ವೀಕೆಂಡ್ ಮೂಡನಲ್ಲಿದ್ದ ಜನರಿಗೆ ತಣ್ಣೀರು ಎರಚಿದ ವರುಣ: ಬೆಂಗಳೂರಿನಲ್ಲಿ ಜೋರು ಮಳೆ
Bengaluru Rain: ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ಜನರು ಪರದಾಡುವಂತಾಗಿದೆ. ಹವಾಮಾನ ಇಲಾಖೆ ಮುಂದಿನ ಮೂರು ಗಂಟೆಗಳ ಕಾಲ ಮಳೆ ಮುಂದುವರೆಯುವುದಾಗಿ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಬೆಂಗಳೂರು, ಆಗಸ್ಟ್ 10: ಬೆಂಗಳೂರು (Bengaluru) ಮಹಾನಗರದ ಹಲವೆಡೆ ರವಿವಾರ (ಆ.10) ಸಂಜೆ ಧಾರಾಕಾರ ಮಳೆಯಾಗಿದೆ. ಸುರಿದ ಮಳೆಗೆ (Rain) ಬೆಂಗಳೂರು ಮಹಾನಗರ ತಂಪಾಗಿದೆ. ಆದರೆ, ವೀಕೆಂಡ್ ಅಂತ ಎಂಜಾಯ್ ಮಾಡಲು ಹೊರಗಡೆ ಬಂದಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು, ತೊಯ್ದು ನಿರಾಸೆಯಿಂದ ಮನೆಗಳತ್ತ ತೆರಳಿದರು. ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್, ಶಾಂತಿನಗರ, ಜಯನಗರ, ವಿಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಸದಾಶಿವನಗರ, ಹೆಬ್ಬಾಳ, ಬಸವನಗುಡಿ, ಬನಶಂಕರಿ, ಚಂದ್ರಲೇಔಟ್, ಕೋರಮಂಗಲ, ಕೋಣನಕುಂಟೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಅಲ್ಲದೆ, ವಿಧಾನಸೌಧ, ಮೆಜೆಸ್ಟಿಕ್, ಕುಮಾರಕೃಪಾ ರಸ್ತೆ, ರೇಸ್ ಕೋರ್ಸ್, ವಿಂಡ್ಸರ್ ಮ್ಯಾನರ್, ಕಾರ್ಪೋರೇಶನ್ ಸರ್ಕಲ್ನ ಸುತ್ತಮುತ್ತ ಕೂಡ ಜೋರು ಮಳೆಯಾಯಿತು. ದಿಢೀರನೆ ಮಳೆ ಬಂದಿದ್ದರಿಂದ ಜನರು ಬಸ್ ನಿಲ್ದಾಣ, ಅಂಗಡಿಗಳ ಎದುರು ಕೆಲ ಗಂಟೆ ಆಸರೆ ಪಡೆದರು. ಇನ್ನು, ಛತ್ರಿ ಹಿಡಿದು ಜನರು ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಮಳೆಯಿಂದ ಸ್ಕೈ ವಾಕ್, ಬ್ರಿಡ್ಜ್ಗಳ ಕೆಳಗೆ ಬೈಕ್ ಸವಾರರು ಆಸರೆ ಪಡೆದುಕೊಂಡರು.
ನಿಧಾನಗತಿ ಸಂಚಾರಕ್ಕೆ ಸೂಚನೆ
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆ ಬಂದಿರುವುದರಿಂದ ನೀರು ರಸ್ತೆ ಮೇಲೆ ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ, ಬೆಂಗಳೂರು ಸಂಚಾರಿ ಪೊಲೀಸರು ನಿಧಾನವಾಗಿ ಸಂಚಾರ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ರಾಮಮೂರ್ತಿ ನಗರ ಸಿಗ್ನಲ್ ಬಳಿ ನೀರು ನಿಂತಿದೆ. ಓಎಂಆರ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಆರ್ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ. ಹಾಗೇ ವಡ್ಡರಪಾಳ್ಯದಿಂದ ಹೆಣ್ಣೂರು ಕಡೆಗೆ ಮತ್ತು ವಡ್ಡರಪಾಳ್ಯದಿಂದ ಗೆದ್ದಲಹಳ್ಳಿ ಎರಡೂ ಕಡೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಟ್ವಿಟರ್ ಪೋಸ್ಟ್
ಸಂಚಾರ ಸಲಹೆ ಓ ಎಂ ಆರ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಆರ್ ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಸಾರ್ವಜನಿಕರ ಮಾಹಿತಿಗಾಗಿ. pic.twitter.com/37yV9IOfxy
— K.R.PURA TRAFFIC POLICE.BENGALURU. (@KRPURATRAFFIC) August 10, 2025
ಎಲ್ಲೆಲ್ಲಿ ನಿಧಾನಗತಿ ಸಂಚಾರ
- ಥಣಿಸಂದ್ರಯಿಂದ ನಾಗವಾರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ.
- ನಾಗವಾರ ಜಂಕ್ಷನ್ ಯಿಂದ ಥಣಿಸಂದ್ರ ಕಡೆಗೆ ನಿಧಾನಗತಿಯ ಸಂಚಾರವಿದೆ.
- ಸಿಟಿ ಮಾರ್ಕೆಟ್ ವೃತ್ತ ದಿಂದ ಎಸ್ಜೆಪಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿದೆ.
- ಬಾಗಲೂರು ಕ್ರಾಸ್ ಯಿಂದ IAF ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ.
- ಹೆಬ್ಬಾಳ ದಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರವಿದೆ.
- ಹೆಬ್ಬಾಳದಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ.
- ದೇವಿನಗರ ಯಿಂದ ಕುವೆಂಪು ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿದೆ.
- ಕುವೆಂಪು ವೃತ್ತದಿಂದ ದೇವಿನಗರ ಕಡೆಗೆ ನಿಧಾನಗತಿಯ ಸಂಚಾರವಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಮಳೆ, ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಮುಂದಿನ 3 ಗಂಟೆ ಹಲವು ಜಿಲ್ಲೆಗಳಿಗೆ ಅಲರ್ಟ್
ಮುಂದಿನ 3 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆವರೆಗೂ ಕರಾವಳಿ ಹೊರತುಪಡಿಸಿ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



