ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಹೇಗಾಯ್ತು? ಏನೆಲ್ಲಾ ವಿಶೇಷ?

ಬೆಂಗಳೂರಿನ ಪಾಲಿಗೆ ಇಂದು ಮರೆಯಲಾಗದ ದಿನ ಅಂತಲೇ ಹೇಳಬಹುದು. ನಾಡಪ್ರಭು ಕೆಂಪೇಗೌಡರ ಜಯಂತಿ ಒಂದೆಡೆಯಾದರೆ, ಈ ದಿನ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳೂ ವಿಶೇಷ ಹಾಗೂ ಅವಿಸ್ಮರಣೀಯ ಆಗಿತ್ತು. ಮತ್ತೊಂದು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಇದಾಗಿದೆ ಎನ್ನಬಹುದು. ಹಾಗಾದ್ರೆ, ಕಾರ್ಯಕ್ರಮ ಹೇಗಿತ್ತು? ಏನೆಲ್ಲಾ ವಿಶೇಷ ಎನ್ನುವ ವಿವರ ಇಲ್ಲಿದೆ.

ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಹೇಗಾಯ್ತು? ಏನೆಲ್ಲಾ ವಿಶೇಷ?
Dk Shivakumar
Edited By:

Updated on: Jun 27, 2026 | 10:11 PM

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ
  • ಎಸ್ ಎಂ ಕೃಷ್ಣ ದಶ ಪಥ ರಸ್ತೆ ಕೊನೆಗೂ ಜನರಿಗೆ ಮುಕ್ತ
  • ಕೆಂಪೇಗೌಡರ ಜಯಂತಿಯನ್ನು ವಿಶೇಷವಾಗಿಸಿದ ಬಿಡಿಎ, 15 ಲಕ್ಷ ಸಸಿ ನೆಟ್ಟು ಮಹತ್ತರ ಮೈಲಿಗಲ್ಲು

ಬೆಂಗಳೂರು, (ಜೂನ್ 27): ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ಜೂನ್ 27) ನಾಡಪ್ರಭು ಕೆಂಪೇಗೌಡರ ಜಯಂತಿ (Kempegowda Jayanti) ಅಂಗವಾಗಿ ಬೆಂಗಳೂರಿನ (Bengaluru) ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲ್ಲದೇ ಇದರೊಂದಿಗೆ ಬೆಂಗಳೂರಿನ ವಾಹನ ಸವಾರರ ಬಹು ನಿರೀಕ್ಷಿತ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆ ಸಂಪರ್ಕಿಸುವ ಎಸ್ ಎಂ ಕೃಷ್ಣ ದಶ ಪಥ ರಸ್ತೆ ಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದ್ದಾರೆ. ಹೀಗೆ ಡಿಕೆ ಶಿವಕುಮಾರ್ ಅವರು ಇಂದು ಒಂದೇ ದಿನ ಸಾಲ ಸಾಲು ಕಾರ್ಯಕ್ರಮಗಳಲ್ಲಿ ಭಾಗಹಿಸಿದ್ದು, ಇದರೊಂದಿಗೆ ಅವರು ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮವಾಗಿದೆ.

ಎಸ್ ಎಂ ಕೃಷ್ಣ ದಶ ಪಥ ರಸ್ತೆ ಉದ್ಘಾಟನೆ

ಬೆಂಗಳೂರಿನ ವಾಹನ ಸವಾರರ ಬಹು ನಿರೀಕ್ಷಿತ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆ ಸಂಪರ್ಕಿಸುವ ಎಸ್ ಎಂ ಕೃಷ್ಣ ದಶ ಪಥ ರಸ್ತೆ ಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದ್ದಾರೆ. ಕಡಬಗೆರೆ ಕ್ರಾಸ್ ನಲ್ಲಿ ರಸ್ತೆಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು. ನಾಡಪ್ರಭು ಕೆಂಪೇಗೌಡರ ಜಯಂತಿಯ ದಿನದಂದು, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಹೆಸರಿನ ನೂತನ ದಶಪಥ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಕಡಬಗೆರೆ ಕ್ರಾಸ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ಭವ್ಯ ರಸ್ತೆಯು ಸಂಪೂರ್ಣವಾಗಿ ಟೋಲ್‌ ಮುಕ್ತವಾಗಿದೆ. ಬೆಂಗಳೂರಿನ ಮೂಲಸೌಕರ್ಯಕ್ಕೆ ದೊಡ್ಡ ಕೊಡುಗೆಯಾಗಿರುವ ಈ ರಸ್ತೆ, ನಗರದ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲಿದೆ.

ಎಸ್ ಎಂ ಕೃಷ್ಣ ದಶ ಪಥ ರಸ್ತೆ  ಬಗ್ಗೆ ಮಾಹಿತಿ


ಕಡಬಗೆರೆಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ನಡುವಿನ ನೂತನ ಹೆದ್ದಾರಿಯು 10.7 ಕಿ.ಮೀ. ಉದ್ದ ಹಾಗೂ 100 ಮೀಟರ್ ಅಗಲದ ಕಾರಿಡಾರ್ ಇದಾಗಿದೆ. ಸಿಗ್ನಲ್ ಫ್ರೀ ಮತ್ತು ಟೋಲ್ ಮುಕ್ತವಾಗಿದೆ. ಸುಮಾರು 631 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ರಸ್ತೆಯನ್ನು ನಿರ್ಮಿಸಿದೆ. ರಸ್ತೆಯ ಎರಡು ಬದಿಗಳಲ್ಲಿ 27 ಮೀಟರ್ ಹಸಿರು ವನಸಿರಿ ನಿರ್ಮಿಸಲಾಗಿದೆ. ಭವಿಷ್ಯದ ಮೆಟ್ರೋ ಯೋಜನೆಗಾಗಿ 3 ಮೀಟರ್ ಮಧ್ಯದ ವಿಭಜಕ ಹೊಂದಲಾಗಿದೆ. ಕಡಬಗೆರೆ ಕ್ರಾಸ್​ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಕ್ಕೆ ನೇರ ಸಂಪರ್ಕವಿದೆ. ನಾಡಪ್ರಭು ಕೆಂಪೇಗೌಡ ಲೇಔಟ್ ಎಲ್ಲಾ 9 ಬ್ಲಾಕ್​ಗಳನ್ನ ಜೋಡಿಸುವ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿ 3 ಅಂಡರ್ ಪಾಸ್, 11 ಸೇತುವೆಗಳು ಮತ್ತು 270 ಮೀಟರ್ ಸುರಂಗ ಮಾರ್ಗವಿದೆ. ಸುಸಜ್ಜಿತ ಸರ್ವೀಸ್ ರಸ್ತೆಗಳು ಹಾಗೂ ಸ್ಲೈಕ್ಲಿಂಗ್​ಗಾಗಿ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲಾಗಿದೆ.

ಮ್ಯಾರಥಾನ್ ಆಯೋಜನೆ

ಕಾರ್ಯಕ್ರಮದಲ್ಲಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮಾ ಕೃಷ್ಣ, ಡಿಸಿಎಂ ಜಿ ಪರಮೇಶ್ವರ್, ಸಚಿವರಾದ ಕೃಷ್ಣ ಬೈರೇಗೌಡ, ಮುನಿಯಪ್ಪ, ಶಾಸಕರಾದ ಎನ್ ಎ ಹ್ಯಾರಿಸ್, HC ಬಾಲಕೃಷ್ಣ, ST ಸೋಮಶೇಖರ್ ಸೇರಿ ಹಲವು ಗಣ್ಯರು ಉಪಸ್ಥಿತಿತರಿದ್ದರು. ಇನ್ನು ರಸ್ತೆ ಉದ್ಘಾಟನೆಗೆ ಮಾತ್ರ ಕಾರ್ಯಕ್ರಮ ಸೀಮಿತವಾಗಿರಲಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ 10 k ಹಾಗೂ 5 k ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಂದಿ ಸಕತ್ ಜೋಶ್ ನೊಂದಿಗೆ ಮ್ಯಾರಥಾನ್ ನಲ್ಲಿ ಭಾಗಿಯಾಗಿದ್ದರು.

15 ಲಕ್ಷ ಸಸಿಗಳನ್ನು ನೆಡುವ ಕಾರ್ಯ

ಮತ್ತೊಂದು ಮಹತ್ವದ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೇ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡುವ ಕಾರ್ಯ. ಕೆಂಪೇಗೌಡ ಲೇಔಟ್ ನ 17 ಕಡೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಉಳಿದಂತೆ ಬಿಡಿಎ ಗೆ ಸೇರಿದ ಹಲವು ಲೇಔಟ್ ಗಳಲ್ಲೂ ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ. ಕಾಲೇಜು ಯುವಕ ಯುವತಿಯರು, ಮಕ್ಕಳು, ಬಿಬಿಎಂಪಿ ಪೌರಕಾರ್ಮಿಕರು, ಸ್ವಯಂ ಸೇವಕರು ಸೇರಿ 50 ಸಾವಿರಕ್ಕೂ ಹೆಚ್ಚು ಮಂದಿ ಈ ಪರಿಸರ ಉಳಿಸುವ ಮಹತ್ಕಾರ್ಯಕ್ಕೆ ಸಾಕ್ಷಿಯಾದರು.


ಇನ್ನು ದಶ ಪಥ ರಸ್ತೆಗೆ ಯಾವುದೇ ತಕರಾರು ಇಲ್ಲದೆ ಭೂಮಿ ಕೊಟ್ಟ ಸ್ಥಳೀಯರ ಸಹಾಯವನ್ನು ನೆನೆಯುವ ಕೆಲಸ ಕೂಡ ಬಿಡಿಎ ಮಾಡಿದೆ. ರಸ್ತೆಯ ಜಂಕ್ಷನ್ ಗಳಲ್ಲಿ ವಾಲ್ ಆಫ್ ಗ್ರಾಟಿಟ್ಯುಡ್ ಮೂಲಕ ಅವರ ಹೆಸರನ್ನು ಹಾಕಿ ಕೃತಜ್ಞತೆ ಸಲ್ಲಿಸಿದೆ. ಒಟ್ಟಾರೆ ಡಿಕೆ ಶಿವಕುಮಾರ್ ಅವರು ಸಿಎಂ ಆದ ಬಳಿಕ ನಡೆದ ಬೃಹತ್ ಕಾರ್ಯಕ್ರಮ ಇದು ಅಂತಲೇ ಹೇಳಬಹುದು. ಒಟ್ಟಾರೆ ಎಸ್ ಎಂ ಕೃಷ್ಣ ರಸ್ತೆ ನಗರದ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಅನುಮಾನ ಇಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us