ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ಬೆಂಗಳೂರಿನಲ್ಲಿ ಮಳೆ ಹಾಗೂ ಸೆಕೆ ಮಿಶ್ರಿತ ವಾತಾವರಣದಿಂದ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳು, ಡೆಂಗ್ಯೂ, ವೈರಲ್ ಜ್ವರಗಳು ಹೆಚ್ಚಾಗಿವೆ. ಕೆಮ್ಮು, ನೆಗಡಿ, ಗಂಟಲು ನೋವು, ವಾಂತಿ ಪ್ರಕರಣಗಳು ಉಲ್ಬಣಿಸಿವೆ. ಹೀಗಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.

ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ
ಪ್ರಾತಿನಿಧಿಕ ಚಿತ್ರ
Image Credit source: gettyimages
Edited By:

Updated on: Jun 01, 2026 | 9:29 PM

ಬೆಂಗಳೂರು, ಜೂನ್​ 01: ಸಿಲಿಕಾನ್ ಸಿಟಿಯಲ್ಲಿ (bangaluru) ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆ ಮತ್ತು ಅತಿಯಾದ ಸೆಕೆಯ ವಾತಾವರಣವು ಸಾರ್ವಜನಿಕರನ್ನು, ಅದರಲ್ಲೂ ಮುಖ್ಯವಾಗಿ ಪುಟಾಣಿ ಮಕ್ಕಳನ್ನು (Children) ಹೈರಾಣಾಗಿಸಿದೆ. ಹವಾಮಾನ ವೈಪರೀತ್ಯದ ಬೆನ್ನಲ್ಲೇ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗ್ಯೂ ಸೇರಿ ವೈರಾಣು ಜ್ವರಗಳ ಪ್ರಕರಣಗಳು ತೀವ್ರವಾಗಿ ಉಲ್ಬಣಿಸುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬದಲಾವಣೆ ಹವಾಮಾನದಿಂದ ಮಕ್ಕಳ ಮೇಲೆ ಪರಿಣಾಮ
  • ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ, ವೈರಲ್ ಜ್ವರದ ಆತಂಕ
  • ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ

ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ

ರಾಜಧಾನಿಯಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಇದರೊಂದಿಗೆ ಬಿಸಿಲು ಮತ್ತು ಉಸಿರುಕಟ್ಟುವ ಸೆಕೆಯ ವಾತಾವರಣವೂ ನಿರ್ಮಾಣವಾಗಿದೆ. ಈ ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ನೆಗಡಿ, ಕೆಮ್ಮು, ಶೀತ ಮತ್ತು ತೀವ್ರ ಜ್ವರದ ಸಮಸ್ಯೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದ್ದ ಡೆಂಗ್ಯೂ ಜ್ವರದ ಪ್ರಕರಣಗಳು ಇದೀಗ ಮಕ್ಕಳಲ್ಲಿ ಮತ್ತೆ ಪತ್ತೆಯಾಗುತ್ತಿದ್ದು, ಒಟ್ಟಾರೆ ವೈರಲ್ ಜ್ವರದ ಪ್ರಕರಣಗಳಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ.

ಶಾಲೆ ಆರಂಭದ ಹೊತ್ತಲ್ಲೇ ಸೊಳ್ಳೆಗಳ ಕಾಟ

ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಇದು ಸೊಳ್ಳೆಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಡೆಂಗ್ಯೂ ಕಾಯಿಲೆಯು ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ. ಇದರ ನಡುವೆ, ಶಾಲೆಗಳು ಆರಂಭ ಬೆನ್ನಲ್ಲೇ ಮಕ್ಕಳಲ್ಲಿ ಡಯೇರಿಯಾ (ಅತಿಸಾರ) ಮತ್ತು ನ್ಯುಮೋನಿಯಾ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೊರಗಿನ ಆಹಾರವನ್ನು ನೀಡಬಾರದು ಎಂದು ವೈದ್ಯರು ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳು ಯಾವವು?

  • ವೈರಾಣು ಜ್ವರ ಮತ್ತು ತೀವ್ರ ಚಳಿ ಜ್ವರ
  • ಡೆಂಗ್ಯೂ ಮತ್ತು ಶೀತ ಜ್ವರ
  • ನೆಗಡಿ, ಕೆಮ್ಮು ಮತ್ತು ಗಂಟಲು ನೋವು
  • ಉಸಿರಾಟದ ತೊಂದರೆ ಮತ್ತು ತಲೆನೋವು
  • ತೀವ್ರವಾದ ಸುಸ್ತು, ಮೈಕೈ ನೋವು ಮತ್ತು ವಾಂತಿ

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಒಟ್ಟಿನಲ್ಲಿ ಮಳೆ, ಬಿಸಿಲಿನಿಂದ ಬದಲಾದ ವಾತವರಣ ಹಿನ್ನೆಲೆ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Vinay Kashappanavar
Follow Us