Lok Sabha Elections: ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗೆ ಸಿಗುತ್ತಿಲ್ಲ ಕಾರ್ಮಿಕರು, ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ

| Updated By: ಗಣಪತಿ ಶರ್ಮ

Updated on: Apr 18, 2024 | 7:40 AM

ಲೋಕಸಭೆ ಚುನಾವಣೆಯ ಕಾವು ಏರತೊಡಗಿರುವಂತೆಯೇ ಬೆಂಗಳೂರಿನಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಚಟುವಟಿಕೆಗಳು ಕಾರ್ಮಿಕರಿಲ್ಲದೆ ಸ್ಥಗಿತಗೊಂಡಿವೆ. ಇದರ ನೈಜ ಕಾರಣ ಕೇಳಿದರೆ ನಿಜಕ್ಕೂ ಅಚ್ಚರಿಪಡಬೇಕಷ್ಟೆ. ಅಷ್ಟಕ್ಕೂ ಕಾರ್ಮಿಕರ ಕೊರತೆ ಸೃಷ್ಟಿಯಾಗಿದ್ದು ಏಕೆ? ಇದರ ಹಿಂದಿನ ನೈಜ ಕಾರಣ ಏನು? ಇಲ್ಲಿದೆ ವಿವರ.

Lok Sabha Elections: ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗೆ ಸಿಗುತ್ತಿಲ್ಲ ಕಾರ್ಮಿಕರು, ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್ 18: ಬೆಂಗಳೂರಿನಲ್ಲಿ (Bengaluru) ಕಳೆದ ಮೂರು ವಾರಗಳಿಂದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರು (Construction Workers) ಸಿಗುತ್ತಿಲ್ಲ. ಕೂಲಿ ಕಾರ್ಮಿಕರು ಬರುತ್ತಿಲ್ಲ. ದಿನಗೂಲಿ ಕೆಲಸದವರಂತೂ ಕೈಗೇ ಸಿಗುತ್ತಾ ಇಲ್ಲ ಇದಕ್ಕೆ ಕಾರಣ, ಲೋಕಸಭಾ ಚುನಾವಣೆ (Lok Sabha Election)! ನಾಲ್ಕೈದು ಗಂಟೆ ಪ್ರಚಾರ ಮಾಡಿದ್ರೆ ಕೈ ತುಂಬಾ ಕಾಸು, ಹೊಟ್ಟೆ ತುಂಬ ಬಿರಿಯಾನಿ, ರಾತ್ರಿಗೆ ಕ್ವಾಟರ್ ಮದ್ಯ ಸಿಗುತ್ತದಂತೆ. ಜತೆಗೆ ಮನೆಗೆ ಒಂದೋ ಎರಡೋ ಗಿಫ್ಟ್ ಕೂಡ ದೊರೆಯುತ್ತದೆ. ಹೀಗಾಗಿ ಕಾರ್ಮಿಕರು ಕೆಲಸ ಬಿಟ್ಟು ಪ್ರಚಾರ ಕಾರ್ಯದತ್ತ ಆಕರ್ಷಿತರಾಗಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳ ಪ್ರಚಾರಕ್ಕಾಗಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುತ್ತಿರುವುದಕ್ಕೆ, ರಾಜಧಾನಿ ಬೆಂಗಳೂರಲ್ಲಿ ಮನೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ಸದ್ಯ ಕಾರ್ಮಿಕರು ಸಿಗುತ್ತಿಲ್ಲ. ಗಾರೆ ಕೆಲಸ, ಇಟ್ಟಿಗೆ ಕೆಲಸ, ಸಿಮೆಂಟ್ ಕಾಂಕ್ರೀಟ್ ಕೆಲಸ, ಪೇಂಟರ್, ಕಾರ್ಪೆಂಟರ್​​​ಗಳ ಸಹಾಯಕರಿಗೆ ದಿನವೊಂದಕ್ಕೆ 500 ರೂ. ಸಂಬಳ ಸಿಗುತ್ತಿದೆ. ರಾಜಕೀಯ ಪಕ್ಷಗಳ ಬೆಂಬಲಿಗರು ಕಾರ್ಮಿಕರನ್ನು ಕರೆದೊಯ್ದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು 500 ರಿಂದ 1000 ರುಪಾಯಿವರೆಗೆ ನೀಡುತ್ತಾರೆ. ಹೀಗಾಗಿ ಮೂರು ವಾರಗಳಿಂದ ಕಾರ್ಮಿಕರೆಲ್ಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ.

ಹಲವೆಡೆ ಮನೆ, ಅಪಾರ್ಟ್​​ಮೆಂಟ್ ಕಾಮಗಾರಿ ಸ್ಥಗಿತ

ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಬೇಕು. ಪ್ರತಿದಿನ ಇಂತಿಷ್ಟು ಮನೆಗಳಿಗೆ ಕರ ಪತ್ರಗಳನ್ನು ಹಂಚಬೇಕು. ಬೆಳಗ್ಗೆಯಿಂದ ಸಂಜೆ ವರೆಗೆ ಮನೆ ಮನೆಗೆ ಕರಪತ್ರ ಹಂಚಿದರೆ ಸಂಜೆ ಕೈ ತುಂಬಾ ಕಾಸು ಸಿಗುತ್ತದೆ. ಎರಡರಿಂದ ಮೂರು ವಾರ ಶ್ರಮವಿಲ್ಲದ ಕೆಲಸವೆಂಬುದನ್ನು ಅರಿತು, ಲಕ್ಷಾಂತರ ಕಾರ್ಮಿಕರು ಪ್ರಚಾರ ಕಾರ್ಯಕ್ಕೆ ಹೋಗಿದ್ದಾರೆ. ಇದರಿಂದ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಮಿಕರ ಕೊರತೆ‌ ಉಂಟಾಗಿದೆ. ಮನೆ, ಕಟ್ಟಡ, ಅಪಾರ್ಮೆಂಟ್​ಗಳ ನಿರ್ಮಾಣ, ಹಲವೆಡೆ ನಿಂತು ಹೋಗಿದೆ.

ಪ್ರಚಾರಕ್ಕೆ ಹೋದರೆ ಸಿಗುತ್ತೆ ಭರ್ಜರಿ ದುಡ್ಡು, ಗಿಫ್ಟ್

ಪ್ರತಿದಿನ ಕೆಲಸಕ್ಕೆ ಹೋಗಿ ಶ್ರಮ ವಹಿಸುವ ಗಂಡಾಳಿಗೆ 500 ರಿಂದ 750 ರೂ. ವರೆಗೆ ಕೂಲಿ ಸಿಗುತ್ತದೆ. ಹೆಣ್ಣಾಳಿಗೆ 400 ರಿಂದ 600ರ ವರೆಗೆ ಕೂಲಿ ದೊರೆಯುತ್ತದೆ. ಆದರೆ ಚುನಾವಣಾ ಪ್ರಚಾರದಲ್ಲಿ ತಲೆಯ ಮೇಲೆ ಪಕ್ಷಗಳ ಟೋಪಿ ಧರಿಸಿ ಹೆಗಲಮೇಲೊಂದು ಶಾಲು ಹಾಕಿಕೊಂಡು, ಕೈಯಲ್ಲಿ ಕರಪತ್ರ ಹಿಡಿದುಕೊಂಡು, ಮನೆ ಮನೆಗೆ ಹೋಗಿ ಕೊಟ್ಟು ಬಂದರೆ ಆಯ್ತು. ಅಥವಾ ಪಕ್ಷಗಳ ಮುಖಂಡರು ಆಯೋಜಿಸುವ ಸಭೆ ಸಮಾರಂಭ, ಮೆರವಣಿಗೆಗಳಿಗೆ ಬಾವುಟ ಹಿಡಿದುಕೊಂಡು ಹೋಗಿ ಘೋಷಣೆಗಳನ್ನು ಕೂಗಿ ಬಂದರೆ ಸಾಕು. ಊಟ, ತಿಂಡಿ ಆ ದಿನದ ಕೂಲಿ ಸುಲಭವಾಗಿ ಸಿಗುತ್ತದೆ. ಹೀಗಾಗಿ, ಬಹುತೇಕ ಕೂಲಿ ಕಾರ್ಮಿಕರು ಪ್ರಚಾರ ಕಾರ್ಯಕ್ಕೆ ತೆರಳಿದ್ದಾರೆ ಎನ್ನುತ್ತಾರೆ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ರವಿ.

ಇದನ್ನೂ ಓದಿ: ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ಮತ್ತೊಂದೆಡೆ, ಲೋಕಸಭಾ ‌ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬೇರೆಬೇರೆ ರಾಜ್ಯ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಕಾರ್ಮಿಕರೆಲ್ಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತಮ್ಮ ತಮ್ಮ ಊರುಗಳ ಕಡೆ ಹೊರಟ್ಟಿದ್ದಾರೆ. ಇದರಿಂದ ನಗರದಲ್ಲಿ ಕೂಲಿ ಕಾರ್ಮಿಕರಿಲ್ಲದೆ ಮಾಲೀಕರು ಹಾಗೂ ಗುತ್ತಿಗೆದಾರರು ಪರದಾಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ