ಬೆಂಗಳೂರು ಪ್ರಯಾಣಿಕರೇ ಗಮನಿಸಿ; ಚಂಡಮಾರುತದಿಂದ ನಾಳೆ ಈ ರೈಲುಗಳು ವಿಳಂಬ, 2 ವಿಮಾನ ರದ್ದು!
ನಾಳೆ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತ ಶುರುವಾಗಲಿದೆ. ಹೀಗಾಗಿ, ಈ ಎರಡೂ ರಾಜ್ಯಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಆಂಧ್ರಪ್ರದೇಶದಲ್ಲಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕರ್ನಾಟಕದ ನೆರೆಯ ರಾಜ್ಯವಾದ್ದರಿಂದ ಈ ಚಂಡಮಾರುತದ ಪರಿಣಾಮ ನಮ್ಮ ರಾಜ್ಯದ ಮೇಲೂ ಬೀರುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಆಂಧ್ರದ ಮೂಲಕ ಸಾಗುವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರಿನ 2 ಏರ್ ಇಂಡಿಯಾ ವಿಮಾನ ಕೂಡ ರದ್ದಾಗಲಿದೆ.

ಬೆಂಗಳೂರು, ಅಕ್ಟೋಬರ್ 27: ಚಂಡಮಾರುತದ ಪರಿಣಾಮವಾಗಿ ಕರ್ನಾಟಕದಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೆ ಮಳೆ ಶುರುವಾಗಿದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತ (Cyclone Montha) ಅಪ್ಪಳಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಕರ್ನಾಟಕದಲ್ಲೂ ಮಳೆ ಹೆಚ್ಚಾಗಲಿದ್ದು, ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಆಂಧ್ರದಲ್ಲಿ ನಾಳೆ (ಅಕ್ಟೋಬರ್ 28) ಚಂಡಮಾರುತದಿಂದಾಗಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಜಯವಾಡದಲ್ಲಿ ಏರ್ ಇಂಡಿಯಾ ವಿಮಾನ ಕೂಡ ರದ್ದಾಗಿದೆ. ಇಂಡಿಗೋ ವಿಮಾನ ಕೂಡ ನಾಳೆಯ ಹವಾಮಾನವನ್ನು ನೋಡಿಕೊಂಡು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಇದರ ನಡುವೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು 12 ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿವೆ.
ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಮಧ್ಯ ರೈಲ್ವೆಯಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಇದರ ಅನ್ವಯ, ನಾಳೆ ರೈಲುಗಳು ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಿ ಹೊರಡಲಿವೆ. ಅವುಗಳೆಂದರೆ,
ಇದನ್ನೂ ಓದಿ: ನಾಳೆಯ ಹವಾಮಾನ: ಮೊಂತಾ ಚಂಡಮಾರುತದ ಎಫೆಕ್ಟ್; ರಾಜ್ಯಾದ್ಯಂತ ಯೆಲ್ಲೋ ಅಲರ್ಟ್
1. ರೈಲು ಸಂಖ್ಯೆ 22501 SMVT ಬೆಂಗಳೂರು – ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
2. ರೈಲು ಸಂಖ್ಯೆ 12836 SMVT ಬೆಂಗಳೂರು – ಹಟಿಯಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
3. ರೈಲು ಸಂಖ್ಯೆ 12503 SMVT ಬೆಂಗಳೂರು – ಅಗರ್ತಲಾ ಹಮ್ ಸಫರ್ ಎಕ್ಸ್ಪ್ರೆಸ್.
4. ರೈಲು ಸಂಖ್ಯೆ 12246 SMVT ಬೆಂಗಳೂರು – ಹೌರಾ ಜಂಕ್ಷನ್ ದುರಂತೋ ಎಕ್ಸ್ಪ್ರೆಸ್.
5. ರೈಲು ಸಂಖ್ಯೆ 12864 SMVT ಬೆಂಗಳೂರು – ಹೌರಾ ಜಂಕ್ಷನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
6. ರೈಲು ಸಂಖ್ಯೆ 13433 SMVT ಬೆಂಗಳೂರು – ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್ಪ್ರೆಸ್.
7. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ – ಶಾಲಿಮಾರ್ ಅಮರಾವತಿ ಎಕ್ಸ್ಪ್ರೆಸ್.
ಆಂಧ್ರಪ್ರದೇಶದಲ್ಲಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಶಾಖಪಟ್ಟಣ ಪ್ರದೇಶದಲ್ಲಿ 43 ರೈಲುಗಳು ರದ್ದಾಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 28ರಂದು ವಿಶಾಖಪಟ್ಟಣಂ ಮೂಲಕ ಹಾದುಹೋಗುವ 43 ರೈಲುಗಳನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಘೋಷಿಸಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿ ಹಳಿಗಳು ತೆರವುಗೊಂಡ ನಂತರ ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗುವುದು.
ಇದನ್ನೂ ಓದಿ: ಮೊಂತಾ ಚಂಡಮಾರುತದಿಂದ ಆಂಧ್ರಕ್ಕೆ ರೆಡ್ ಅಲರ್ಟ್; ಕರಾವಳಿ ಜನರ ಸ್ಥಳಾಂತರಕ್ಕೆ ಸಿಎಂ ನಾಯ್ಡು ಆದೇಶ
ಬೆಂಗಳೂರಿನ ವಿಮಾನವೂ ರದ್ದು:
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಜಯವಾಡದಿಂದ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಅಕ್ಟೋಬರ್ 28ರಂದು ವಿಜಯವಾಡ ವಿಮಾನ ನಿಲ್ದಾಣದಿಂದ ನಿಗದಿಯಾಗಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಬೆಂಗಳೂರಿನ 2 ವಿಮಾನಗಳೂ ಸೇರಿವೆ. IX 2819 (ವಿಜಾಗ್-ವಿಜಯವಾಡ), IX 2862 (ವಿಜಯವಾಡ-ಹೈದರಾಬಾದ್), IX 2875 (ಬೆಂಗಳೂರು-ವಿಜಯವಾಡ), IX 2876 (ವಿಜಯವಾಡ-ಬೆಂಗಳೂರು), IX 976 (ಶಾರ್ಜಾ-ವಿಜಯವಾಡ), IX 975 (ವಿಜಯವಾಡ-ಶಾರ್ಜಾ), IX 2743 (ಹೈದರಾಬಾದ್-ವಿಜಯವಾಡ), ಮತ್ತು IX 2743 (ವಿಜಯವಾಡ-ವಿಜಯವಾಡ) ವಿಮಾನಗಳ ಹಾರಾಟ ನಾಳೆ ಸ್ಥಗಿತಗೊಳ್ಳಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Mon, 27 October 25




