು ಹಣ ನೀಡಿ ಟಿಕೆಟ್ ಖರೀದಿಸುವಾಗ ಶಾಸಕರಿಗೆ ಯಾಕೆ ಉಚಿತವಾಗಿ ನೀಡಬೇಕು? ಇದು ಅವರಲ್ಲಿರುವ ಅಹಂಕಾರದ ಪರಮಾವಧಿ ಎಂದು ಖಂಡಿಸಿದ್ದಾರೆ.
ತೇಜಸ್ವಿ ಸೂರ್ಯ ಎಕ್ಸ್ ಸಂದೇಶ
The MLA’s statement is wrong. And frankly, not surprising.
First, it exposes their priorities. At a time when real issues of the state demand attention, raising something like this in the Assembly is itself telling. And if the Speaker chooses to act on it, it diminishes the… https://t.co/DY4FemIyjw
— Tejasvi Surya (@Tejasvi_Surya) March 26, 2026
ಐಪಿಎಲ್ ಟಿಕೆಟ್ ಬೇಡಿಕೆಗೆ ಡಿಕೆಶಿ ಶಿವಕುಮಾರ್ ಬೆಂಬಲ
ಆದರೆ, ಈ ವಿಚಾರದಲ್ಲಿ ಶಾಸಕರ ಬೆಂಬಲಕ್ಕೆ ನಿಂತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಅವರಿಗೆ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ನಾನು ಈ ಬಗ್ಗೆ ಕೆಎಸ್ಸಿಎ ಪದಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ತೇಜಸ್ವಿ ಸೂರ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿ, ಸೂರ್ಯ ಮೊದಲು ಅವರ ಪಕ್ಷದ ಶಾಸಕರಿಗೆ ಬುದ್ಧಿ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್ ಟಿಕೆಟ್ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!
ಈ ಬೆಳವಣಿಗೆಯ ಬೆನ್ನಲ್ಲೇ, ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ನೀಡುವ ನಿಟ್ಟಿನಲ್ಲಿ ಕೆಎಸ್ಸಿಎಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Fri, 27 March 26
