ಕಾಂಗ್ರೆಸ್ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?: ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸೀಟು ಹಂಚಿಕೆ ಮತ್ತು ಸಂಪುಟ ಪುನಾರಚನೆ ಕುರಿತಾದ 'ಪಟ್ಟದಾಟ' ತೀವ್ರಗೊಂಡಿದ್ದು, ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಮೇ ಅಂತ್ಯದೊಳಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದರೆ ಮತ್ತೊಂದು ಲೆಕ್ಕಾಚಾರದ ಪ್ರಕಾರ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಮುಗಿಯುವ ವರೆಗೂ ಹೈಕಮಾಂಡ್ ಈ ಬಗ್ಗೆ ನಿರ್ಧರಿಸಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ಬೆಂಗಳೂರು, ಮೇ 21: ಅಧಿಕಾರ ಹಂಚಿಕೆ ವಿಚಾರ ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಬಣ ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಈ ಸಂಬಂಧ ಪರಸ್ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಪಟ್ಟದಾಟದ ವಿಚಾರ ಸದ್ಯ ಎಐಸಿಸಿ ಅಂಗಳದಲ್ಲಿದೆ. ಹೀಗಾಗಿ ವರಿಷ್ಠರ ತೀರ್ಮಾನವೇ ಅಂತಿಮ ಎಂಬ ಮಾತುಗಳು ಕಾಂಗ್ರೆಸ್ ಪಾಳಯದಿಂದ ಕೇಳಿಬರತೊಡಗಿದೆ. ಪಂಚರಾಜ್ಯ ಚುನಾವಣೆ ಮುಗಿದ ಹಿನ್ನೆಲೆ ಈಗ ವರಿಷ್ಠರು ಕರ್ನಾಟಕದ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಹೀಗಾಗಿ ಮೇ ಅಂತ್ಯದ ವೇಳೆಗೆ ಈ ವಿಚಾರಕ್ಕೊಂದು ತೆರೆ ಬೀಳುವ ಬಗ್ಗೆ ಕಾಂಗ್ರೆಸ್ನಲ್ಲಿಯೇ ಚರ್ಚೆಗಳು ಶುರುವಾಗಿವೆ.
ಸಾಧ್ಯತೆ 1
ಮೇ ತಿಂಗಳ ಅಂತ್ಯಕ್ಕೆ ಸಿಎಂ-ಡಿಸಿಎಂಗೆ ದೆಹಲಿಗೆ ಹೈಕಮಾಂಡ್ ಬುಲಾವ್ ನೀಡಲಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಮುಂದುವರಿಕೆ ಅಥವಾ ಬದಲಾವಣೆ ಬಗ್ಗೆ ಮೊದಲು ಮಾತುಕತೆ ನಡಯಲಿದ್ದು, ಈ ವೇಳೆ ಸಚಿವ ಸಂಪುಟ ಪುನಾರಚನೆ ಸಂಬಂಧ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ವಿಷಯ ಕ್ಲೋಸ್ ಆದಂತೆ. ಆಗ ಈ ಮಾತುಕತೆ ಕೇವಲ ಸಂಪುಟ ಪುನಾರಚನೆಗೆ ಮಾತ್ರ ಸಂಬಂಧಿಸಲಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ
ಸಾಧ್ಯತೆ 2
ಜೂನ್ 25ರ ಒಳಗಾಗಿ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಕಾರಣ ಅಲ್ಲಿಯ ತನಕ ಬದಲಾವಣೆ ಚರ್ಚೆ ಮುಂದೂಡಿಕೆ ಸಾಧ್ಯತೆ ಇದೆ. ಅದಕ್ಕಿಂತ ಮುಂಚೆ ಸಂಪುಟ ಪುನಾರಚನೆ ಮಾಡಿದರೆ ರಾಜ್ಯಸಭೆ ಎಲೆಕ್ಷನ್ ಮೇಲೆ ಅದು ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕ್ರಾಸ್ ವೋಟ್ ಆತಂಕದಿಂದ ಸಂಪುಟ ಪುನಾರಚನೆ ಕೂಡ ಜೂನ್ ಅಂತ್ಯದವರೆಗೆ ಮುಂದೂಡಿಕೆ ಆಗಬಹುದು. ರಾಜ್ಯ ಸಭೆ ಚುನಾವಣೆ ಮುಗಿದ ತಕ್ಷಣವೇ ಎಂಎಲ್ಸಿ ಚುನಾವಣೆ ನಡೆಯಲಿರುವ ಕಾರಣ ಶಾಸಕರ ಪಾತ್ರ ಇಲ್ಲಿ ಪ್ರಮುಖವಾಗಿದೆ.
ಸಾಧ್ಯತೆ 3
ರಾಹುಲ್ ಗಾಂಧಿ ಚರ್ಚೆ ವೇಳೆ ಸಿದ್ದರಾಮಯ್ಯ ಡಿಕೆಶಿ ಇಬ್ಬರೂ ದಾಳ ಉರುಳಿಸುವ ಸಾಧ್ಯತೆ ಇದೆ. ಸಿಎಂ ಬದಲಾವಣೆ ಆಗುವುದೇ ಆದರೆ ಸಿದ್ದರಾಮಯ್ಯ ಪರಮೇಶ್ವರ್ ಹೆಸರು ಸೂಚಿಸುವ ಸಾಧ್ಯತೆ ಇದೆ. ರೀಶಫಲ್ ಮಾತ್ರ ಎನ್ನುವುದೇ ಆದರೆ ಬದಲಾವಣೆ ಆಗೋ ತನಕ ಅದು ಬೇಡ ಎಂದು ಡಿಕೆಶಿ ಪಟ್ಟು ಹಿಡಿಯಬಹುದು. ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಚರ್ಚೆ ನಡೆಯುವ ಕಾರಣ ತೀರ್ಮಾನ ಏನುಬೇಕಾದರೂ ಆಗಬಹುದು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





