
ಬೆಂಗಳೂರು, ಜೂನ್ 5: ನಮ್ಮ ಮೆಟ್ರೋದ ಆರ್ವಿ ರಸ್ತೆ–ಬೊಮ್ಮಸಂದ್ರ ನಡುವಿನ ‘ಹಳದಿ ಮಾರ್ಗ’ (Yellow Line Metro) ಕೇವಲ ಪ್ರಯಾಣದ ಸಮಯವನ್ನು ಉಳಿಸುತ್ತಿಲ್ಲ, ಬದಲಿಗೆ ಸಾರ್ವಜನಿಕರ ಆರೋಗ್ಯ ವೃದ್ಧಿಸುವಲ್ಲಿ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ! ಇಂಥದ್ದೊಂದು ಅಚ್ಚರಿಯ ವಿಚಾರ ಇದೀಗ ತಿಳಿದುಬಂದಿದೆ. ಹಳದಿ ಮೆಟ್ರೋ ಮಾರ್ಗದ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯವು ನಡೆಸಿರುವ ಸಮಗ್ರ ಅಧ್ಯಯನದಲ್ಲಿ ಈ ಕುರಿತು ಅತ್ಯಂತ ಆಸಕ್ತಿದಾಯಕ ಮತ್ತು ಸಕಾರಾತ್ಮಕ ಮಾಹಿತಿ ಬಹಿರಂಗವಾಗಿದೆ. ಮೆಟ್ರೋ ಸಂಚಾರ ಆರಂಭವಾದ ಬಳಿಕ ಜನಸಾಮಾನ್ಯರ ಜೀವನಮಟ್ಟ, ವರ್ತನೆ ಹಾಗೂ ದೈಹಿಕ-ಮಾನಸಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ವರದಿ ಹೇಳಿದೆ.
ಐಐಎಸ್ಸಿಯ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಹಳದಿ ಮಾರ್ಗದ ಕಾರಿಡಾರ್ ಉದ್ದಕ್ಕೂ ವಾಸಿಸುವ ಸುಮಾರು 600 ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಮೆಟ್ರೋ ಕಾರ್ಯಾಚರಣೆ ಆರಂಭವಾಗುವ ಮುನ್ನ ಹಾಗೂ ಜಾರಿಯಾದ ಆರು ತಿಂಗಳ ಬಳಿಕ ಸಾರ್ವಜನಿಕರ ಆರೋಗ್ಯ ಮತ್ತು ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ ಪ್ರಸ್ತುತ ಶೇ 58 ರಷ್ಟು ಜನರು ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಬಳಲುತ್ತಿದ್ದಾರೆ. ಇದು ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್) ಮತ್ತು ಉಸಿರಾಟದ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಆದರೆ, ಮೆಟ್ರೋ ನಿಲ್ದಾಣಗಳಿಗೆ ನಡೆದುಕೊಂಡು ಹೋಗುವುದು ಮತ್ತು ಬರುವುದರಿಂದ ಪ್ರಯಾಣಿಕರಿಗೆ ವಾರಕ್ಕೆ 50 ರಿಂದ 75 ನಿಮಿಷಗಳಷ್ಟು ಹೆಚ್ಚುವರಿ ದೈಹಿಕ ಚಟುವಟಿಕೆ ಸಿಗುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ.
ಈ ಕುರಿತು ಸಂತಸ ಹಂಚಿಕೊಂಡಿರುವ ಮೆಟ್ರೋ ಪ್ರಯಾಣಿಕರಾದ ದೇಶಪಾಂಡೆ ಮತ್ತು ವಿನಯ್ ಶ್ರೀನಿವಾಸ್, ‘ಹಿಂದೆ ವಾಹನಗಳಲ್ಲಿ ಆಫೀಸ್ಗೆ ಹೋಗುವಾಗ ತೀವ್ರ ಟ್ರಾಫಿಕ್ನಿಂದಾಗಿ ಮಾನಸಿಕ ಕಿರಿಕಿರಿ ಉಂಟಾಗುತ್ತಿತ್ತು, ಕೆಲಸ ಮಾಡಲು ಮನಸ್ಸಿರುತ್ತಿರಲಿಲ್ಲ. ಆದರೆ ಈಗ ಒಂದೂವರೆ ಗಂಟೆ ಮುಂಚಿತವಾಗಿಯೇ ಕಚೇರಿ ತಲುಪುತ್ತಿದ್ದು, ಮಾನಸಿಕ ಒತ್ತಡ ಮತ್ತು ಆಯಾಸ ಮುಕ್ತವಾಗಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು
ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ ಶೇ 83 ರಷ್ಟು ಮಂದಿ ಮೆಟ್ರೋ ವ್ಯವಸ್ಥೆಗೆ ಜೈ ಎಂದಿದ್ದರೆ, ಇನ್ನುಳಿದ ಶೇ 17 ರಷ್ಟು ಜನರು ಮಾತ್ರ ವೈಯಕ್ತಿಕ ಕಾರಣಗಳಿಂದಾಗಿ ಮೆಟ್ರೋ ಸಂಚಾರಕ್ಕೆ ಒಲವು ತೋರಿಲ್ಲ. ಒಟ್ಟಾರೆಯಾಗಿ, ಮಾಲಿನ್ಯ ನಿಯಂತ್ರಣ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಳದಿ ಮೆಟ್ರೋ ಮಾರ್ಗವು ಬೆಂಗಳೂರಿಗರ ಪಾಲಿಗೆ ವರದಾನವಾಗಿ ಮಾರ್ಪಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ