ಆನಂದ್ ಸಿಂಗ್ ಅರಣ್ಯ ಖಾತೆಯಲ್ಲಿ ಏನು ಕನಸು ಕಂಡಿದ್ರೋ ಗೊತ್ತಿಲ್ಲ; ಯಾವ ಖಾತೆಯಾದ್ರೂ ಅದು ಸರ್ಕಾರದ ಕೆಲಸ: ಬಿ.ಸಿ.ಪಾಟೀಲ್
ಸಚಿವ ಆನಂದ್ ಸಿಂಗ್ ಜತೆ ನಾನು ಚರ್ಚೆ ಮಾಡಿದ್ದೇನೆ. ಸದ್ಯದಲ್ಲಿಯೇ ಎಲ್ಲಾ ಅಸಮಾಧಾನ ಬಗೆಹರಿಯುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಕಚೇರಿಗೆ ಪೂಜೆ ಮಾಡಿ, ಅಧಿಕೃತವಾಗಿ ಕೆಲಸ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಕೆಲಸವನ್ನು ಆರಂಭಿಸಿದ್ದೇನೆ. ನನಗೆ ಯಾವ ಖಾತೆ ಕೊಡುತ್ತೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕೇಳಿದ್ದೆ. ಕೃಷಿಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ ಅಂದಿದ್ದರು. ಸಂತೋಷದಿಂದ ನಾನು ಕೃಷಿ ಖಾತೆ ವಹಿಸಿಕೊಂಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ನಾವು ಯಾವ ಖಾತೆಯಲ್ಲಿದ್ದರೂ ಅದು ಸರ್ಕಾರದ ಕೆಲಸ. ಆನಂದ್ ಸಿಂಗ್ಗೆ ಮೊದಲು ದೊಡ್ಡ ಖಾತೆಯನ್ನು ಕೊಟ್ಟಿದ್ದರು. ಆ ಖಾತೆಯನ್ನು ಕಿತ್ತುಕೊಂಡಿದ್ದಕ್ಕೆ ಅಸಮಾಧಾನವಾಗಿದೆ. ಖಾತೆ ದೊಡ್ಡದು ಅಂದರೆ ಹೆಚ್ಚು ಕೆಲಸ ಇರುತ್ತದೆ. ಅರಣ್ಯ ಖಾತೆ ಬಗ್ಗೆ ಏನು ಕನಸು ಕಂಡಿದ್ದರೆಂದು ಗೊತ್ತಿಲ್ಲ. 115+17 ಎರಡೂ ಸೇರಿದ್ದಕ್ಕೆ ಸರ್ಕಾರ ಸುಸೂತ್ರವಾಗಿದೆ. ಎರಡಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜವಾಗಿ ಇರುತ್ತದೆ. ಸಿಎಂ ಬೊಮ್ಮಾಯಿ ಅಸಮಾಧಾನವನ್ನು ಸರಿಪಡಿಸುತ್ತಾರೆ. ಎಲ್ಲದಕ್ಕೂ ಸದ್ಯದಲ್ಲಿಯೇ ತೆರೆಬೀಳುತ್ತದೆ. ನಮ್ಮ ಮಿತ್ರಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಸಚಿವ ಆನಂದ್ ಸಿಂಗ್ ಜತೆ ನಾನು ಚರ್ಚೆ ಮಾಡಿದ್ದೇನೆ. ಸದ್ಯದಲ್ಲಿಯೇ ಎಲ್ಲಾ ಅಸಮಾಧಾನ ಬಗೆಹರಿಯುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಳಿಕ ಸಚಿವರು ವಿಜಯೋತ್ಸವ ಮಾಡುತ್ತಿದ್ದಾರೆಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ನಾವು ಯಾವುದೇ ವಿಜಯೋತ್ಸವವನ್ನು ಮಾಡಿಲ್ಲ. ನಾವು ಸಚಿವರಾಗಿದ್ದಕ್ಕೆ ಸಹಜವಾಗಿ ಜನ ಖುಷಿ ಪಟ್ಟಿದ್ದಾರೆ. ಸಂಭ್ರಮಾಚರಣೆ ಖುಷಿಯಿಂದ ಆಗಿದೆ ಏನೂ ಮಾಡುವುದಕ್ಕೆ ಆಗಲ್ಲ. ಅವರು ಖುಷಿಯಿಂದ ಬಂದಾಗ ಹೊಡೆದು ಓಡಿಸಲು ಆಗಲ್ಲ. ಜನರಿಂದ ಆಯ್ಕೆಯಾದವರು, ಅವರ ಪ್ರೀತಿ ತಡೆಯಬಾರದು. ವಿಪಕ್ಷದಲ್ಲಿ ಇದ್ದವರು ಟೀಕೆ ಮಾಡುವುದು ಸಹಜ ಎಂದು ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಸಚಿವ ಬಿಸಿ ಪಾಟೀಲ್ ಕೋಲಾರದಲ್ಲಿ ರೈತರೊಂದಿಗೆ ಏಕ್ ದಿನ್ ಕಾ ಸುಲ್ತಾನ್
ಪ್ರಜಾಪ್ರಭುತ್ವ ಜನರಿಂದ ನಡೆಯುತ್ತದೆಯೇ ಹೊರತು ಮಠಾಧೀಶರಿಂದಲ್ಲ ಎಂದ ಮಾಜಿ ಸಚಿವ ಬಿ ಸಿ ಪಾಟೀಲ್
Published On - 12:16 pm, Mon, 9 August 21





