AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಟ್​ಪಾತ್ ತೆರವು ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಮುಂದಾದ ಜಿಬಿಎ

ಬೆಂಗಳೂರು ನಗರದ ಸೌಂದರ್ಯವನ್ನು ಮರುಸ್ಥಾಪಿಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸಲು ರಸ್ತೆಬದಿಯ ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ವಾರಿಸುದಾರರಿಲ್ಲದ ವಾಹನಗಳನ್ನು ತೆರವುಗೊಳಿಸುವ ಬೃಹತ್ ಅಭಿಯಾನಕ್ಕೆ ಜಿಬಿಎ (GBA) ಸಜ್ಜಾಗಿದೆ. ಇದರೊಂದಿಗೆ, ಫುಟ್​ಪಾತ್ ತೆರವು ಕಾರ್ಯಾಚರಣೆ ಬೆನ್ನಲ್ಲೇ ಜಿಬಿಎ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾದಂತಾಗಿದೆ.

ಫುಟ್​ಪಾತ್ ತೆರವು ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಮುಂದಾದ ಜಿಬಿಎ
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on: Jul 08, 2026 | 8:48 AM

Share

ಮುಖ್ಯಾಂಶಗಳು

  • ವಾರದೊಳಗೆ ಜಿಬಿಎ ಸ್ವಚ್ಛತಾ ಆಂದೋಲನ ಆರಂಭ
  • ಕಟ್ಟಡ ತ್ಯಾಜ್ಯ, ಹಳೇ ವಾಹನಗಳ ತೆರವು
  • ಹೊರ ವಲಯಗಳ ಮೇಲೆ ವಿಶೇಷ ನಿಗಾ

ಬೆಂಗಳೂರು, ಜುಲೈ 8: ಬೆಂಗಳೂರು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ರಸ್ತೆಬದಿಯ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಗೂ ವರ್ಷಗಳಿಂದ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ವಾರಿಸುದಾರರಿಲ್ಲದ ಹಳೇ ವಾಹನಗಳನ್ನು ಮುಕ್ತಿಗೊಳಿಸಲು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಸಜ್ಜಾಗಿದೆ. ನಗರದಾದ್ಯಂತ ಹಮ್ಮಿಕೊಳ್ಳಲಿರುವ ಈ ವಿಶೇಷ ಸ್ವಚ್ಛತಾ ಆಂದೋಲನವು ಇನ್ನು ಒಂದು ವಾರದೊಳಗೆ ಅಧಿಕೃತವಾಗಿ ಚಾಲನೆ ಪಡೆಯುವ ನಿರೀಕ್ಷೆಯಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಜಿಬಿಎ ಹಿರಿಯ ಅಧಿಕಾರಿಗಳು ಹಾಗೂ ನಗರದ 5 ಕಾರ್ಪೊರೇಷನ್‌ಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಆಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.

ಮೊದಲು ನೋಟಿಸ್, ಬಳಿಕ ಜಪ್ತಿ

ಈ ಸ್ವಚ್ಛತಾ ಕಾರ್ಯಾಚರಣೆಯನ್ನು ಮುಂಬರುವ ಶುಕ್ರವಾರದಿಂದಲೇ ಆರಂಭಿಸಲು ಮೊದಲಿಗೆ ಯೋಜಿಸಲಾಗಿತ್ತಾದರೂ, ಸಾರ್ವಜನಿಕರಿಗೆ ನೋಟಿಸ್ ಜಾರಿ ಮಾಡುವುದು, ಜಪ್ತಿ ಮಾಡಿದ ತ್ಯಾಜ್ಯ ಮತ್ತು ವಾಹನಗಳ ವಿಲೇವಾರಿಗೆ ಜಾಗ ಗುರುತಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿರುವುದರಿಂದ ಉದ್ಘಾಟನೆಯ ಅಧಿಕೃತ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.

‘ನಮ್ಮ ಮೂಲ ಉದ್ದೇಶ ಬೆಂಗಳೂರನ್ನು ಸಂಪೂರ್ಣ ಸ್ವಚ್ಛವಾಗಿ ಕಾಣುವಂತೆ ಮಾಡುವುದು. ಒಮ್ಮೆ ಎಲ್ಲಾದರೂ ಕಟ್ಟಡದ ತ್ಯಾಜ್ಯ ಬಿದ್ದರೆ, ಅಲ್ಲಿ ಕಸದ ರಾಶಿ ಬೀಳುವುದು ಸಾಮಾನ್ಯವಾಗುತ್ತದೆ. ನಗರದ ಕೇಂದ್ರ ಭಾಗಗಳಿಗಿಂತ ಹೊರ ವಲಯಗಳಲ್ಲಿ (Outer Areas) ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ’ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಬಿಎಂಆರ್‌ಸಿಎಲ್, ರೈಲ್ವೆ ಇಲಾಖೆಗೂ ಸೂಚನೆ

ರಸ್ತೆಬದಿಯ ತ್ಯಾಜ್ಯ ಹಾಗೂ ಬೆಳೆದಿರುವ ಕಳೆ ಗಿಡಗಳ ತೆರವಿನ ಜೊತೆಗೆ ನಮ್ಮ ಮೆಟ್ರೋ, ಕೆ-ರೈಡ್ ಮತ್ತು ರೈಲ್ವೆ ಇಲಾಖೆಗಳಿಗೂ ಜಿಬಿಎ ಕಠಿಣ ನಿರ್ದೇಶನ ನೀಡಿದೆ. ಮೂಲಸೌಕರ್ಯ ಕಾಮಗಾರಿಗಳು ಮುಗಿದ ಮೇಲೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಕಬ್ಬಿಣದ ಸಾಮಗ್ರಿಗಳು ಮತ್ತು ನಿರ್ಮಾಣ ಉಪಕರಣಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ರೈಲ್ವೆ ಅಧಿಕಾರಿಗಳೊಂದಿಗೆ ಶುಕ್ರವಾರ ಮತ್ತೊಂದು ಪ್ರತ್ಯೇಕ ಸಮನ್ವಯ ಸಭೆಯನ್ನು ಕರೆಯಲಾಗಿದೆ.

ನಗರದಲ್ಲಿದೆ 1,518 ವಾರಸುದಾರರಿಲ್ಲದ ವಾಹನಗಳು!

ನಗರದ ರಸ್ತೆಬದಿಗಳಲ್ಲಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ದೂಳು ಹಿಡಿದು ಬಿದ್ದಿರುವ ಒಟ್ಟು 1,518 ವಾರಸುದಾರರಿಲ್ಲದ ವಾಹನಗಳನ್ನು ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ. ಈ ಪೈಕಿ ಸೆಂಟ್ರಲ್ ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 403, ಪೂರ್ವ ವಲಯದಲ್ಲಿ 92, ಉತ್ತರ ವಲಯದಲ್ಲಿ 209, ದಕ್ಷಿಣ ವಲಯದಲ್ಲಿ 383 ಮತ್ತು ಪಶ್ಚಿಮ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 399 ವಾಹನಗಳು ಪತ್ತೆಯಾಗಿದ್ದು, ಇವೆಲ್ಲವನ್ನೂ ಶೀಘ್ರದಲ್ಲೇ ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us