
ಬೆಂಗಳೂರು, ಸೆಪ್ಟೆಂಬರ್ 09: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಆದೇಶದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, CWMA ಆದೇಶಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವುದು ಕರ್ನಾಟಕದ ಹಿತಾಸಕ್ತಿಗೆ ಹೊಡೆದ ಬಲವಾದ ಪೆಟ್ಟು. ನಮ್ಮ ರಾಜ್ಯದ ವಾದಕ್ಕೆ ಪ್ರಾಧಿಕಾರದಲ್ಲಿ ಸೂಕ್ತ ಬೆಲೆ ಸಿಗದಿರಲು ರಾಜ್ಯ ಸರ್ಕಾರದ ಮೃದು ಧೋರಣೆ ಮತ್ತು ಕಾನೂನು ಹೋರಾಟದ ಸಂಪೂರ್ಣ ವೈಫಲ್ಯವೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.
ತಮಿಳುನಾಡು ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ನಿತ್ಯ ಬರೋಬ್ಬರಿ 20,000 ಕ್ಯೂಸೆಕ್ ನೀರಿಗಾಗಿ ಪಟ್ಟು ಹಿಡಿದಾಗ, ಅದನ್ನು ದೃಢವಾಗಿ ವಿರೋಧಿಸಿ ಸಂಪೂರ್ಣ ನೀರು ಬಿಡುಗಡೆಯನ್ನು ತಡೆಯಲು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮ್ಮ ಜಲಾಶಯಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗ, ಮಳೆ ಅಭಾವದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಿ ಈಗ ಮತ್ತೆ 15 ದಿನಗಳಲ್ಲಿ 7.77 TMC ನೀರು ಹರಿಸಲು ಒಪ್ಪಿಕೊಂಡು ಬಂದಿರುವುದು ಕನ್ನಡಿಗರಿಗೆ ಎಸಗಿದ ಮಹಾದ್ರೋಹ. ಮೇಲ್ಮನವಿ ಸಲ್ಲಿಸುವ ಆಲೋಚನೆ ಇದೆ ಎಂದು ದಿನಕ್ಕೊಂದು ನೆಪ ಹೇಳಿ ಕಾಲಹರಣ ಮಾಡುವ ಬದಲು, ತಕ್ಷಣವೇ ಸುಪ್ರೀಂ ಕೋರ್ಟ್ನಲ್ಲಿ ಬಲವಾದ ಮೇಲ್ಮನವಿ ಸಲ್ಲಿಸಿ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲೇ ಕಾವೇರಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಡುವುದೇಕೆ?
ಕಾವೇರಿ ನೀರಿನ ಹಂಚಿಕೆಯಲ್ಲಿ ನಿರಂತರವಾಗಿ ಕರ್ನಾಟಕ ಸಂಕಷ್ಟ ಎದುರಿಸಬೇಕಾಗಿದೆ. ನಮ್ಮ ಸಮಸ್ಯೆ ನಮ್ಮ ಕೂಗನ್ನು ಸಿಡಬ್ಲ್ಯೂಆರ್ಸಿ ಮತ್ತು ಸಿಡಬ್ಲ್ಯೂಎಂಎಗೆ ಪರಿಣಾಮಕಾರಿಯಾಗಿ ಒತ್ತಿ ಹೇಳಲು ವಿಫಲವಾಗಿರುವಂತದ್ದು ಬಹಳ ಸ್ಪಷ್ಟ. ಅಧಿಕಾರಿಗಳು ಏನೇ ಹೇಳಿದರೂ ಕೂಡ ಇಲ್ಲಿರುವಂತಹ ವಸ್ತು ಪರಿಸ್ಥಿತಿ ಮುಂಬರುವಂತಹ ಕುಡಿಯುವ ನೀರಿನ ಅಭಾವ ನಮ್ಮ…
— Basavaraj S Bommai (@BSBommai) September 9, 2026
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಆಗ್ರಹಿಸಿರುವ ಅವರು, ಕಾವೇರಿ ಪ್ರಕರಣಕ್ಕೆ ವಿಶೇಷ ಹಿರಿಯ ನ್ಯಾಯವಾದಿ ನೇಮಿಸಬೇಕು. ಈಗ ಕೊಟ್ಟಿರುವಂತಹ ಆದೇಶ 6000 ಕ್ಯೂಸೆಕ್ಸ್ 15 ದಿವಸ ಅಂದರೆ ಸುಮಾರು ಏಳೂವರೆ ಟಿಎಂಸಿ ನೀರನ್ನು ಬಿಡಬೇಕಾಗುತ್ತದೆ. ಈಗಾಗಲೇ ಕಬಿನಿ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ. ಕೆ.ಆರ್.ಎಸ್ ಕೂಡ ಈಗ ಪ್ರತಿ ದಿವಸ ಸುಮಾರು ಐದರಿಂದ 6000 ಕ್ಯೂಸೆಕ್ಸ್ ಬಿಡುವುದರಿಂದ ಪ್ರತಿ ದಿವಸ ಅರ್ಧ ಟಿಎಂಸಿ ನೀರು ಕಡಿಮೆ ಆಗುತ್ತಿದೆ. ಇನ್ನು 15 ದಿನ ಅಂದರೆ ಸುಮಾರು 7.5 ಟಿಎಂಸಿ ನೀರು ಕಡಿಮೆ ಆಗುತ್ತದೆ. ಮಳೆ ಬರುವಂತಹ ಲಕ್ಷಣಗಳು ಕೂಡ ಇಲ್ಲ. ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ದಿಲ್ಲಿಗೆ ಹೋಗಿ ಕುಳಿತುಕೊಂಡು ಕಾನೂನು ತಜ್ಞರ ಜೊತೆಗೆ ತಾಂತ್ರಿಕ ತಜ್ಞರ ಜೊತೆಗೆ ಬದಲಾದ ಪರಿಸ್ಥಿತಿಯ ಬಗ್ಗೆ ಕುಲಂಕುಶವಾಗಿ ಚರ್ಚೆ ಮಾಡಿ ಅದಕ್ಕೆ ನ್ಯಾಯಾಂಗ ತಂಡಕ್ಕೆ ಹೊಸ ಶಕ್ತಿಯನ್ನು ತುಂಬಿ ಇದನ್ನು ಮಾಡದೆ ಇದ್ದರೆ ಬರುವಂತಹ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶ ಬೆಂಗಳೂರು ನೀರಿನ ಆಹಾಕಾರದಲ್ಲಿ ಮುಳುಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Wed, 9 September 26