AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್ 2026) ಉದ್ಘಾಟನೆ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಆರ್​​ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಹೀಗಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಇನ್ನೊಂದೆಡೆ ಐಪಿಎಲ್ ಟಿಕೆಟ್​ಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ಇತ್ತ ಬಜೆಟ್ ಅಧಿವೇಶನದಲ್ಲೂ ಸಹ ಐಪಿಎಲ್ ಟಿಕೆಟ್​ ಬಗ್ಗೆ ಬಿಸಿಬಿಸಿ ಚರ್ಚೆ ಆಗಿದೆ.

ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!
Vidhana SoudhaImage Credit source: google
ರಮೇಶ್ ಬಿ. ಜವಳಗೇರಾ
|

Updated on: Mar 26, 2026 | 5:03 PM

Share

ಬೆಂಗಳೂರು, (ಮಾರ್ಚ್ 26): ಇದೇ ಮಾರ್ಚ್ 28ರಿಂದ ಐಪಿಎಲ್ (IPL 2026) ಹಬ್ಬ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದೆಡೆ ಐಪಿಎಲ್​​ ಟಿಕೆಟ್​ ಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ಬಜೆಟ್ ಅಧಿವೇಶನದಲ್ಲೂ ಚರ್ಚೆಯಾಗಿದೆ. ಹೌದು.. ಐಪಿಎಲ್ ಟಕೆಟ್ ಸಂಬಂಧ ಆಡಳಿತರೂಢ ಹಾಗೂ ವಿಪಕ್ಷ ಶಾಸಕರು ಐಪಿಎಲ್ ಟಿಕೆಟ್​​ ಬೇಡಿಕೆ ಇಟ್ಟಿದ್ದಾರೆ. ಶಾಸಕರಿಗೆ ಕನಿಷ್ಠ 4 ರಿಂದ 5 ಟಿಕೆಟ್ ಕೊಡಿಸಿ ಎಂದು ವಿಧಾನಸಭೆಯಲ್ಲಿಂದು (Vidhan Sabha) ಸದಸ್ಯರು ಪಕ್ಷಾತೀತವಾಗಿ ಸ್ಪೀಕರ್ ಯುಟಿ ಖಾದರ್​ ಮುಂದೆ ಬೇಡಿಕೆ ಇಟ್ಟಿದ್ದಾರೆ.

KSCA ಮುಂದೆ ಅಂಗಲಾಚುವ ಪರಿಸ್ಥಿತಿ

ಉದ್ದೇಶಿತ ಸ್ಟೇಡಿಯಂ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಮತ್ತು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ. ಮೊನ್ನೆ 11 ಜನ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಮತ್ತೊಂದು ಸ್ಟೇಡಿಯಂ ಬೇಡ. ಚಿನ್ನಸ್ವಾಮಿ ಸ್ಟೇಡಿಯಂ ಜಾಗ ನಮ್ಮದು. ಅಲ್ಲಿ ಕ್ರಿಕೆಟ್ ಟ್ರೈನಿಂಗ್ ಮಾಡಿ‌ ಎಂದು ಜಾಗ ನೀಡಿದ್ದೇವೆ. ಅವರು ಏನು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅಶೋಕ್, ಒಂದು ಟಿಕೆಟ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (KSCA) ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ. ನಮ್ಮ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಮಾರಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರು ಮ್ಯಾಚ್ ಬಗ್ಗೆ ಆರ್‌ಸಿಬಿ ಬಿಗ್ ಅಪ್‌ಡೇಟ್: ಟಿಕೆಟ್ ಬುಕಿಂಗ್ ಮತ್ತು ಹೊಸ ರೂಲ್ಸ್ ಮಾಹಿತಿ ಇಲ್ಲಿದೆ!

ಸ್ಟೇಡಿಯಂಗೆ 16 ಎಕರೆ 32 ಗುಂಟೆ ಜಾಗ ನಾವು ಕೊಟ್ಟಿದ್ದೇವೆ. ನಮ್ಮ ಟಿಕೆಟ್‌ಗೆ ಎರಡು ಸಾವಿರ, ಮೂರು ಸಾವಿರ, ಇಪ್ಪತ್ತು ಸಾವಿರ ರೂ. ಚಾರ್ಜ್ ಮಾಡ್ತಾರೆ. ಅವರು ತಿಂಗಳಿಗೆ ಸರ್ಕಾರಕ್ಕೆ ಕೊಡೋದು ಕೇವಲ 1600 ರೂ. ಮಾತ್ರ. ನಾವು 16 ಎಕರೆ ಜಾಗ ನೀಡಿದ್ದೇವೆ. ನಮ್ಮ ತಲೆ ಮೇಲೆ ಎಳೀತಾರೆ, ಅಂಥವರಿಗಾಗಿ ಇನ್ನೊಂದು ಸ್ಟೇಡಿಯಂ ಮಾಡಲು ಹೊರಟಿದ್ದೀರಿ. ಇವರಿಗೆ ಮೊದಲು ಬುದ್ಧಿ ಕಲಿಸಿ ಎಂದು ಆಗ್ರಹಿಸಿದರು.

ಟಿಕೆಟ್ ಬಗ್ಗೆ ಧ್ವನಿ ಎತ್ತಿದ ಕಾಂಗ್ರೆಸ್ ಶಾಸಕ

ಈ ವೇಳೆ ಮಾತಾಡಿದ ಕೈ ಶಾಸಕ ವಿಜಯಾನಂದ ಕಾಶಪ್ಪನವರ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೀಕ್ಷಕರ ಸಂಖ್ಯೆಯನ್ನು ಏರಿಸಿ. ಶಾಸಕರಿಗೆ ಒಂದೇ ಟಿಕೆಟ್ ಅದೂ ಕೆಳಗಡೆಯ ಗ್ಯಾಲರಿಯಲ್ಲಿ ಕೊಡುತ್ತಾರೆ. ಶಾಸಕರಿಗೆ ಕೂರಲು ಮೊದಲು ಸೂಕ್ತ ಅವಕಾಶ ಮಾಡಿಕೊಡಲಿ. ಹೊಸ ಸ್ಟೇಡಿಯಂ ಆಮೇಲೆ ಮಾಡಿ. ಶಾಸಕರಿಗೆ ಪ್ರತ್ಯೇಕ ಲಾಂಜ್ ಮಾಡಿ ಐದು ಟಿಕೆಟ್ ಕೊಡಿಸಿ. ಟಿಕೆಟ್ ಕಾಸಂತೆಯಲ್ಲಿ ಮಾರುತ್ತಾರೆ. ಆದರೆ ನಮಗೆ ಕೊಡುವುದಿಲ್ಲ. ಶಾಸಕರು ಅಂದ್ರೆ ಗೌರವ ಇಲ್ವಾ? ನಮಗೆ ಐದು ಟಿಕೆಟ್ ಕೊಡಲಿ ಎಂದು ಒತ್ತಾಯಿಸಿದರು.

ಟಿಕೆಟ್ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸ್ಫೀಕರ್ ಸಲಹೆ

ಬಳಿಕ ಮಾತಾಡಿದ ಸ್ಪೀಕರ್ ಖಾದರ್, ಶಾಸಕರು ಕ್ರಿಕೆಟ್ ಟಿಕೆಟ್ ಬಗ್ಗೆ ಗಂಭೀರ ವಿಚಾರ ಎತ್ತಿದ್ದಾರೆ. ಸರ್ಕಾರ ಕೆಎಸ್‌ಸಿಎ ಅವರನ್ನು ಕರೆಸಿ ಒಂದು ತೀರ್ಮಾನ ಮಾಡಬೇಕು. ಶಾಸಕರು ಬಂದ್ರೆ ಮಾತ್ರ ಟಿಕೆಟ್ ನೀಡುತ್ತೇವೆ ಎನ್ನುತ್ತಾರೆ. ಶಾಸಕರು ಕ್ಯೂನಲ್ಲಿ ‌ನಿಂತ್ರೆ ಟಿಕೆಟ್ ಕೊಡೋರಿಗೆ, ಭದ್ರತೆಯವರಿಗೆ ಏನು ಗೊತ್ತಿದೆ. ಗೌರವ ಸಿಗದಕ್ಕೆ ಶಾಸಕರು ಹೋಗುವುದೇ ಇಲ್ಲ. ಶಾಸಕರಿಗೆ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ ಕೊಡುವ ವ್ಯವಸ್ಥೆ ಆಗಲಿ ಎಂದು ಸಲಹೆ ನೀಡಿದರು.

ಟಿಕೆಟ್ ನೀಡುವ ಬಗ್ಗೆ ಡಿಕೆಶಿ ಹೇಳಿದ್ದೇನು?

ಕೊನೆಗೆ ಡಿಕೆಶಿ ಪ್ರತಿಕ್ರಿಯಿಸಿ, ಖಂಡಿತವಾಗಿ ಅವರನ್ನು ಕರೆಸಿ ಮಾತಾಡುತ್ತೇವೆ. ನಾನೂ ಕೆಎಸ್‌ಸಿಎ ಸದಸ್ಯ. ಅವರನ್ನು ಕರೆಸಿ ಶಾಸಕರ ಟಿಕೆಟ್ ಬಗ್ಗೆ ಮಾತಾಡುತ್ತೇನೆ. ಶಾಸಕರಿಗೆ ಎಲ್ಲ ಹಕ್ಕೂ ಇದೆ. ಖಾದರ್ ಆದೇಶ, ಸಾಮ್ರಾಟ್ ಅಶೋಕ್ ಮನವಿ ಇದೆ ಎಂದು ಹೇಳುತ್ತೇನೆ ಎಂದು ಉತ್ತರಿಸಿ ಚರ್ಚೆಗೆ ತೆರೆ ಎಳೆದರು.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us