ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾಗಿದೆ: ಸಚಿವ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಅಶೋಕ್​​ ಪೋಸ್ಟ್​​

ಸಚಿವ ಬಿ. ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಾಕ್ರೋಶಕ್ಕೆ ಮಂಡಿಯೂರಿ ಶರಣಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದು, ಇದನ್ನು ದಲಿತರ ಜಯ ಎಂದು ಬಣ್ಣಿಸಿದ್ದಾರೆ. ಮಾತುಮಾತಿಗೂ ಬಾಬಾಸಾಹೇಬ್‌ ಅಂಬೇಡ್ಕರ್​ರ ಹೆಸರು ಹೇಳಿಕೊಂಡು ದಲಿತರನ್ನು ತುಳಿದ ಕಾಂಗ್ರೆಸ್‌ಗೆ ದಲಿತರ ಆಕ್ರೋಶದ ಬಿಸಿ ತಟ್ಟಿದೆ ಎಂದವರು ತಿಳಿಸಿದ್ದಾರೆ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾಗಿದೆ: ಸಚಿವ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಅಶೋಕ್​​ ಪೋಸ್ಟ್​​
ಬಿ. ನಾಗೇಂದ್ರ ಮತ್ತು ಆರ್​​. ಅಶೋಕ್​​
Image Credit source: Tv9 Kannada
Edited By:

Updated on: Aug 28, 2026 | 7:50 PM

ಬೆಂಗಳೂರು, ಆಗಸ್ಟ್​​ 28: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಣೆ ಬೆನ್ನಲ್ಲೇ ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾಗಿದೆ ಎಂದು ಎಕ್ಸ್​ ಖಾತೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್​.ಅಶೋಕ್ ಪೋಸ್ಟ್​ ಮಾಡಿದ್ದಾರೆ. ನಾಗೇಂದ್ರ ರಕ್ಷಣೆಗಾಗಿ ವಿಧಾನಮಂಡಲ ಅಧಿವೇಶನವನ್ನೇ ರದ್ದುಪಡಿಸಿದ್ರು. ಕೊನೆಗೂ ಬಿಜೆಪಿಯ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದಿದ್ದಾರೆ. ಬಿಜೆಪಿ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ ಕೂಡಲೇ ಬೆದರಿದ ಕಾಂಗ್ರೆಸ್‌ ರಾಜೀನಾಮೆ ಪಡೆದು ಅಲ್ಪಸ್ವಲ್ಪ ಮಾನ ಉಳಿಸಿಕೊಂಡಿದೆ ಎಂದವರು ಲೇವಡಿ ಮಾಡಿದ್ದಾರೆ.

‘ಇದು ಕೋಟ್ಯಂತರ ದಲಿತರಿಗೆ ಸಿಕ್ಕಿರುವ ದಿಗ್ವಿಜಯ’

ಮಾತುಮಾತಿಗೂ ಬಾಬಾಸಾಹೇಬ್‌ ಅಂಬೇಡ್ಕರ್​ರ ಹೆಸರು ಹೇಳಿಕೊಂಡು ದಲಿತರನ್ನು ತುಳಿದ ಕಾಂಗ್ರೆಸ್‌ಗೆ ದಲಿತರ ಆಕ್ರೋಶದ ಬಿಸಿ ತಟ್ಟಿದೆ. ಕರ್ನಾಟಕದ ರಾಜಕೀಯದಲ್ಲಿ ಭ್ರಷ್ಟರನ್ನು ಸಚಿವರಾಗಿಟ್ಟುಕೊಂಡು ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ಇದು ಕೇವಲ ಬಿ.ನಾಗೇಂದ್ರ ರಾಜೀನಾಮೆಯಲ್ಲ. ಕಾಂಗ್ರೆಸ್ ಸರ್ಕಾರದ ಅಹಂಕಾರದ ಮೇಲೆ ಬಿದ್ದ ಬಲವಾದ ಹೊಡೆತ! ಇದು ಕೋಟ್ಯಂತರ ದಲಿತರಿಗೆ ಸಿಕ್ಕಿರುವ ದಿಗ್ವಿಜಯ ಎಂದು ಅಶೋಕ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಸ್ಥಾನವನ್ನೂ ತ್ಯಜಿಸುವ ಮಾತನಾಡಿದ ಬಿ. ನಾಗೇಂದ್ರ: ಬಿಜೆಪಿಗರಿಗೆ ‘ಕೈ’ ನಾಯಕನಿಂದ ಬಹಿರಂಗ ಸವಾಲು

ನಾಗೇಂದ್ರ ರಾಜೀನಾಮೆಗಾಗಿ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ್ದರಿಂದ ತತ್ತರಿಸಿದ್ದ ಕಾಂಗ್ರೆಸ್​​ಗೆ ಬೇರೆ ಮಾರ್ಗವೇ ಇರಲಿಲ್ಲ. ಇದು ಬಿಜೆಪಿಯ ಗೆಲುವು ಸೋಲಿನ ಪ್ರಶ್ನೆ ಅಲ್ಲ. ದಲಿತ ಸಮುದಾಯಕ್ಕೆ, ಪರಿಶಿಷ್ಟ ವರ್ಗಕ್ಕೆ ಇಟ್ಟಿದ್ದ ಹಣವನ್ನು ದಲಿತ ಮುಖಂಡನ ಮೂಲಕವೇ ಲೂಟಿ ಮಾಡಿಸಿ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಬಳಸಿತ್ತು ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ನಾನು ನಾಗೇಂದ್ರ ರಾಜಿನಾಮೆಯನ್ನ ಸ್ವಾಗತಿಸುತ್ತೇನೆ. ನಾಗೇಂದ್ರ ಬುದ್ದಿವಂತರಾಗಿದ್ದು, ಒಳ್ಳೆ ತೀರ್ಮಾನ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us